ಸಾರಾಂಶ
ಹಿರಿಯಡಕ ಸ.ಪ್ರ.ದ. ಕಾಲೇಜಿನ ಕನ್ನಡ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಐಕ್ಯೂಎಸಿಯೊಂದಿಗೆ ವಿವೇಕಾನಂದರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಮತಧರ್ಮಗಳ ಎಲ್ಲೆಗಳನ್ನು ಮೀರಿ ದಮನಿತರೆಲ್ಲರನ್ನೂ ದರಿದ್ರನಾರಾಯಣರೆಂದೇ ಸಂಬೋಧಿಸಿದ, ದೇಶ ಮತ್ತು ದೀನದಲಿತರ ಏಳಿಗೆಗಾಗಿ ದುಡಿಯುವಂತೆ ಯುವಕರಿಗೆ ಏಳಿ ಎಚ್ಚರಗೊಳ್ಳಿ ಎಂದು ಕರೆಕೊಟ್ಟ, ವಿವೇಕ ಮತ್ತು ವಿವೇಚನೆಯ ವೈಚಾರಿಕ ಸನ್ಯಾಸಿ ವಿವೇಕಾನಂದರನ್ನು ಯಾರ್ಯಾರದೋ ಭಾಷಣಗಳಲ್ಲಿ ಕಾಣದೆ ಅವರೇ ಬರೆದ ಬರಹಗಳಲ್ಲಿ ಹುಡುಕಿಕೊಳ್ಳಿ ಎಂದು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಪ್ರಕಾಶ್ ಶೆಟ್ಟಿ ಹೇಳಿದರು.ಹಿರಿಯಡಕ ಸ.ಪ್ರ.ದ. ಕಾಲೇಜಿನ ಕನ್ನಡ ವಿಭಾಗ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಐಕ್ಯೂಎಸಿಯೊಂದಿಗೆ ಆಯೋಜಿಸಿದ ವಿವೇಕಾನಂದರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬಡತನ ಮತ್ತು ಅವೈಚಾರಿಕತೆಗಳನ್ನು ಈ ದೇಶದ ಮೂಲ ಸಮಸ್ಯೆಯಾಗಿಯೇ ಕಂಡ ವಿವೇಕಾನಂದರು, ಮೌಢ್ಯವನ್ನು ಬಿತ್ತುವ, ಮನುಷ್ಯರ ನಡುವೆ ಗೋಡೆಗಳನ್ನು ಕಟ್ಟುವ ರೋಗಿಷ್ಠಮನುಸ್ಸುಗಳ ವಿರುದ್ಧವಾಗಿಯೇ ಇದ್ದರೆಂಬುದನ್ನು ನಾವು ಮರೆಯಬಾರದು ಎಂಬ ಕಿವಿಮಾತನ್ನೂ ಹೇಳಿದರು.ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿ ಆರಂಭವಾದ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಹಾಗೂ ವಾಣಿಜ್ಯವಿಭಾಗದ ಮುಖ್ಯಸ್ಥ ಲಿತಿನ್ ಬಿ.ಎಂ. ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಿದ್ಯಾರ್ಥಿ ನಾಯಕ ರಕ್ಷಿತ್ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಂದೀಶ್ ಕುಮಾರ್ ಕೆ.ಸಿ. ನಿರೂಪಿಸಿದರು.