ಸಾರಾಂಶ
ಈಜೀಪುರ ಮೇಲ್ಸೇತುವೆ ಕಾಮಗಾರಿಯನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಲು ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಈಜೀಪುರ ಮೇಲ್ಸೇತುವೆ ಕಾಮಗಾರಿಯನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಲು ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಗುತ್ತಿಗೆದಾರರಿಗೆ ಸೂಚನೆ ನೀಡಿದರು.ಈಜೀಪುರ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿ ಕಾರ್ಯಪ್ರಗತಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಶ್ನಿಸಿದರು. ಇದಕ್ಕೆ ಯೋಜನಾ ವಿಭಾಗದ ಮುಖ್ಯ ಅಭಿಯಂತರ ಪ್ರತಿಕ್ರಿಯಿಸಿ, ಈಜಿಪುರ ಮೇಲ್ಸೇತುವೆಯ ಬಾಕಿ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲು ಸರ್ಕಾರದ ಅನುಮೋದನೆಯಂತೆ ಮೆ. ಬಿ.ಎಸ್.ಸಿ.ಪಿ.ಎಲ್ ಇನ್ಫ್ರಾಸ್ಟ್ರಕ್ಚರ್ ಲಿ. ಗುತ್ತಿಗೆದಾರರಿಗೆ 2023ರ ನವೆಂಬರ್ 15ರಂದು ಕಾರ್ಯಾದೇಶ ನೀಡಲಾಗಿದೆ.
ಪ್ರಸ್ತುತ 27 ಪೈಲಿಂಗ್ಗಳು, ಮೂರು ಪ್ರಿ-ಕಾಸ್ಟ್ ಸೆಗ್ಮೆಂಟ್ ನಿರ್ಮಾಣ, 9 ಪ್ರಿ-ಕಾಸ್ಟ್ ಸೆಗ್ಮೆಂಟ್ ಲಾಂಚಿಂಗ್, ರ್ಯಾಂಪ್ಗಳ ನಿರ್ಮಾಣ, ಮೇಲ್ಸೇತುವೆಯ ಕೆಳಗಿನ ರಸ್ತೆ, ಪಾದಚಾರಿ ಮಾರ್ಗ ಮತ್ತು ಮಳೆ ನೀರು ಚರಂಡಿ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಅಲ್ಲದೇ ಕಾಮಗಾರಿಯು ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಗುತ್ತಿಗೆದಾರರಿಗೆ ₹25 ಲಕ್ಷ ದಂಡ ವಿಧಿಸಲಾಗಿದೆ. ರಕ್ಷಣಾ ಇಲಾಖೆಗೆ ಸಂಬಂಧಿಸಿದ ಜಾಗವನ್ನು ಹಸ್ತಾಂತರಿಸಿಕೊಂಡು ಕಾಮಗಾರಿ ನಿರ್ವಹಿಸಲಾಗುತ್ತಿದೆ. ಸೇಂಟ್ ಜಾನ್ಸ್ ಸಂಸ್ಥೆ ಜತೆಗೆ ಸಭೆ ನಡೆಸಿ ಯೋಜನೆಗೆ ಪ್ರಮುಖವಾಗಿ ಅಗತ್ಯವಿರುವ ಜಾಗ ಹಸ್ತಾಂತರಿಸಲು ಮನವಿ ಮಾಡಲಾಗಿದೆ. ಗುತ್ತಿಗೆದಾರರಿಗೆ ಕರಾರಿನಂತೆ ಮುಂಗಡ ಹಣ ಪಾವತಿಯಾಗಿದ್ದು, ಬಾಕಿ ಇದ್ದ ಬಿಲ್ಲನ್ನು ಸಹ ಪಾವತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಪರಿಶೀಲನೆಯ ವೇಳೆ ವಲಯ ಆಯುಕ್ತೆ ವಿನೋತ್ ಪ್ರಿಯಾ, ಜಂಟಿ ಆಯುಕ್ತ ಶಿವಕುಮಾರ್, ಪ್ರಧಾನ ಅಭಿಯಂತರ ಪ್ರಹ್ಲಾದ್, ಮುಖ್ಯ ಅಭಿಯಂತರ ರಾಜೇಶ್, ಲೋಕೇಶ್ ಉಪಸ್ಥಿತರಿದ್ದರು.