ಪ್ರಜ್ವಲ್‌ ರೇವಣ್ಣ ಕೇಸ್‌ ಮೊದಲ ತೀರ್ಪು ಜು.30ರಂದು ಪ್ರಕಟ

| N/A | Published : Jul 19 2025, 01:00 AM IST / Updated: Jul 19 2025, 07:47 AM IST

Prajwal revanna

ಸಾರಾಂಶ

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ನಾಲ್ಕು ಪ್ರಕರಣಗಳ ಪೈಕಿ ಒಂದಾದ ಕೆ.ಆರ್‌.ನಗರದ ಮಹಿಳೆ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣ ಕುರಿತ ಅಂತಿಮ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜು.30ರಂದು ಪ್ರಕಟಿಸಲಿದೆ.

 ಬೆಂಗಳೂರು :  ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ನಾಲ್ಕು ಪ್ರಕರಣಗಳ ಪೈಕಿ ಒಂದಾದ ಕೆ.ಆರ್‌.ನಗರದ ಮಹಿಳೆ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣ ಕುರಿತ ಅಂತಿಮ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜು.30ರಂದು ಪ್ರಕಟಿಸಲಿದೆ.

ಪ್ರಕರಣ ಸಂಬಂಧ ಪ್ರಜ್ವಲ್‌ ರೇವಣ್ಣ ಮತ್ತು ಸಿಐಡಿ ಎಸ್‌ಐಟಿ ಪೊಲೀಸರ ಪರ ಸರ್ಕಾರಿ ಅಭಿಯೋಜಕರ ವಾದ-ಪ್ರತಿವಾದ ಆಲಿಸಿ ಶುಕ್ರವಾರ ವಿಚಾರಣೆ ಪೂರ್ಣಗೊಳಿಸಿರುವ ನಗರದ ಜನಪ್ರತಿನಿಧಿಗಳ ವಿಶೇಷ (82ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌) ಕೋರ್ಟ್‌ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್ ಅವರು ಜು.30ಕ್ಕೆ ತೀರ್ಪು ಕಾಯ್ದಿರಿಸಿದ್ದಾರೆ.

ಇದರಿಂದ ಪ್ರಜ್ವಲ್‌ ರೇವಣ್ಣ ಅವರು ಪ್ರಕರಣದಲ್ಲಿ ಆರೋಪ ಮುಕ್ತರಾಗುತ್ತಾರೆಯೇ ಅಥವಾ ದೋಷಿಯಾಗಿ ದೃಢಪಟ್ಟು ಶಿಕ್ಷೆಗೆ ಒಳಗಾಗುತ್ತಾರೆಯೇ ಎಂಬುದು ಜು.30ರಂದು ತಿಳಿಯಲಿದೆ. ಪ್ರಜ್ವಲ್‌ ರೇವಣ್ಣ ಅವರು ಒಂದೊಮ್ಮೆ ತಪ್ಪಿತಸ್ಥರು ಎಂದು ದೃಢಪಟ್ಟರೆ ಜೈಲು ಶಿಕ್ಷೆಗೆ ಒಳಗಾಗುವುದು ಗ್ಯಾರಂಟಿ.

ಇದಕ್ಕೂ ಮುನ್ನ ವಿಚಾರಣೆಗೆ ಪೊಲೀಸರು ಬಾಡಿ ವಾರೆಂಟ್‌ ಮೇಲೆ ಪ್ರಜ್ವಲ್‌ ರೇವಣ್ಣ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಸಿಐಡಿಯ ಎಸ್‌ಐಟಿ ಪರ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್‌.ಜಗದೀಶ್‌ ಅವರು ತಮ್ಮ ವಾದ ಮತ್ತು ಅದನ್ನು ಬೆಂಬಲಿಸುವ ಕೆಲ ತೀರ್ಪಿಗೆ ಸಂಬಂಧಿಸಿದ ಲಿಖಿತ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಇದೇ ವೇಳೆ ಪ್ರಜ್ವಲ್‌ ರೇವಣ್ಣ ಪರ ವಕೀಲ ಜಿ.ಅರುಣ್‌ ಸಹ ತಮ್ಮ ವಾದ ಹಾಗೂ ಇನ್ನಿತರ ದಾಖಲೆಗಳನ್ನು ಸಲ್ಲಿಸಿದರು.

ಅವುಗಳನ್ನು ದಾಖಲಿಸಿಕೊಂಡ ನ್ಯಾಯಾಲಯವು ವಿಚಾರಣೆ ಪೂರ್ಣಗೊಂಡಿದ್ದು, ಜು.30ರಂದು ಅಂತಿಮ ತೀರ್ಪು ಪ್ರಕಟಿಸುವುದಾಗಿ ತಿಳಿಸಿತು.

ಅಲ್ಲದೆ, ಹೊಸದಾಗಿ ಬಾಡಿ ವಾರೆಂಟ್‌ ಜಾರಿಗೊಳಿಸಿ ಪ್ರಜ್ವಲ್‌ ರೇವಣ್ಣ ಅವರನ್ನು ಜು.30ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಸೂಚಿಸಿತು.

Read more Articles on