ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕಾಂಗ್ರೆಸ್ ನಾಯಕರನ್ನು ಕಂಡಲ್ಲಿ ಹೊಡೆಯಿರಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ವಿರುದ್ಧ ಪೊಲೀಸರು ಸುಮೊಟೊ ಕೇಸ್ ದಾಖಲಿಸಿಕೊಳ್ಳಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್ ಆಗ್ರಹಿಸಿದರು.ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕೆ.ಎಸ್.ಈಶ್ವರಪ್ಪನವರು ಪ್ರಚೋದನಕಾರಿ ಭಾಷಣ ಮಾಡುವುದನ್ನು ಇನ್ನು ಬಿಟ್ಟಂತೆ ಕಂಡುಬಂದಿಲ್ಲ. ಅವರ ರಾಜಕೀಯ ದ್ವೇಷದ ಮಾತುಗಳು ಈಗಾಗಲೇ ಜನಪ್ರಿಯವಾಗಿವೆ. ಹೊಡೆಯಿರಿ, ಕಡಿಯಿರಿ, ಬಡಿಯಿರಿ ಎಂಬುವುದೇ ಅವರ ಬಾಯಿಯಿಂದ ಬರುವ ಮಾತುಗಳಾಗಿವೆ. ಈಶ್ವರಪ್ಪ ಇನ್ನಾದರೂ ನಾಲಿಗೆಯನ್ನು ಬಿಗಿ ಹಿಡಿದು ಮಾತನಾಡಬೇಕು ಎಂದರು.ಪ್ರತಿದಿನವು ಮುಸ್ಲಿಂ ಬಗ್ಗೆ ಮಾತನಾಡದಿದ್ದರೆ ಅವರಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ಅದೇನೇ ಇರಲಿ ಇದುವರೆಗೂ ಮುಸ್ಲಿಂರ ಬಗ್ಗೆ ಮಾತನಾಡುತ್ತಿದ್ದ ಅವರು ಈಗ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರನ್ನು ಹೊಡೆಯುತ್ತಾರೆ, ನಾವು ದಂಗೆ ಹೇಳುತ್ತೇವೆ ಎಂದು ಹೇಳುತ್ತಾರೆ. ಇವರ ವಿರುದ್ಧ ಪೋಲೀಸರು ಎಫ್.ಐ.ಆರ್. ದಾಖಲಿಸಿಕೊಳ್ಳಬೇಕು. ಇವರಿಗೆ ಬುದ್ಧಿ ಕಲಿಸದಿದ್ದರೆ ಮತ್ತಷ್ಟು ಮಾತನಾಡುತ್ತಾರೆ. ಜಿಲ್ಲೆಯ ಕಾಂಗ್ರೆಸ್ ನಾಯಕರು ಕೂಡ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಮಾತನಾಡಿ, ನೆಹರೂ ಅವರು ಈ ದೇಶದ ಮೊದಲ ಪ್ರಧಾನಮಂತ್ರಿಯಾಗಿದ್ದವರು. ಅವರು ಪ್ರಧಾನಿಯಾದ ಮೇಲೆ ಭಾರತದ ಭವಿಷ್ಯವನ್ನು ಬರೆದವರು, ಪಂಚವಾರ್ಷಿಕ ಯೋಜನೆಯ ಮೂಲಕ ಅಭಿವೃದ್ಧಿಯ ಪಥದಲ್ಲಿ ದೇಶವನ್ನು ಕೊಂಡೊಯ್ಯದರು ಎಂದರು.ಕೃಷಿ, ಕೈಗಾರಿಕೆ, ಅಣೆಕಟ್ಟುಗಳನ್ನು ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲಿಸುತ್ತದೆ. ಜೈಲಿನಲ್ಲಿ 13 ವರ್ಷಗಳ ಕಾಲ ಇದ್ದವರು. ಅದರಲ್ಲೂ ನೆಹರೂ ಕುಟುಂಬ ಕಾಂಗ್ರೆಸ್ನ ತಾಯಿಬೇರು. ಅವರ ಆದರ್ಶಗಳನ್ನು ನಾವು ಪಾಲಿಸುವ ಮೂಲಕ ದೇಶಕ್ಕಾಗಿ ದುಡಿಯಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಎಸ್. ರವಿಕುಮಾರ್, ಸಿ.ಎಸ್. ಚಂದ್ರಭೂಪಾಲ್, ಕಲೀಂ ಪಾಷಾ, ಯು. ಶಿವಾನಂದ್, ಎಸ್.ಟಿ. ಹಾಲಪ್ಪ, ಶಿವಕುಮಾರ್, ಎಸ್.ಟಿ. ಚಂದ್ರಶೇಖರ್, ಜಿ.ಡಿ. ಮಂಜುನಾಥ್, ಮಂಜುನಾಥ್ ಬಾಬು, ಕಲಗೋಡು ರತ್ನಾಕರ್, ಮಧು, ಶಿವಣ್ಣ, ಗಂಗಾಧರ್, ಶಿ.ಜು. ಪಾಶ, ಸ್ಟೆಲಾಮಾರ್ಟಿನ್, ವಿಜಯಲಕ್ಷ್ಮೀ ಪಾಟೀಲ್ ಸೇರಿದಂತೆ ಹಲವರಿದ್ದರು.