ಉಡುಪಿ: ನಗರದ ಸಿಟಿ ಬಸ್ ನಿಲ್ದಾಣ ಬಳಿಯ ಖಾದರ್ ಕಮರ್ಷಿಯಲ್ ಕಟ್ಟಡದಲ್ಲಿ ಭಾನುವಾರ ಸಂಜೆ ಬೆಂಕಿ ಅವಘಡ ಸಂಭವಿಸಿದ್ದು, 10 ಹತ್ತಕ್ಕೂ ಹೆಚ್ಚು ಅಂಗಡಿಗಳಿಗೆ ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಭಾನುವಾರವಾದ್ದರಿಂದ ಅಂಗಡಿಗಳು ಮುಚ್ಚಿದ್ದು, ಕಾರ್ಮಿಕರು ಯಾರೂ ಇರದಿದ್ದುದರಿಂದ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದ್ದರೂ, ಕೇವಲ ಒಂದು ಕಿಮಿ ದೂರದಲ್ಲಿರುವ ಅಗ್ನಿಶಾಮಕ ಕಚೇರಿಯಿಂದ ವಾಹನ ಬರುವುದಕ್ಕೆ ಮುಕ್ಕಾಲು ಗಂಟೆ ತಡವಾಗಿದ್ದರಿಂದ ಬೆಂಕಿ ಹತ್ತಕ್ಕೂ ಹೆಚ್ಚು ಅಂಗಡಿಗಳಿಗೆ ಹರಡಿಕೊಂಡಿತು. ಅದರಲ್ಲೂ ಅಗ್ನಿಶಾಮಕ ದಳದ ಕೇವಲ ಒಂದೇ ವಾಹನ ಬಂದಿದ್ದರಿಂದ ಕಟ್ಟದ ಸುತ್ತಲೂ ಹರಡಿದ್ದ ಬೆಂಕಿ ನಂದಿಸಲು ಸಾಕಷ್ಟು ಹರಸಾಹಸಪಡಬೇಕಾಯಿತು. ಅಷ್ಟರಲ್ಲಾಗಲೇ ಬೆಂಕಿ ಅಕ್ಕಪಕ್ಕದ ಕಟ್ಟಡಗಳಿಗೂ ಹರಡಿ ಇನ್ನಷ್ಟು ನಷ್ಟಕ್ಕೆ ಕಾರಣವಾಯಿತು. ಅಗ್ನಿಶಾಮಕ ದಳದ ವಿಳಂಭದ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬೆಂಕಿ ಹೇಗೆ ಹತ್ತಿಕೊಂಡಿತು ಎಂಬುದಿನ್ನೂ ಖಚಿತವಾಗಿಲ್ಲ. ಈ ಕಟ್ಟಡದಲ್ಲಿ ಬಹುತೇಕ ಹೋಲ್‌ಸೇಲ್ ಅಂಗಡಿಗಳೇ ಇವೆ. ಅವುಗಳಲ್ಲಿ ಪ್ಲಾಸ್ಟಿಕ್, ಆಟಿಕೆ, ಚಪ್ಪಲಿ, ಎಲೆಕ್ಟ್ರಿಕ್, ಮೊಬೈಲ್ ಶಾಪ್‌ ಗಳಿದ್ದು, ಸುಮಾರು 5 ಅಂಗಡಿಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಹತ್ತಿಪ್ಪತ್ತು ಲಕ್ಷ ರು.ಗೂ ಹೆಚ್ಚು ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.ಸೆಟ್‌ ಬ್ಯಾಕ್‌ ಗಳಿಲ್ಲದ ಕಟ್ಟಡಗಳು !: ಉಡುಪಿ ನಗರದಲ್ಲಿರುವ ಕಟ್ಟಡಗಳಲ್ಲಿ ಬೆಂಕಿ ತಗುಲಿದರೆ ಅಗ್ನಿಶಾಮಕ ಅದರ ಸುತ್ತ ಸಂಚರಿಸಲು ರಸ್ತೆ, ಸೆಟ್‌ಬ್ಯಾಕ್ ಇಲ್ಲ, ಕಟ್ಟಡಗಳನ್ನು ಕಟ್ಟುವಾಗ ಅಗ್ನಿಶಾಮಕ ಇಲಾಖೆ ಸೆಟ್‌ಬ್ಯಾಕ್ ನೋಡಿ ನಿರಕ್ಷೇಪಣಾ ಪತ್ರ ನೀಡುದೆ. ಆದರೂ ನಗರದ ಬಹುತೇಕ ಬಹು ಮಹಡಿ ಕಟ್ಟಡಗಳ ಸುತ್ತ ಸೆಟ್‌ ಬ್ಯಾಕ್ ಇಲ್ಲ, ಇದರಿಂದ ಇಂತಹ ಅವಘಡ ಸಂಭವಿಸಿದಾಗ ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆಯೂ ಸ್ಥಳ‍ದಲ್ಲಿದ್ದ ಸಾರ್ವಜನಿಕರು ತೀವ್ರ ಆಸಮಾಧಾನ ವ್ಯಕ್ತಪಡಿಸುತಿದ್ದರು.