ಧಾರವಾಡ:

ನಗರದ ತಡಸಿನಕೊಪ್ಪ ಬಳಿ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರು ನಡೆಸಿದ ಫೈರಿಂಗ್‌ನಲ್ಲಿ ಗಾಯಗೊಂಡ ಯುವಕ ವಿಠ್ಠಲ್‌ ವಾಲೀಕಾರ್‌ ಅವರನ್ನು ಭೇಟಿಯಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಗ್ಯ ವಿಚಾರಿಸಿದರು.

ಈ ವೇಳೆ ಫೈರಿಂಗ್‌ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿಲ್ಲವೇಕೆ? ಎಂದು ಪೊಲೀಸ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅಲ್ಲದೇ ಆತನಿಗೆ ಗನ್‌ ಲೈಸನ್ಸ್‌ ಇದೆಯೋ ಇಲ್ವೋ ಎನ್ನುವುದು ಇನ್ನು ತಿಳಿದುಕೊಂಡಿಲ್ಲವೆಂದರೆ ಪೊಲೀಸ್‌ ಅಧಿಕಾರಿಗಳು ಫೈರಿಂಗ್‌ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಸಂಶಯ ಬರುತ್ತದೆ. ಸರಿಯಾದ ಕ್ರಮಕೈಗೊಳ್ಳದಿದ್ದಲ್ಲಿ ಹೈಕೋರ್ಟ್‌ ಮೆಟ್ಟಿಲೇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇಲ್ಲಿನ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಾಲೀಕಾರ್ ಅವರೊಂದಿಗೆ ಚರ್ಚೆ ನಡೆಸಿದ ಜೋಶಿ, ನೀವು ಯಾವುದಕ್ಕೂ ಎದೆಗುಂದಬೇಡಿ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು. ವೈದ್ಯರಿಂದಲೂ ಅವರ ಆರೋಗ್ಯದ ಕುರಿತಂತೆ ಮಾಹಿತಿ ಪಡೆದರು.


ಡಿಸಿಪಿ, ಇನ್‌ಸ್ಪೆಕ್ಟರ್‌ಗೆ ತರಾಟೆ:

ಇದೇ ವೇಳೆ ಸ್ಥಳದಲ್ಲಿದ್ದ ಡಿಸಿಪಿ ಶ್ರುತಿ ಹಾಗೂ ಇನ್‌ಸ್ಪೆಕ್ಟರ್‌ ದಯಾನಂದ ಶೇಗುಣಸಿ ಅವರನ್ನು ತರಾಟೆಗೆ ತೆಗೆದಕೊಂಡ ಸಚಿವರು, ಫೈರಿಂಗ್ ಮಾಡಿರುವ ಸುಂದರ್ ಪೌಲ್ 10 ಪ್ರಕರಣಗಳಲ್ಲಿ ಭಾಗಿ ಆಗಿದ್ದಾನೆ. ಆತನನ್ನು ಏಕೆ ಬಂಧಿಸಿಲ್ಲವೆಂದು ಪ್ರಶ್ನಿಸಿದರು. ಪೊಲೀಸರು ಸಾಮಾನ್ಯರನ್ನು ರಕ್ಷಿಸಲು ಇರಬೇಕು. ನೀವೇನು ಮಾಡುತ್ತಿದ್ದೀರಿ? ಎಂದು ಖಾರವಾಗಿ ಪ್ರಶ್ನಿಸಿದರು.

ಆರೋಪಿಯು ಖಾಸಗಿ ಗನ್‌ಮ್ಯಾನ್ ಹೊಂದಿದ್ದಾನೆ. ಆತನಿಗೆ ಲೈಸೆನ್ಸ್ ಇದೆಯೇ ಎಂದು ಕೇಳಿದ್ದಕ್ಕೆ ಇನ್‌ಸ್ಪೆಕ್ಟರ್‌ ದಯಾನಂದ ಅವರಿಂದ ಸರಿಯಾದ ಉತ್ತರ ಬರಲಿಲ್ಲ. ಇದರಿಂದ ಮತ್ತಷ್ಟು ಕೆಂಡಮಂಡಲವಾದ ಜೋಶಿ, ಈ ಪ್ರಕರಣದಲ್ಲಿ ನೀವೆಲ್ಲರೂ ಶಾಮೀಲಾಗಿರುವುದು ದೃಢಪಟ್ಟಂತಾಗುತ್ತಿದೆ. ನೀವು ದೂರು ಕೊಡಲು ಬಂದವನ ಮೇಲೆ ಅಟ್ಟಹಾಸ ಪ್ರದರ್ಶಿಸಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

ಪೊಲೀಸ್ ಆಯುಕ್ತರು ಎಲ್ಲಿ?

ಇಷ್ಟು ದಿನವಾದರೂ ಆರೋಪಿ ಪತ್ತೆ ಆಗಿಲ್ಲ. ನಾನು ದೆಹಲಿಯಲ್ಲಿ ಇದ್ದರೂ ಎಲ್ಲವೂ ಗೊತ್ತಾಗುತ್ತಿದೆ. ನೀವು ಇಲ್ಲೆ ಇದ್ದರೂ ಗೊತ್ತಾಗುತ್ತಿಲ್ಲ. ಏನೂ ಉಸ್ತುವಾರಿ ವಹಿಸುತ್ತಿದ್ದೀರಿ ಎಂದು ಡಿಸಿಪಿ ವಿರುದ್ಧ ಕಿಡಿಕಾರಿದ ಸಚಿವರು, ಪೊಲೀಸ್ ಆಯುಕ್ತರು ಎಲ್ಲಿ. ಕೇಂದ್ರ ಸಚಿವರು ಬಂದಾಗ ಇಲ್ಲಿ ಬರಬೇಕು ಎಂಬುದು ಅವರಿಗೆ ಗೊತ್ತಿಲ್ಲವೇ ಎಂದು ಕೇಳಿದರು.

ದೊಡ್ಡ ಅಧಿಕಾರಿಗಳು ಭಾಗಿ:ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಹ್ಲಾದ ಜೋಶಿ, ಪುಲ್ವಾಮಾದಲ್ಲಿ ಭಾರತದ ಪೊಲೀಸರು ಭಯೋತ್ಪಾದಕರನ್ನು ಹಿಡಿದಿದ್ದಾರೆ. ಆದರೆ, ಇಲ್ಲಿ ಫೈರಿಂಗ್‌ ಮಾಡಿದ ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ಆಗುತ್ತಿಲ್ಲ. ಕೂಡಲೇ ಕ್ರಮ ಜರುಗಿಸದಿದ್ದರೆ ಪ್ರತಿಭಟನೆ ಮಾಡುವ ಜತೆಗೆ ಹೈಕೋರ್ಟ್‌ಗೂ ಹೋಗುತ್ತೇವೆ ಎಂದು ಎಚ್ಚರಿಕೆ ನೀಡಿದರು. ಅಮಾಯಕ ಯುವಕನ ಮೇಲೆ ಫೈರಿಂಗ್ ನಡೆದಿರುವುದು ದುರ್ದೈವ. ಫೈರಿಂಗ್ ಮಾಡಿರುವ ವ್ಯಕ್ತಿ ಇತ್ತೀಚೆಗೆ ಬಿಡ್ನಾಳ್, ರಾಮನಗಟ್ಟಿಯಲ್ಲಿ ರೈತರಿಗೆ ಮೋಸ ಮಾಡಿದ್ದಾನೆ. ಈ ಪ್ರಕರಣದಲ್ಲಿ ಇಬ್ಬರು ಮಾತ್ರ ಬಂಧನವಾಗಿದ್ದಾರೆ. ಪೊಲೀಸರು ಗನ್ ಲೈಸೆನ್ಸ್ ಬಗ್ಗೆ ಇನ್ನೂ ಮಾಹಿತಿ ಖಚಿತಪಡಿಸಿಕೊಳ್ಳುವುದರಲ್ಲಿಯೇ ಇದ್ದಾರೆ. ದೊಡ್ಡ ಅಧಿಕಾರಿಗಳು ಇದರಲ್ಲಿ ಭಾಗಿ ಆಗಿದ್ದಾರೆ ಎಂದು ಹರಿಹಾಯ್ದರು.ಪೊಲೀಸರು ಇಲ್ಲಿ ದೂರು ಕೊಡಲು ಹೋದವನನ್ನೇ ಅಂಗಿ ಹಿಡಿದು ಹೊರಗೆ ಹಾಕಿದ್ದಾರೆ. ಗಾಳಿಯಲ್ಲಿ ಗುಂಡು ಹೊಡೆದವರನ್ನು ಬಂಧಿಸಿ ನಿಜವಾದ ಆರೋಪಿಯನ್ನು ಕೈ ಬಿಟ್ಟಿದ್ದಾರೆ. ಈ ಘಟನೆ ಆಗಿ ನಾಲ್ಕೈದು ದಿನ ಕಳೆದರೂ ಆತ ಪೊಲೀಸರಿಗೆ ಸಿಕ್ಕಿಲ್ಲ. ಫೈರಿಂಗ್ ಮಾಡಲು ಸಕಾರಣ ಇರಬೇಕು. ಆದರೆ ಪೊಲೀಸರಿಗೆ ಇಲ್ಲಿ ತನಿಖೆ ನಡೆಸಲು ಆಸಕ್ತಿಯೇ ಇಲ್ಲ. ಹು-ಧಾ ಪೊಲೀಸ್ ಇಲಾಖೆ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ದೂರಿದರು.ಈ ವೇಳೆ ಮಾಜಿ ಮೇಯರ್ ಈರೇಶ ಅಂಚಟಗೇರಿ, ಬಸವರಾಜ ಅರವಾಳದ, ಮೈಲಾರ ಉಪ್ಪಿನ್, ಮಾರುತಿ ಹಿಂಡಸಗೇರಿ ಇತರರು ಇದ್ದರು.