ಪಂಚ ಗ್ಯಾರಂಟಿ ಮುಂದುವರಿಯಲಿವೆ: ಸಚಿವೆ ಹೆಬ್ಬಾಳಕರ

| Published : Aug 21 2024, 12:30 AM IST

ಸಾರಾಂಶ

ಪಂಚ ಗ್ಯಾರಂಟಿ ಯೋಜನೆಗಳು ಜನರಿಗಾಗಿ ತಂದಿರುವ ಯೋಜನೆಗಳು. ಜನರಿಗೋಸ್ಕರ ಅವುಗಳನ್ನು ಮುಂದುವರಿಸಲಾಗಿದೆ. ಚುನಾವಣೆ ಫಲಿತಾಂಶಕ್ಕೂ ಇದಕ್ಕೂ ಸಂಬಂಧವಿಲ್ಲ. ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆಯುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಪಂಚ ಗ್ಯಾರಂಟಿ ಯೋಜನೆಗಳು ಜನರಿಗಾಗಿ ತಂದಿರುವ ಯೋಜನೆಗಳು. ಜನರಿಗೋಸ್ಕರ ಅವುಗಳನ್ನು ಮುಂದುವರಿಸಲಾಗಿದೆ. ಚುನಾವಣೆ ಫಲಿತಾಂಶಕ್ಕೂ ಇದಕ್ಕೂ ಸಂಬಂಧವಿಲ್ಲ. ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆಯುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಮಂಗಳವಾರ ಪಟ್ಟಣದ ಈರಣ್ಣ ನಗರದ ಮಡ್ಡಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ, ರಾಜಗೋಪುರದ ಕಳಸಾರೋಹಣ, ಮಹಾದ್ವಾರದ ಉದ್ಘಾಟನೆ ಹಾಗೂ ರಥೋತ್ಸವ ನಿಮಿತ್ತ ನಡೆದ ಸತ್ಸಂಗ ಸಮ್ಮೇಳನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಗುಡಿ, ಗಂಡಾರಗಳ ವೈಭವ ನೋಡುವುದಾದರೆ ಅರಬಾವಿ ಕ್ಷೇತ್ರದಲ್ಲಿ ನೋಡಬೇಕು. ಅಷ್ಟು ಚೆನ್ನಾಗಿ ಇಲ್ಲಿನ ದೇವಸ್ಥಾನಗಳು, ಮಹಾದ್ವಾರಗಳು ನಿರ್ಮಾಣವಾಗಿವೆ ಎಂದ ಸಚಿವರು, ಇಲ್ಲಿನ ಜನರು ಯಾವ ಶಾಸಕರು, ಸಂಸದರು ದುಡ್ಡು ಕೊಡುತ್ತಾರೆ ಎಂದು ಕಾಯುವುದಿಲ್ಲ. ತಾವೇ ಕಿಸೆಯಿಂದ ದುಡ್ಡು ಹಾಕಿ ಗುಡಿ ಗುಂಡಾರ ಕಟ್ಟುತ್ತಾರೆ. ಅಷ್ಟು ದೊಡ್ಡ ಮನಸ್ಸಿನ ಜನರು ಇಲ್ಲಿನವರು ಎಂದು ಪ್ರಶಂಸಿಸಿದರು.

ಭಾರತ 5 ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಅತ್ಯಂತ ಶ್ರೀಮಂತ ಇತಿಹಾಸ ನಮ್ಮದು. ಮನೆಯಲ್ಲಿ ಬಂಗಾರವಿಲ್ಲದಿದ್ದರೂ ದೇವರ ಕಳಶಕ್ಕೆ ಬಂಗಾರ ಹಾಕುತ್ತೇವೆ. ಅಂತಹ ಭಕ್ತಿ ನಮ್ಮದು ಎಂದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಂಕಣವಾಡಿಯ ಮಾರುತಿ ಶರಣರು, ಬೆಳಗಲಿಯ ಸಿದ್ಧರಾಮ ಶಿವಯೋಗಿಗಳು ಆಶೀರ್ವಚನ ನೀಡಿದರು. ಮಡ್ಡಿ ವೀರಭದ್ರೇಶ್ವರ ದೇವಸ್ಥಾನದ ಅಧ್ಯಕ್ಷ ಭೀಮಪ್ಪ ಹಂದಿಗುಂದ ಅಧ್ಯಕ್ಷತೆ ವಹಿಸಿದ್ದರು ಮುಖಂಡರಾದ ಅಶೋಕ ಪೂಜಾರಿ, ಡಾ.ಮಹಾಂತೇಶ ಕಡಾಡಿ, ಭೀಮಪ್ಪ ಗಡಾದ, ಬಿ.ಬಿ. ಬೆಳಕೂಡ, ಲಗಮಣ್ಣ ಕಳಸಣ್ಣವರ, ರಾವಸಾಬ್ ಬೆಳಕೂಡ, ನಿಂಗಪ್ಪ ಫಿರೋಜಿ, ದೇವಸ್ಥಾನದ ಕಮಿಟಿಯ ಉಪಾಧ್ಯಕ್ಷ ರಾಮಪ್ಪ ಸೋನವಾಲಕರ, ಕಾರ್ಯದರ್ಶಿ ಮಲ್ಲಪ್ಪ ಗಾಣಿಗೇರ ಹಾಗೂ ದೇವಸ್ಥಾನ ಮಂಡಳಿ ಸದಸ್ಯರು ಇದ್ದರು.