ಮೊಟ್ಟಮೊದಲ ತಿಗಳಾರಿ ಲಿಪಿಯ ಶಾಸನ ಪತ್ತೆ

| Published : Jun 08 2025, 01:46 AM IST / Updated: Jun 08 2025, 01:47 AM IST

ಸಾರಾಂಶ

ತಾಲೂಕಿನ ಭೀಮನಕಟ್ಟೆಯ ಭೀಮಸೇತು ಮುನಿವೃಂದ ಮಠದಲ್ಲಿ ಅತ್ಯಂತ ಅಪರೂಪವಾದ ಶಿಲಾ ಶಾಸನವನ್ನು ಇತಿಹಾಸ ಸಂಶೋಧಕರ ಎಲ್‌.ಎಸ್‌. ರಾಘವೇಂದ್ರ ಅವರು ಪತ್ತೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ತಾಲೂಕಿನ ಭೀಮನಕಟ್ಟೆಯ ಭೀಮಸೇತು ಮುನಿವೃಂದ ಮಠದಲ್ಲಿ ಅತ್ಯಂತ ಅಪರೂಪವಾದ ಶಿಲಾ ಶಾಸನವನ್ನು ಇತಿಹಾಸ ಸಂಶೋಧಕರ ಎಲ್‌.ಎಸ್‌. ರಾಘವೇಂದ್ರ ಅವರು ಪತ್ತೆ ಮಾಡಿದ್ದಾರೆ.

ಭೀಮಸೇತು ಮುನಿವೃಂದ ಮಠದಲ್ಲಿರುವ ತುಳಸಿಕಟ್ಟೆಯಲ್ಲಿ ಏಳು ಸಾಲಿನ ಒಂದು ಶಾಸನವಿದ್ದು, ಇದು ಅಪರೂಪದ ತಿಗಳಾರಿ ಲಿಪಿಯಲ್ಲಿದೆ .ಇದುವರೆಗೆ ತೀರ್ಥಹಳ್ಳಿ ತಾಲೂಕಿನಲ್ಲಿ ಪತ್ತೆಯಾಗಿರುವ ಶಾಸನಗಳಲ್ಲಿ ಇದು ಮೊಟ್ಟಮೊದಲ ತಿಗಳಾರಿ ಲಿಪಿಯ ಶಾಸನವಾಗಿದೆ.

ಇದರಲ್ಲಿ ವಸುದೇವ ತೀರ್ಥರಿಂದಲೂ ವೃಂದಾವನ ಸೇವೆ ಅರ್ಪಿತ ಎಂದಿದೆ. ಅಂದರೆ ಈ ಮಠದ ಯತಿಗಳಾಗಿದ್ದ ಶ್ರೀ ವಸುದೇವ ತೀರ್ಥರು ಹಿಂದಿನ ಯತಿಗಳ ವೃಂದಾವನಗಳನ್ನು ನಿರ್ಮಿಸಿದ್ದಾರೆ. ಈಗಲೂ ಶ್ರೀ ಮಠದಲ್ಲಿ ಹಲವಾರು ಯತಿಗಳ ವೃಂದಾವನವನ್ನು ಕಾಣಬಹುದಾಗಿದೆ. ಲಿಪಿಯಾದಾರಿತವಾಗಿ ಇದು ಸುಮಾರು ಹದಿನಾರನೇ ಶತಮಾನದೆಂದು ಅಂದಾಜಿಸಬಹುದಾಗಿದೆ.

ಇದೇ ತುಳಸಿ ವೃಂದಾವನದ ಇನ್ನೊಂದು ಭಾಗದಲ್ಲಿ ಕೆಳದಿ ಲಿಪಿಯ ಒಂದು ಶಾಸನವಿದೆ. ಇದು ಹತ್ತು ಸಾಲುಗಳನ್ನು ಒಳಗೊಂಡಿದೆ. ನಳ ಸಂವತ್ಸರದಲ್ಲಿ ರಾಮಚಂದ್ರನು ದೇವರ ಚರಣಗಳಿಗೆ ತೋಟ, ಕೆರೆ ಕಟ್ಟೆಗಳನ್ನು ದಾನವಾಗಿ ನೀಡಿದನೆಂದು ಬರೆಯಲಾಗಿದೆ. ಹೆಚ್ಚಿನ ವಿವರಗಳೇನು ಇದರಲ್ಲಿ ದಾಖಲಾಗಿಲ್ಲ.

ಈ ತುಳಸೀ ವೃಂದಾವನಕ್ಕೆ ನಿತ್ಯ ಪೂಜೆ ಸಮರ್ಪಿಸಿದರೆ ಅದು ಇಲ್ಲಿನ ಪೂರ್ವ ಯತಿವರೇಣ್ಯರಿಗೆ ಸಲ್ಲುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಈ ಶಾಸನಗಳ ಪತ್ತೆಮಾಡಿದ ಇತಿಹಾಸ ಸಂಶೋದಕ ಎಲ್.ಎಸ್.ರಾಘವೇಂದ್ರ ತೀರ್ಥಹಳ್ಳಿ ಇವರಿಗೆ ಶ್ರೀ ಮಠದ ಧನಂಜಯ ಶಿಕ್ಷಕರಾದ ಶ್ರೀನಿವಾಸ .ಬಿ ಇವರು ಮಾಹಿತಿ ನೀಡಿರುತ್ತಾರೆ.

ಶಾಸನ ತಜ್ಞರಾದ ಪ್ರೊ.ಜಿ.ಕೆ.ದೇವರಾಜ ಸ್ವಾಮಿ ಹಾಗೂ ಅರ್ಪಿತಾ ಅವರು ಈ ಲಿಪಿಗಳ ಅಧ್ಯಯನದಲ್ಲಿ ಸಹಕಾರ ನೀಡಿರುತ್ತಾರೆ. ಒಟ್ಟಿನಲ್ಲಿ ಅಪರೂಪದ ಶಾಸನವೊಂದು ಬೆಳಕಿಗೆ ಬಂದಿರುವುದು ತಾಲೂಕಿಗೆ ಹೆಮ್ಮೆಯ ವಿಚಾರವಾಗಿದೆ .