ಅಂತಿಮ ಅಧಿಸೂಚನೆ ಹೊರಡಿಸುವಂತೆ ಸಿಎಂ ಡಿಕೆಶಿಗೆ ರೈತರ ನಿಯೋಗ ಮನವಿ
- ಬೇರೆ ಕಡೆಯಿಂದ ಜನರನ್ನು ಕರೆತಂದು ದಿನವೂ ಪಾದಯಾತ್ರೆ ಮಾಡಲಿ- ಭೂಮಿ ಕೊಡಲು ಸಿದ್ಧ, ರೆಡ್ ಜೋನ್ನಿಂದ ಮುಕ್ತಿ ಕೊಡಿಸುವಂತೆ ಒತ್ತಾಯ ಕನ್ನಡಪ್ರಭ ವಾರ್ತೆ ರಾಮನಗರ
ನಮಗೆ ರೆಡ್ ಜೋನ್ ನಿಂದ ಮುಕ್ತಿ ಬೇಕು. ಬಿಡದಿ ಟೌನ್ ಶಿಪ್ ಗೆ ನಮ್ಮ ಭೂಮಿ ನೀಡಲು ಸಿದ್ಧರಿದ್ದೇವೆ. ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ ನಮ್ಮ ಸಂಕಷ್ಟಕ್ಕೆ ನೆರವಾಗಬೇಕು ಎಂದು ಬಿಡದಿಯ ಸುತ್ತಮುತ್ತಲ ರೈತರ ನಿಯೋಗ ಮಂಗಳವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ಮಾಡಿ ಮನವಿ ಸಲ್ಲಿಸಿತು.ವಿಧಾನಸೌಧದಲ್ಲಿ ಮುಖ್ಯಮಂತ್ರಿ ಭೇಟಿ ಮಾಡಿದ ನಿಯೋಗ ತಕ್ಷಣ ರೆಡ್ ಜೋನ್ ತೆಗೆದು ಹಾಕಬೇಕು. ನಾವು ಜಮೀನು ಕೊಡಲು ಸಿದ್ಧ. ತಕ್ಷಣವೇ ಪರಿಹಾರ ಕೊಡಿ ಎಂದು ಒತ್ತಾಯಿಸಿದರು.
ಬೈರಮಂಗಲದ ರೈತ ಸುನೀಲ್ ಮಾತನಾಡಿ, 20ವರ್ಷಗಳಿಂದ ನಾವು ರೆಡ್ ಜೋನ್ನಿಂದ ಸಂಕಷ್ಟ ಅನುಭವಿಸಿದ್ದೇವೆ. ವೃಷಭಾವತಿ ಕೊಳಚೆ ನೀರಿನಿಂದ ವ್ಯವಸಾಯ ಕಷ್ಟವಾಗಿದೆ. ತೆಂಗು ಇಳುವರಿ ಬರುತ್ತಿಲ್ಲ. ಹಾಲು ಕೂಡ ಕಲುಷಿತಗೊಂಡಿದೆ. ರೆಡ್ ಜೋನ್ನಿಂದ ಆಸ್ಪತ್ರೆ, ಕಲ್ಯಾಣಮಂಟಪ ನಿರ್ಮಾಣ ಸಾಧ್ಯವಿಲ್ಲ. ಜಮೀನಿಗೆ ಸಾಲವೂ ಸಿಗುತ್ತಿಲ್ಲ ಎಂದು ಸಂಕಷ್ಟ ವಿವರಿಸಿದು.
ಹಿರಿಯ ನಾಗರಿಕರಾದ ಯಾಲಕ್ಕಿ ಗೌಡ ಮಾತನಾಡಿ, ನಮ್ಮಲ್ಲಿ ಕೇವಲ 1 ಲಕ್ಷಕ್ಕೆ ಜಮೀನು ಕಳೆದುಕೊಂಡವರನ್ನು ನೋಡಿದ್ದೇನೆ. ಎಲ್ಲರ ಬದುಕು ಅಧ್ವಾನವಾಗಿದೆ. ಈಗ ಪುಣ್ಯಾತ್ಮ ಡಿ.ಕೆ. ಶಿವಕುಮಾರ್ ಸರ್ಕಾರ ಎಲ್ಲವನ್ನೂ ಸರಿ ಮಾಡಲು ಮುಂದಾಗಿದೆ ಎಂದು ಧನ್ಯವಾದ ತಿಳಿಸಿದರು.
ಯುವ ರೈತ ಹರೀಶ್ ರೆಡ್ಡಿ ಮಾತನಾಡಿ, ರೈತರ ಹಿತ ಕಾಪಾಡುವ ದೊಡ್ಡ ಮನಸ್ಸು ಕುಮಾರಸ್ವಾಮಿ ಅವರಿಗಿದ್ದಿದ್ದರೆ ರೆಡ್ ಜೋನ್ ಮಾಡುತ್ತಿರಲಿಲ್ಲ. ಬಿಡದಿ ಟೌನ್ ಶಿಪ್ ನನ್ನ ಕನಸಿನ ಕೂಸು ಅಂತ ಅವರೇ ಹೇಳಿಕೊಂಡಿದ್ದಾರೆ. ಈಗ ನಮ್ಮ ಪಾಲಿಗೆ ಪಾಪದ ಕೂಸಾಗಿದೆ. ಬೆಂಗಳೂರು ಸುತ್ತಮುತ್ತಲಿನ ಇತರೆ ಎಲ್ಲಾ ಪ್ರದೇಶಗಳು ಶರವೇಗದಲ್ಲಿ ಅಭಿವೃದ್ಧಿಗೊಂಡಿವೆ. ಆದರೆ, ಬಿಡದಿ ಮಾತ್ರ ಹಿಂದೆ ಬಿದ್ದಿದೆ ಎಂದು ತಿಳಿಸಿದರು.-------------------------------ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ಅಧಿಸೂಚನೆ: ಸಿಎಂ ಡಿಕೆಶಿ
ರಾಮನಗರ:ಬಿಡದಿ ರೈತರು ಜಮೀನು ನೀಡಲು ಸಿದ್ಧರಿದ್ದು, ಅಂತಿಮ ಅಧಿಸೂಚನೆ ಹೊರಡಿಸಿದರೆ ನಾವು ಸ್ವಲ್ಪ ಹಣ ಪರಿಹಾರ ಹಾಗೂ ಸ್ವಲ್ಪ ಭೂ ಪರಿಹಾರವನ್ನು ಪಡೆಯುತ್ತೇವೆ ಎಂದು ಹೇಳಿದ್ದಾರೆ. ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ಬಾಕಿ ಇರುವ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ಸ್ವಇಚ್ಛೆಯಿಂದ ಜಮೀನು ನೀಡುತ್ತಾರೋ ಅವರಿಂದ ಪಡೆಯುತ್ತೇವೆ ಯಾರಿಗೂ ಬಲವಂತ ಮಾಡುವುದಿಲ್ಲ ಎಂದರು.ಪಾದಯಾತ್ರೆ ರೈತರ ವಿರೋಧದ ಬಗ್ಗೆ ಕೇಳಿದಾಗ, ಅಲ್ಲಿ ಕೆಲವು ರೈತರು ಮಾತ್ರ ಇದ್ದರು. ಉಳಿದವರು ಮಂಡ್ಯ, ಮೈಸೂರು, ತುಮಕೂರು ಭಾಗದ ಕ್ಷೇತ್ರಗಳಿಂದ ಜನರನ್ನು ಕರೆ ತಂದಿದ್ದರು. ರಾಜಕೀಯಕ್ಕಾಗಿ ಹೋರಾಟ ಮಾಡುವವರನ್ನು ಬೇಡ ಎನ್ನಲು ಸಾಧ್ಯವೇ? ಎಂದರು.
ವಿಜಯೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ವಿಜಯೇಂದ್ರ ಹೇಳಿರುವುದು ಸತ್ಯ. ಈಗಲೂ ರೈತರು ನಾವು ಭೂಮಿ ಕೊಡುತ್ತೇವೆ ನಮಗೆ ಪರಿಹಾರ ಬೇಕು ಎಂದು ಕೇಳುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ಒಂದು ಸಾವಿರ ಎಕರೆಯನ್ನು ಸ್ವಾಧೀನಪಡಿಸಿಕೊಂಡಾಗ ರೈತರು 80-90 ಲಕ್ಷ ಪರಿಹಾರ ತೆಗೆದುಕೊಂಡರು. ಆಗ ಕುಮಾರಸ್ವಾಮಿ ಅವರು ಏಕೆ ಹೋರಾಟ ಮಾಡಲಿಲ್ಲ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲಿ ಎಂದು ತಿಳಿಸಿದರು.-----------------------
11ಕೆಆರ್ ಎಂಎನ್ 4.ಜೆಪಿಜಿಬಿಡದಿ ಭಾಗದ ರೈತರ ನಿಯೋಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತಿರುವುದು.