ಸಾರಾಂಶ
ಇಳಕಲ್ಲದ ಮಹೇಶ್ವರಿ ಚಿಕ್ಕಮಕ್ಕಳ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಕುರಿತು ಅಣಕು ಪ್ರದರ್ಶನ ನಡೆಯಿತು.
ಕನ್ನಡಪ್ರಭ ವಾರ್ತೆ ಇಳಕಲ್ಲ:
ಇಲ್ಲಿಯ ಸ್ಥಳೀಯ ಮಹೇಶ್ವರಿ ಚಿಕ್ಕಮಕ್ಕಳ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಕುರಿತು ಅಣಕು ಪ್ರದರ್ಶನ ನಡೆಯಿತು.ಆಸ್ಪತ್ರೆಯಲ್ಲಿರುವ ವೈದ್ಯರು, ನರ್ಸ್ ಮತ್ತು ಸಿಬ್ಬಂದಿ ಅಚಾನಕ್ಕಾಗಿ ಅಗ್ನಿ ಅವಘಡವಾದರೆ ಯಾವೆಲ್ಲ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಮತ್ತು ಬೆಂಕಿ ಬಿದ್ದಾಗ ನಾವು ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದನ್ನು ಅಗ್ನಿಶಾಮಕ ಠಾಣೆಯ ಜಗದೀಶ ಗಿರಡ್ಡಿ ಸಿಬ್ಬಂದಿಗೆ ಉಪನ್ಯಾಸ ನೀಡಿದರು.
ಆಸ್ಪತ್ರೆ ಸಿಬ್ಬಂದಿಗೆ ಎಬಿಸಿ ವರ್ಗದ ಅಗ್ನಿ ನಂದಕಗಳನ್ನು ಯಾವ ಯಾವ ಬೆಂಕಿಗೆ ಉಪಯೋಗಿಸಬೇಕು ಮತ್ತು ಬೆಂಕಿ ಬಿದ್ದಾಗ ಅಗ್ನಿ ನಂದಕಗಳ ಉಪಯೋಗಿಸುವ ವಿಧಾನವನ್ನು ಸಿಬ್ಬಂದಿಗೆ ತಿಳಿಸಿಕೊಟ್ಟರು. ಯಾವುದೇ ಸಣ್ಣಪುಟ್ಟ ಅಗ್ನಿ ಅನಾಹುತಗಳಾದಾಗ ಅಗ್ನಿ ನಂದಕಗಳಿಂದ ಬೆಂಕಿಯನ್ನು ಸರಳವಾಗಿ ಆರಿಸುವ ವಿಧಾನ ತೋರಿಸಿಕೊಟ್ಟರು.ಡಾ.ಪವನ್ ಧರಕ್ ಮಾತನಾಡಿ, ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ನಮ್ಮ ಆಸ್ಪತ್ರೆಗೆ ಬಂದು ಸಣ್ಣ ಪ್ರಮಾಣದ ಬೆಂಕಿ ಆದಾಗ ನಂದಿಸುವ ವಿಧಾನ ತೋರಿಸುವುದರ ಜೊತೆಗೆ ಸ್ವತಃ ನಮ್ಮ ಸಿಬ್ಬಂದಿಯಿಂದಲೇ ಬೆಂಕಿ ನಂದಿಸುವ ಅಣುಕು ಪ್ರದರ್ಶನ ಮಾಡಿದ್ದು ತುಂಬಾ ಪ್ರಯೋಜನಕಾರಿಯಾಗಿದೆ. ವೈದ್ಯರಯ, ನರ್ಸ್ ಹಾಗೂ ಸಿಬ್ಬಂದಿ ಮತ್ತು ಆಸ್ಪತ್ರೆಗೆ ಬಂದ ಒಳರೋಗಿಗಳ ಪೋಷಕರು ಆಸ್ಪತ್ರೆಯ ಸುತ್ತಮುತ್ತಲಿರುವ ಸಾರ್ವಜನಿಕರು ಹಾಗೂ ಮಕ್ಕಳು ಅಣಕು ಪ್ರದರ್ಶನದಲ್ಲಿ ಭಾಗಿಯಾದರು.