ಕುಡಿಯುವ ನೀರಿನ ಸಮಸ್ಯೆಗೆ ಈಗಲೇ ಪರಿಹಾರ ಕಂಡುಕೊಳ್ಳಿ: ಶ್ರೀನಿವಾಸ ಮಾನೆ

| Published : Mar 09 2024, 01:33 AM IST

ಸಾರಾಂಶ

ಹಾನಗಲ್ಲ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಪಂ ಖಾತೆಯಲ್ಲಿ ಕನಿಷ್ಠ ₹೫ ಲಕ್ಷ ಮೀಸಲಿಟ್ಟುಕೊಳ್ಳಿ. ಸಮಸ್ಯೆ ಎದುರಾದಾಗ ಅನುದಾನದತ್ತ ಕಾಯ್ದು ಕುಳಿತುಕೊಳ್ಳುವುದು ಬೇಡ ಎಂದು ಶಾಸಕ ಶ್ರೀನಿವಾಸ ಮಾನೆ ಅವರು ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಹಾನಗಲ್ಲ: ಕುಡಿಯುವ ನೀರಿನ ಸಮಸ್ಯೆ ಏ. ೧೫ರ ಹೊತ್ತಿಗೆ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಸ್ಥಳೀಯ ಮಟ್ಟದ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯುದ್ಧೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಸೂಚಿಸಿದರು.

ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ತಾಲೂಕಿನ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಸ್ಯೆಯನ್ನು ಎದುರಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಪಂ ಖಾತೆಯಲ್ಲಿ ಕನಿಷ್ಠ ₹೫ ಲಕ್ಷ ಮೀಸಲಿಟ್ಟುಕೊಳ್ಳಿ. ಸಮಸ್ಯೆ ಎದುರಾದಾಗ ಅನುದಾನದತ್ತ ಕಾಯ್ದು ಕುಳಿತುಕೊಳ್ಳುವುದು ಬೇಡ. ಮೊದಲಿಗೆ ಮಾರ್ಚ್‌ನಲ್ಲಿ ಮಳೆ ಬೀಳುವ ಮುನ್ಸೂಚನೆ ಇತ್ತು. ಆದರೆ ಇತ್ತೀಚಿನ ವರದಿ ಏಪ್ರಿಲ್ ಕೊನೆಯ ವಾರದಲ್ಲಿ ಮಳೆ ಬೀಳಲಿದೆ ಎಂದು ಹೇಳುತ್ತಿದೆ. ಹಾಗಾಗಿ ಮುಂದಿನ ಕೆಲವು ದಿನಗಳು ಹೆಚ್ಚಿನ ಸವಾಲಿನಿಂದ ಕೂಡಿರಲಿವೆ. ಜನ, ಜಾನುವಾರುಗಳಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಜಾಗರೂಕತೆ ವಹಿಸಿ. ಕಡ್ಡಾಯವಾಗಿ ಕೇಂದ್ರ ಸ್ಥಾನಗಳಲ್ಲಿದ್ದು, ಸಾರ್ವಜನಿಕರ ಸಹಾಯ ಪಡೆದು ಸಮಸ್ಯೆ ಎದುರಿಸಲು ಸಜ್ಜಾಗಿ ಎಂದು ಸೂಚಿಸಿದರು.

ಎಲ್ಲೆಲ್ಲಿ ಈಗಾಗಲೇ ಸಮಸ್ಯೆ ಉಲ್ಬಣಿಸಿದೆಯೋ ಅಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಗಮನ ಹರಿಸಿ. ಗ್ರಾಮಸಭೆ ಕರೆದು ಗ್ರಾಮಸ್ಥರ ಸಹಕಾರ ಪಡೆದುಕೊಳ್ಳಿ. ನೀರಿನ ಅಪವ್ಯಯ ತಡೆಗಟ್ಟುವ ನಿಟ್ಟಿನಲ್ಲಿ ಸಮುದಾಯದಲ್ಲಿ ಜಾಗೃತಿ ಮೂಡಿಸಿ. ಕೆಲವೆಡೆ ವ್ಯರ್ಥವಾಗಿ ಹರಿದು ನೀರು ಚರಂಡಿ ಸೇರುತ್ತಿದೆ. ಕೂಡಲೇ ನಿಯಂತ್ರಿಸಿ ಎಂದು ಶ್ರೀನಿವಾಸ ಮಾನೆ ಸೂಚನೆ ನೀಡಿದರು.

ಸ್ಥಳೀಯ ಮಠಾಧೀಶರು, ಗಣ್ಯರೊಂದಿಗೆ ಸಂಪರ್ಕ ಸಾಧಿಸಿ ವಾಸ್ತವ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿಕೊಡಿ. ಮಳೆ ಬಿದ್ದು ಸಮಸ್ಯೆಗೆ ಪರಿಹಾರ ಸಿಗುವ ವರೆಗೂ ಬಹಳ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ. ನಿರ್ಲಕ್ಷ್ಯ ವಹಿಸುವ, ಬೇಜವಾಬ್ದಾರಿ ಪ್ರದರ್ಶಿಸುವರ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದರು.

ತಹಸೀಲ್ದಾರ್ ಎಸ್. ರೇಣುಕಮ್ಮ, ತಾಪಂ ಇಒ ದೇವರಾಜ, ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಎಇಇ ಆರ್.ಸಿ. ನೆಗಳೂರ, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗಿರೀಶ ರೆಡ್ಡೇರ, ಉಪ ತಹಸೀಲ್ದಾರರಾದ ಎಂ.ಎಸ್. ಮುಗದುಂ, ಟಿ.ಕೆ. ಕಾಂಬ್ಳೆ ಈ ಸಂದರ್ಭದಲ್ಲಿ ಇದ್ದರು.