ಐದು ಸಂಪುಟಗಳು ಎಚ್ಕೆ ರಾಜಕೀಯ ಪರಿಶ್ರಮ, ತ್ಯಾಗ, ತಾಳ್ಮೆ ಸಂಕೇತ:ಸಭಾಧ್ಯಕ್ಷ ಯು.ಟಿ. ಖಾದರ್

| Published : Jan 14 2024, 01:32 AM IST

ಐದು ಸಂಪುಟಗಳು ಎಚ್ಕೆ ರಾಜಕೀಯ ಪರಿಶ್ರಮ, ತ್ಯಾಗ, ತಾಳ್ಮೆ ಸಂಕೇತ:ಸಭಾಧ್ಯಕ್ಷ ಯು.ಟಿ. ಖಾದರ್
Share this Article
  • FB
  • TW
  • Linkdin
  • Email

ಸಾರಾಂಶ

ಸದನದಲ್ಲಿ ಎಚ್‌.ಕೆ. ಪಾಟೀಲ ಐದು ಸಂಪುಟಗಳ ಲೋಕಾರ್ಪಣೆ ಮಾಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಸಚಿವ ಎಚ್.ಕೆ. ಪಾಟೀಲರ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಧಾರವಾಡ

ಸದನದಲ್ಲಿ ಎಚ್.ಕೆ. ಪಾಟೀಲ ಎಂಬ ಐದು ಸಂಪುಟಗಳು ಭವಿಷ್ಯದ ಪೀಳಿಗೆಗೆ ನೀಡಿದ ಕೊಡುಗೆ. ಈ ಸಂಪುಟಗಳು ಅವರ ದೀರ್ಘ ಕಾಲದ ರಾಜಕೀಯದ ಪ್ರರಿಶ್ರಮ, ತ್ಯಾಗ ಮತ್ತು ತಾಳ್ಮೆಯ ಸಂಕೇತ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ ವಿಶ್ಲೇಷಿಸಿದರು.

ಇಲ್ಲಿಯ ಕರ್ನಾಟಕ ವಿಶ್ವ ವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಕರ್ನಾಟಕ ಸಂಶೋಧಕರ ಒಕ್ಕೂಟ ಶನಿವಾರ ಆಯೋಜಿಸಿದ್ದ ‘ಸದನದಲ್ಲಿ ಎಚ್.ಕೆ. ಪಾಟೀಲ’ ಐದು ಸಂಪುಟಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸದನದಲ್ಲಿ ಸುದೀರ್ಘ ಕಾಲ ಅವರು ಮಾಡಿದ ಭಾಷಣ, ಚರ್ಚೆ, ಮಂಡಿಸಿದ ವಿಚಾರಗಳನ್ನು ಸಮಾಜಕ್ಕೆ ಅರ್ಪಿಸುವ ಕೆಲಸ ಈ ಕೃತಿ ಮೂಲಕ ಆಗಿದೆ. ಗ್ರಂಥಾಲಯದ ಮೂಲಕ ಈ ಸಂಪುಟಗಳು ಸಾರ್ವಜನಿಕರಿಗೆ ತಲುಪುವ ಕಾರ್ಯವಾಗಬೇಕು. ಯುವಕರಿಗೆ, ರಾಜಕಾರಣಿಗಳಿಗೆ ಈ ಕೃತಿಗಳು ಪ್ರೇರಣೆ ನೀಡಲಿ ಎಂದು ಹಾರೈಸಿದರು.

ವಿಧಾನಪರಿಷತ್‌ ಮಾಜಿ ಸಭಾಪತಿ ವಿ.ಆರ್. ಸುದರ್ಶನ ಮಾತನಾಡಿ, ಚಿಂತಕ ಚಾವಡಿ ಎಂದು ವಿಧಾನ ಪರಿಷತ್ತಿಗೆ ಕರೆಯುತ್ತಾರೆ. ಆದರೆ, ಪರಿಷತ್ ಕೆಲವೇ ರಾಜ್ಯದಲ್ಲಿ ಇದೆ. ಇದಕ್ಕೆ ಕೇಂದ್ರ ಸರ್ಕಾರ ಒಂದು ರಾಷ್ಟ್ರೀಯ ನೀತಿ ರೂಪಿಸಬೇಕು. ಎಲ್ಲ ರಾಜ್ಯಗಳಲ್ಲೂ ಪರಿಷತ್‌ ಇರುವಂತೆ ನೀತಿ ರೂಪಿಸಬೇಕು. ಇದಲ್ಲದೆ ವಿಧಾನಸಭೆ ಕ್ಷೇತ್ರಗಳ ಬದಲಾವಣೆ ಆಗಾಗ ಆಗುತ್ತದೆ. ಆದರೆ ಪರಿಷತ್‌ನಲ್ಲಿ ಇದಾಗುತ್ತಿಲ್ಲ. ಈ ಕುರಿತು ಸಹ ಕೇಂದ್ರ ಸರ್ಕಾರ ಗಮನಿಸಬೇಕು ಎಂದ ಅವರು, ಜಿಲ್ಲೆಗೊಂದು ವಿಶ್ವವಿದ್ಯಾಲಯ ಮಾಡುವ ಕುರಿತು ಸರ್ಕಾರ ಮತ್ತೊಮ್ಮೆ ಪರಿಶೀಲಿಸಬೇಕು. ಜಿಲ್ಲೆಗೊಂದು ವಿವಿ ಮಾಡಿದರೆ ಗುಣಮಟ್ಟ ಉಳಿಯುವುದಿಲ್ಲ. ಹೀಗಾಗಿ, ಪುನರ್ ಪರಿಶೀಲನೆ ಮಾಡಬೇಕು. ಚುನಾವಣಾ ವ್ಯವಸ್ಥೆ ಸಹ ಸುಧಾರಣೆ ಆಗಬೇಕು ಎಂದು ಪ್ರತಿಪಾದಿಸಿದರು.

ಕಾನೂನು, ನ್ಯಾಯ, ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ ಮಾತನಾಡಿ, ಸದನಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಅಧಃಪತನವಾಗುತ್ತಿದ್ದು, ಅವುಗಳ ಪುನರುತ್ಥಾನ ಆಗಬೇಕಿದೆ. ಈ ವಿಷಯವಾಗಿ ನಾವು ಗಂಭೀರವಾಗಿ ಚಿಂತನೆ ಮಾಡಬೇಕಿದೆ. 25 ವರ್ಷಗಳ ಹಿಂದೆ ವಿಧಾನಸಭೆ ಅಥವಾ ವಿಧಾನ ಪರಿಷತ್ತಿನಲ್ಲಿ ಗೌರವ ವಾಚಕ ಹೇಳದೇ ಯಾರೂ ಭಾಷಣ ಪ್ರಾರಂಭ ಮಾಡುತ್ತಿರಲಿಲ್ಲ. ಎಷ್ಟೇ ಮಿತ್ರ ಸದಸ್ಯರು ಇದ್ದರೂ ಗೌರವಾನ್ವಿತ ಸದಸ್ಯರೇ, ಗೌರವಾನ್ವಿತ ಅಧ್ಯಕ್ಷರೇ ಎಂದೇ ಮಾತು ಪ್ರಾರಂಭಿಸುತ್ತಿದ್ದರು. ಆದರೆ, ಪ್ರಸ್ತುತ ಗೌರವ ವಾಚಕ ಶಬ್ದಗಳೇ ಅಪರೂಪವಾಗಿವೆ. ಅಲ್ಲದೇ, ಒಂಟಿ ಅಕ್ಷರದಲ್ಲೂ ಮಾತನಾಡುವಷ್ಟು ವಾತಾವರಣ ಹದಗೆಡುತ್ತಿದ್ದು, ವಿಧಾನಪರಿಷತ್‌ ಸಭಾಪತಿಗಳು, ವಿಧಾನಸಭಾಧ್ಯಕ್ಷರು ಈ ಬಗ್ಗೆ ಚಿಂತನೆ ಮಾಡಬೇಕು ಎಂದರು.

ಸಿಎಂ ಆಗುವ ಅವಕಾಶವಿದೆ:

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ಎಚ್.ಕೆ. ಪಾಟೀಲ ಕಾರ್ಯ ಸ್ಮರಣೀಯ. ಸಹಕಾರಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಸೇರಿ ಅನೇಕ ಕ್ಷೇತ್ರಗಳಲ್ಲಿ ಅನೇಕ ಕೊಡುಗೆ ನೀಡಿದ್ದಾರೆ. ಸಂಪುಟಗಳು ಯುವ ಪೀಳಿಗೆಗೆ ಮಾದರಿಯಾಗಲಿ. ತಾಳ್ಮೆ, ಸಹನೆ ಅವರಲ್ಲಿದೆ. ಅವರಿಂದ ಯುವ ಪೀಳಿಗೆ ಕಲಿಯುವುದು ಸಾಕಷ್ಟಿದೆ. ಪಾಟೀಲರಿಗೆ ಮುಖ್ಯಮಂತ್ರಿ ಆಗುವ ಅವಕಾಶವೂ ಇದೆ ಎಂದು ಭವಿಷ್ಯ ನುಡಿದರು.

ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ರಾಜ್ಯದ ಪ್ರತಿ ಶಾಸಕರು ಐದು ವರ್ಷಗಳ ಸಾಧನೆಯ ಪುಸ್ತಕವನ್ನು ಪ್ರಕಟಿಸಿ ಜನರಿಗೆ ವಿತರಿಸುವ ಸಲಹೆ ನೀಡಿದರು. ಮಾಜಿ ಸಭಾಪತಿಗಳಾದ ಬಿ.ಎಲ್‌. ಶಂಕರ ಹಾಗೂ ವೀರಣ್ಣ ಮತ್ತಿಕಟ್ಟಿ ಮಾತನಾಡಿದರು. ಕೇಂದ್ರಿಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತೇಜಸ್ವಿ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ, ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ, ಕಾ.ತ. ಚಿಕ್ಕಣ್ಣ, ನೂರಹ್ಮದ್ ಮಕಾನದಾರ, ಡಾ. ರೇವಯ್ಯ ಒಡೆಯರ್, ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ವೇದಿಕೆಯಲ್ಲಿದ್ದರು.ಮಂತ್ರಿಸ್ಥಾನಕ್ಕಾಗಿ ಸಭಾಧ್ಯಕ್ಷ ಸ್ಥಾನ ನಿರಾಕರಿಸಬೇಡಿ

ಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದು ಸಭಾಧ್ಯಕ್ಷ ಸ್ಥಾನ ನೀರಾಕರಿಸಬೇಡಿ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಮಂತ್ರಿ ಸ್ಥಾನಕ್ಕಾಗಿ ಹಠ ತೊಟ್ಟಿರುವ ಶಾಸಕರ ಬಗೆಗೆ ನಗೆ ಚಟಾಕಿ ಹಾರಿಸಿದರು.ಸದನದಲ್ಲಿ ಎಚ್.ಕೆ. ಪಾಟೀಲ್ ಸಂಪುಟಗಳ ಗ್ರಂಥ ಲೋಕಾರ್ಪಣೆ ಮಾಡಿದ ಅವರು, ಸಭಾಪತಿ ಸ್ಥಾನ ಬಹಳಷ್ಟು ಪ್ರಾಮುಖ್ಯತೆ ಹೊಂದಿದೆ. ಆ ಸ್ಥಾನ ಸಿಕ್ಕಾಗ ತೆಗೆದುಕೊಳ್ಳುವುದು ಒಳ್ಳೆಯದು. ಪುಸ್ತಕ ಲೋಕಾರ್ಪಣೆ ಅಷ್ಟೇ ಅಲ್ಲದೇ ಎಲ್ಲ ರೀತಿಯ ಗೌರವಯುತ ಜವಾಬ್ದಾರಿಗಳು ಸಭಾಧ್ಯಕ್ಷ ಸ್ಥಾನಕ್ಕೆ ಇದೆ. ಯುವ ಶಾಸಕರು ಇತ್ತೀಚೆಗೆ ಸಭಾಧ್ಯಕ್ಷ ಸ್ಥಾನ ಬೇಡ ಎಂದು ನೀರಾಕರಿಸಬೇಡಿ ಎಂದು ಸಲಹೆ ನೀಡಿದರು.