ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಬಾರದೆಂಬ ಉದ್ದೇಶದಿಂದ ಶಾಸಕರ ಪ್ರಯತ್ನದಿಂದ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲಾಗಿದೆ. ಕೆರೆಯಲ್ಲಿನ ನೀರು ಯಾರಾದರೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದರೆ ಅಂತವರ ಮೇಲೆ ನಿರ್ದಾಕ್ಷಿಣ್ಯವಾಗಿ ಎಫ್ಐಆರ್ ದಾಖಲಿಸಿ ಎಂದು ಕಂದಾಯ ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಸೂಚನೆ ನೀಡಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಕುಡಿಯುವ ನೀರಿನ ಕುರಿತು ಕರೆದ ನೋಡಲ್ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನೋಡಲ್ ಅಧಿಕಾರಿಗಳು ತಮಗೆ ವಹಿಸಿರುವ ಗ್ರಾಮಗಳ ಕೆರೆಗಳಿಗೆ ಪ್ರತಿದಿನ ಎರಡು ಬಾರಿ ಭೇಟಿ ನೀಡಿ ಪರಿಶೀಲಿಸಬೇಕು. ಪ್ರತಿದಿನ ಕೆರೆಗಳಿಗೆ ಭೇಟಿ ನೀಡುವಾಗ ಪೊಲೀಸ್, ಗ್ರಾಮ ಲೆಕ್ಕಾಧಿಕಾರಿ, ಪಿಡಿಒ ಹಾಗೂ ಹೆಸ್ಕಾಂ ಅಧಿಕಾರಿ, ಸಿಬ್ಬಂದಿ ಸಮೇತ ಭೇಟಿ ನೀಡಿ ಪರಿಶೀಲಿಸಬೇಕು. ಕೆರೆಯಲ್ಲಿನ ನೀರು ಪಡೆಯಲು ಅಕ್ರಮ ಪಂಪ್ಸೆಟ್ ಅಳವಡಿಸಿದರೆ ಸೀಜ್ ಮಾಡಿ ತೆರವುಗೊಳಿಸಬೇಕು ಎಂದು ಸೂಚಿಸಿದರು.
ಟಾಸ್ಕ್ಫೋರ್ಸ್ ಸಭೆಯಲ್ಲಿ ಶಾಸಕರು ಕಟ್ಟುನಿಟ್ಟಾಗಿ ನಿರ್ದೇಶನ ನೀಡಿದ್ದಾರೆ. ಕೆರೆಯಲ್ಲಿನ ನೀರು ಕುಡಿಯುವುದಕ್ಕೆ ಮಾತ್ರ ಬಳಕೆಯಾಗಬೇಕು. ಕೆರೆಯಲ್ಲಿನ ನೀರು ಪೋಲಾಗಬಾರದು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಕಚೇರಿ ಕೆಲಸದ ಒತ್ತಡದಲ್ಲಿ ತಮಗೆ ವಹಿಸಿರುವ ನೀರಿನ ಜವಾಬ್ದಾರಿಯನ್ನು ನಿರ್ಲಕ್ಷಿಸಬಾರದು. ಈಗಾಗಲೇ ತಾಲೂಕಿನ 21 ಕೆರೆಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ತಮಗೆ ವಹಿಸಿರುವ ಕೆರೆಯಲ್ಲಿನ ನೀರು ರಕ್ಷಣೆ ಮಾಡಿ, ಕುಡಿಯುವ ನೀರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.ಈ ವೇಳೆ ತಹಸೀಲ್ದಾರ್ ಬಿ.ಎಸ್.ಕಡಕಭಾವಿ ಮಾತನಾಡಿ, ಕಾಲುವೆಗೆ ಬಿಡುವ ನೀರು ಮತ್ತು ಕೆರೆಯಲ್ಲಿನ ನೀರು ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಗೆ ಬಳಕೆಯಾಗದಂತೆ ನೋಡಿಕೊಳ್ಳಬೇಕು. ಕಾಲುವೆಯ ವಾಲ್, ಕೆರೆಯಲ್ಲಿನ ಸರ್ಕಾರಿ ಆಸ್ತಿಗಳಿಗೆ ಹಾನಿ ಉಂಟು ಮಾಡುವವರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನೋಡಲ್ ಅಧಿಕಾರಿಗಳು ನಮಗೆ ಮಾಹಿತಿದಾರರಾಗಿ ಕೆಲಸ ಮಾಡದೆ, ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಚ್.ಎಸ್.ಪಾಟೀಲ, ಎಇಇ ದಯಾನಂದ ಮಠ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಎಪಿಎಂಸಿ ಕಾರ್ಯದರ್ಶಿ ಆನಂದ ರತ್ನಾಕರ, ಅಬಕಾರಿ ಸಿಪಿಐ ರಾಹುಲ್ ನಾಯಕ ಸೇರಿದಂತೆ ತಾಲೂಕಿನ 21 ಕೆರೆಗಳ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.--------ಕೋಟ್
ನೋಡಲ್ ಅಧಿಕಾರಿಗಳು ಟೀಮ್ ಜೊತೆಯಲ್ಲೇ ಪ್ರತಿದಿನ ಎರಡು ಬಾರಿ ಕೆರೆಗಳಿಗೆ ಭೇಟಿ ನೀಡಬೇಕು. ಕೆರೆಯಲ್ಲಿನ ನೀರು ದುರ್ಬಳಕೆ ಮಾಡಿಕೊಳ್ಳುವವರಿಗೆ ಭಯವಾಗುತ್ತದೆ. ಕೆರೆಯಲ್ಲಿನ ನೀರಿನ ದುರ್ಬಳಕೆ ಕಂಡುಬಂದರೆ ಯಾರೇ ಇದ್ದರೂ ಅಂತವರ ಮೇಲೆ ಎಫ್ಐಆರ್ ದಾಖಲಿಸಿ, ಒಬ್ಬರ ಮೇಲೆ ಎಫ್ಐಆರ್ ಆದರೆ ಉಳಿದವರು ಎಚ್ಚರಗೊಳ್ಳುತ್ತಾರೆ. ಮೇ ತಿಂಗಳು ಮುಗಿಯುವವವರೆಗೆ ತಾಲೂಕಿನ ಯಾವುದೇ ಗ್ರಾಮಕ್ಕೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ತಾಲೂಕು ಮಟ್ಟದ ಅಧಿಕಾರಿಗಳು ತಾಲೂಕು ಆಡಳಿತದ ಜೊತೆಗೆ ಕೆಲಸ ಮಾಡಬೇಕು.- ಅನುರಾಧಾ ವಸ್ತ್ರದ, ಉಪವಿಭಾಗಾಧಿಕಾರಿ