ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಹೃದಯಾಘತದಿಂದ ಮೃತಪಟ್ಟ ಇಲ್ಲಿಯ ವಸಂತರೆಡ್ಡಿ ಕೆಂಚರೆಡ್ಡಿ ಅವರಿಗೆ ಸೇನಾ ಗೌರವದೊಂದಿಗೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಧಾರವಾಡ: ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಹೃದಯಾಘತದಿಂದ ಮೃತಪಟ್ಟ ಇಲ್ಲಿಯ ವಸಂತರೆಡ್ಡಿ ಕೆಂಚರೆಡ್ಡಿ (45) ಅವರಿಗೆ ಸೇನಾ ಗೌರವದೊಂದಿಗೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ರಾಜಸ್ಥಾನದ ಬಾಡಮೇರ್ನಲ್ಲಿ ವಸಂತರೆಡ್ಡಿ ಅವರು ನಿಧನರಾಗಿದ್ದು, ಶುಕ್ರವಾರ ಬೆಳಗ್ಗೆ ಸ್ವಗ್ರಾಮ ತಾಲೂಕಿನ ಗರಗ ಗ್ರಾಮಕ್ಕೆ ಪಾರ್ಥೀವ ಶರೀರ ಆಗಮಿಸಿತು. ಇಡೀ ಗ್ರಾಮದ ತುಂಬೆಲ್ಲ ಪಾರ್ಥೀವ ಶರೀರದ ಮೆರವಣಿಗೆ ಹಾಗೂ ಗೌರವ ನೀಡಲಾಯಿತು. ಭಾರತೀಯ ಸೇನೆಯ ಗೌರವ ವಂದನೆಯೊಂದಿಗೆ ಅಂತ್ಯಕ್ರಿಯೆ ನಡೆಯಿತು.24 ವರ್ಷಗಳ ಸುದೀರ್ಘ ಕಾಲ ದೇಶದ ಗಡಿ ಕಾಯುತ್ತಾ, ಜೀವನವನ್ನು ಭಾರತ ಮಾತೆಯ ಸೇವೆಗೆ ಮುಡಿಪಾಗಿಟ್ಟ ವೀರ ಪುತ್ರ ವಸಂತರೆಡ್ಡಿ ಇನ್ನು ನಾಲ್ಕೇ ತಿಂಗಳಲ್ಲಿ ನಿವೃತ್ತಿ ಪಡೆದು ಮರಳಬೇಕಿತ್ತು. ದುರಾದೃಷ್ಟವಶಾತ್ ಹೃದಯಾಘಾತದಿಂದ ಮೃತರಾಗಿದ್ದು, ಕುಟುಂಬದ ಸದಸ್ಯರು ಸೇರಿದಂತೆ ಇಡೀ ಗರಗ ಗ್ರಾಮಸ್ಥರು ಕಣ್ಣೀರಿನಲ್ಲಿ ಮುಳುಗಿದ್ದರು.
ವೀರ ಯೋಧರ ತ್ಯಾಗ ಮತ್ತು ಬಲಿದಾನದಿಂದಲೇ ನಾವೆಲ್ಲರೂ ನೆಮ್ಮದಿಯಿಂದ ದೇಶದೊಳಗೆ ಬದುಕುತ್ತಿದ್ದೇವೆ. ಅವರ ಸೇವೆ ನಮ್ಮ ನಾಡಿಗೆ, ದೇಶಕ್ಕೆ ಸದಾ ಸ್ಮರಣೀಯ. ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಮಾಜಿ ಶಾಸಕ ಅಮೃತ ದೇಸಾಯಿ ಶ್ರದ್ಧಾಂಜಲಿ ಸಲ್ಲಿಸಿದರು.