ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಎರಡನೇ ಮದುವೆಯಾಗುತ್ತಿದ್ದ ಗಂಡನನ್ನು ಹಿಡಿದು ಮಾನ ಹರಾಜು ಹಾಕಿದ ಘಟನೆ ಇಲ್ಲಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಕುಣಿಗಲ್
ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಎರಡನೇ ಮದುವೆಯಾಗುತ್ತಿದ್ದ ಗಂಡನನ್ನು ಹಿಡಿದು ಮಾನ ಹರಾಜು ಹಾಕಿದ ಘಟನೆ ಇಲ್ಲಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.ಘಟನೆ ವಿವರ: ಬೆಂಗಳೂರಿನ ಆರ್ ಆರ್ ನಗರ ಮೂಲದ ಹರಿಪ್ರಸಾದ್ ತನ್ನ ಮೊದಲ ಹೆಂಡತಿ ಲೇಪಾಕ್ಷಿಗೆ ವಿಚ್ಛೇದನ ನೀಡದೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಪುಣ್ಯ ಎಂಬಾಕೆಯನ್ನು ಎರಡನೇ ಮದುವೆ ಮಾಡಿಕೊಳ್ಳುವಾಗ ಎಡೆಯೂರಿನ ಕಲ್ಯಾಣ ಮಂಟಪದಲ್ಲಿ ಪೊಲೀಸರ ಜೊತೆ ಮದುವೆ ಮಂಟಪಕ್ಕೆ ಎಂಟ್ರಿಕೊಟ್ಟ ಲೇಪಾಕ್ಷಿ ಸಿನಿಮಾ ಮಾದರಿಯಲ್ಲಿ ಮದುವೆ ತಡೆದಿದ್ದಾರೆ. ಮದುಮಗ ಹರಿಪ್ರಸಾದ್ ತನ್ನ ಬಾಲ್ಯ ಸ್ನೇಹಿತೆ ಲೇಪಾಕ್ಷಿ ಅಪ್ರಾಪ್ತೆ ಇರುವಾಗಲೇ ಮದುವೆಯಾಗಿದ್ದ. ನಂತರ ಮದುವೆಯನ್ನು ಗುಟ್ಟಾಗಿ ಇಟ್ಟು ಆಕೆಗೆ 18 ವರ್ಷ ತುಂಬಿದ ನಂತರ ಸಾರ್ವಜನಿಕರ ಸಮ್ಮುಖದಲ್ಲಿ ಮದುವೆಯಾಗಿ 10 ವರ್ಷ ಸಂಸಾರ ನಡೆಸಿದ್ದ. ದಿನ ಕಳೆದಂತೆ ಲೇಪಾಕ್ಷಿಗೆ ತನ್ನ ಅತ್ತೆ ನಾದಿನಿ ಸೇರಿದಂತೆ ಗಂಡ ಹೆಚ್ಚು ತೊಂದರೆ ನೀಡುತ್ತಿದ್ದರು. ಹಾಗೂ ಆಕೆಯ ಸಂಬಳವನ್ನು ಕಸಿದುಕೊಂಡು ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಆಕೆ ದೂರಿದ್ದು, ಜೊತೆಗೆ ಹರಿಪ್ರಸಾದ್ಗೆ ಅಕ್ರಮ ಸಂಬಂಧಗಳು ಇದ್ದುದರಿಂದ ಕಲಹ ನಡೆದು ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜೊತೆಗೆ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹಾಕಿದ್ದರು. ಈ ಸಂಬಂಧ ಮಧ್ಯಸ್ಥಿಕೆ ನ್ಯಾಯಾಲದಲ್ಲಿ ಪುನಃ ಲೇಪಾಕ್ಷಿ ಜೊತೆಗೆ ಬಂದು ಬಾಳುವುದಾಗಿ ತಿಳಿಸಿದ್ದ ಹರಿಪ್ರಸಾದ್ , ಇತ್ತ ಮೊದಲ ಪತ್ನಿಗೆ ತಿಳಿಯದಂತೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಿಟ್ಟೂರು ಗ್ರಾಮದ ಯುವತಿಯ ಜೊತೆ ಮದುವೆ ನಿಗದಿ ಮಾಡಿಕೊಂಡು ಯಡಿಯೂರಿನ ಕಲ್ಯಾಣಮಂಟಪದಲ್ಲಿ ರವಿವಾರ ಹಸೆಮಣೆ ಏರುತ್ತಿದ್ದ ವಿಚಾರ ತಿಳಿಯುತ್ತಿದ್ದಂತ ಮೊದಲ ಪತ್ನಿ, ವಕೀಲರು ಹಾಗೂ ಪೊಲೀಸರ ಜೊತೆಗೂಡಿ ಕಲ್ಯಾಣ ಮಂಟಪಕ್ಕೆ ನುಗ್ಗಿ ಗಂಡನ ಮದುವೆಯನ್ನು ತಡೆದಿದ್ದಾರೆ. ಮೊದಲ ಪತ್ನಿ ಲೇಪಾಕ್ಷಿಗೆ ತಿಳಿಯದಂತೆ ಮತ್ತೊಬ್ಬಳನ್ನು ಮದುವೆಯಾಗಲು ತಯಾರಿ ನಡೆಸಿದ ಹರಿಪ್ರಸಾದ್ ತನ್ನ ಜಾತಿಯನ್ನೂ ಸಹ ಮುಚ್ಚಿಟ್ಟು ತಾನು ಕೂಡ ಒಕ್ಕಲಿಗ ಎಂದು ಸುಳ್ಳು ಹೇಳಿ ವಧು ಮತ್ತು ಆಕೆಯ ತಾಯಿ ಮನವೊಲಿಸಿ ಮೋಸ ಮಾಡಿದ್ದಾನೆ ಎಂದು ಆಕೆ ಸಂಬಂಧಿಗಳು ದೂರಿದ್ದಾರೆ. ಹರಿಪ್ರಸಾದ್ ವಿಚ್ಛೇದನೆ ಪಡೆಯದೆ ಮತ್ತೊಂದು ಮದುವೆಗೆ ಸಿದ್ಧತೆ ಬಗ್ಗೆ ಅಮೃತೂರ್ ಪೊಲೀಸ್ ಠಾಣೆಗೆ ಮೊದಲ ಪತ್ನಿ ದೂರು ನೀಡಿದ್ದು, ಹಣಕಾಸು, ಒಡವೆ ಹಾಗೂ ಸುಳ್ಳು ಹೇಳಿ ಮದುವೆಗೆ ಒಪ್ಪಿಸಿದ್ದಾನೆ ಎಂದು ವಧುವಿನ ತಾಯಿ ದೂರು ನೀಡಿದ್ದಾರೆ, ಆದರೆ ಎರಡು ಪ್ರಕರಣಗಳನ್ನು ಅವರವರ ವ್ಯಾಪ್ತಿಯ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುವುದು ಎಂದು ಹೇಳಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.