ನಗರದ ನ್ಯೂ ಮಂಡ್ಲಿಯಲ್ಲಿರುವ ಖಾಸಗಿ ಪೇಪರ್ ಕಾರ್ಖಾನೆಯೊಂದರಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲೆಗೆಗೆ ಕೋಟ್ಯಂತರ ರು. ಮೌಲ್ಯದ ಪೇಪರ್ ಬಂಡಲ್ ಸುಟ್ಟು ಕರಕಲಾಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಗರದ ನ್ಯೂ ಮಂಡ್ಲಿಯಲ್ಲಿರುವ ಖಾಸಗಿ ಪೇಪರ್ ಕಾರ್ಖಾನೆಯೊಂದರಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲೆಗೆಗೆ ಕೋಟ್ಯಂತರ ರು. ಮೌಲ್ಯದ ಪೇಪರ್ ಬಂಡಲ್ ಸುಟ್ಟು ಕರಕಲಾಗಿದೆ.

ಶಿವಮೊಗ್ಗದ ನ್ಯೂ ಮಂಡ್ಲಿ ಕೈಗಾರಿಕಾ ಪ್ರದೇಶದಲ್ಲಿರುವ ಮುಂಬೈ ಮೂಲದ ಜಾಕೀರ್ ಹಾಜೀಬಾಯಿ ಎನ್ನುವರಿಗೆ ಸೇರಿದ ಪೇಪರ್ ಪ್ಯಾಕೇಜಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ.

ಕಾರ್ಖಾನೆಯಲ್ಲಿ ಶೇಖರಿಸಿಡಲಾಗಿದ್ದ ಟನ್‌ಗಟ್ಟಲೆ ಪೇಪರ್ ರೋಲ್‌ಗಳಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಇಡೀ ಆವರಣಕ್ಕೆ ಬೆಂಕಿ ವ್ಯಾಪಿಸಿದೆ. ಅಗ್ನಿಶಾಮಕ ದಳದ 25ಕ್ಕೂ ಸಿಬ್ಬಂದಿ ಸುಮಾರು 2 ಗಂಟೆ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ.

ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕಾರ್ಖಾನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪೇಪರ್ ರೋಲ್‌ಗಳು ಹಾಗೂ ಇತರೆ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಇಡೀ ಪ್ರದೇಶ ದಟ್ಟ ಹೊಗೆಯಿಂದ ಆವೃತವಾಗಿತ್ತು. ಅಗ್ನಿ ಅವಘಡ ಕಂಡು ಸುತ್ತಮುತ್ತಲಿನ‌ ಜನರು ಬೆಚ್ಚಿಬಿದ್ದರು. 40 ವರ್ಷಗಳ ಇತಿಹಾಸ ಇರುವ ಪೇಪರ್ ಪ್ಯಾಕೇಜಿಂಗ್ ಪ್ಯಾಕ್ಟರಿಯಲ್ಲಿ 400 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಇಲ್ಲ. ಶಾರ್ಟ್ ಸರ್ಕ್ಯೂಟ್ ಅಥವಾ ವೆಲ್ಡಿಂಗ್ ಫೈರ್ ನಿಂದಾಗಿ ಬೆಂಕಿ ತಗುಲಿದೆ ಎಂದು ಹೇಳಲಾಗುತ್ತಿದೆ. ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

--------------

ಪೊಟೋ:15ಎಸ್‌ಎಂಜಿಕೆಪಿ10