ಸಾರಾಂಶ
ಹೆಬ್ಬಳ್ಳಿಯಲ್ಲಿ 7ನೇ ವಾರ್ಡ್ನಲ್ಲಿ 400 ಹೆಚ್ಚು ದಲಿತ ಹಾಗೂ ಹಿಂದುಳಿದ ವರ್ಗದ ಕುಟುಂಬಗಳಿಗೆ ಮೂಲಸೌಕರ್ಯ ಒದಗಿಸುವಲ್ಲಿ ಪಂಚಾಯತಿ ವಿಫಲವಾಗಿದೆ. ಗ್ರಾಮದ 12 ವಾರ್ಡ್ಗಳಿಗೆ 6ರಿಂದ 8 ದಿನಗಳ ಅಂತರದಲ್ಲಿ ನೀರು ಪೂರೈಸುತ್ತಾರೆ. ಆದರೆ, 7ನೇ ವಾರ್ಡ್ಗೆ 12ರಿಂದ 15 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತದೆ.
ಧಾರವಾಡ:
ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಿಗದಿಪಡಿಸಿದ ಗ್ರಾಮ ಪಂಚಾಯಿತಿಯ ಗ್ರಾಮಸಭೆ ತಡೆಹಿಡಿಯುವುದು ಮತ್ತು ಕುಡಿಯುವ ನೀರಿನ ತಾರತಮ್ಯ ತಪ್ಪಿಸುವಂತೆ ಹೆಬ್ಬಳ್ಳಿ ಗ್ರಾಪಂ ಸದಸ್ಯರು, ಗ್ರಾಮಸ್ಥರು ತಾಲೂಕು ಪಂಚಾಯತಿ ಇಒ ಅನುಪಸ್ಥಿತಿಯಲ್ಲಿ ತಾಪಂ ಅಧೀಕ್ಷಕ ವಿಜಯ ಮಣ್ಣೂರ ಅವರಿಗೆ ಮನವಿ ಸಲ್ಲಿಸಿದರು.ಹೆಬ್ಬಳ್ಳಿಯ 7ನೇ ವಾರ್ಡಿನಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳನ್ನು ಚರ್ಚಿಸಲು ನಾವು ವಾರ್ಡ್ ಸಭೆಗೆ ಕಾಯುತ್ತಿದ್ದೇವು. ಆದರೆ, ಗ್ರಾಮ ಪಂಚಾಯಿತಿ ಅವರು 7ನೇ ವಾರ್ಡಿನ ಸಭೆ ನಡೆಸದೆ ಜ. 28ರಂದು ಗ್ರಾಮಸಭೆ ನಿಗದಿ ಪಡಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಹೀಗಾಗಿ ತಾವುಗಳು ವಾರ್ಡ್ ಸಭೆ ನಡೆಸುವರೆಗೂ ಗ್ರಾಮಸಭೆ ಮಾಡದಂತೆ ಪಿಡಿಒಗೆ ಸೂಚಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
7ನೇ ವಾರ್ಡ್ನಲ್ಲಿ 400 ಹೆಚ್ಚು ದಲಿತ ಹಾಗೂ ಹಿಂದುಳಿದ ವರ್ಗದ ಕುಟುಂಬಗಳಿಗೆ ಮೂಲಸೌಕರ್ಯ ಒದಗಿಸುವಲ್ಲಿ ಪಂಚಾಯತಿ ವಿಫಲವಾಗಿದೆ. ಗ್ರಾಮದ 12 ವಾರ್ಡ್ಗಳಿಗೆ 6ರಿಂದ 8 ದಿನಗಳ ಅಂತರದಲ್ಲಿ ನೀರು ಪೂರೈಸುತ್ತಾರೆ. ಆದರೆ, 7ನೇ ವಾರ್ಡ್ಗೆ 12ರಿಂದ 15 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತದೆ. ಕೆಲವೊಮ್ಮೆ ಅವುಗಳಲ್ಲಿ ಪಾಚಿ, ಹುಳ್ಳು ಬಂದರೂ ಅನಿವಾರ್ಯವಾಗಿ ಆ ನೀರನ್ನೇ ಕುಡಿಯುತ್ತಿದ್ದಾರೆ. ಹೆಬ್ಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆರು ಮನೆಗೆ ತಪಾಸಣೆ ಬಂದಾಗ ಇಂತಹ ನೀರು ಉಪಯೋಗಿಸಬಾರದು ಎಂದು ತಿಳಿಹೇಳಿದರೂ ಸಹ ಅನಿವಾರ್ಯವಾಗಿ ಅವುಗಳನ್ನೇ ಉಪಯೋಗಿಸುತ್ತಿದ್ದೇವೆ. ಇದರಿಂದ ಸಾರ್ವಜನಿಕರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಹೀಗಾಗಿ ನಮಗೆ ಕನಿಷ್ಠ ಎಂಟು ದಿನಗಳಿಗೆ ಒಮ್ಮೆಯಾದರು ನೀರು ಪೂರೈಸುವಂತೆ ಒತ್ತಾಯಿಸಿದರು.ಈ ವೇಳೆ ಗ್ರಾಪಂ ಸದಸ್ಯರಾದ ಬಸವರಾಜ ಹೆಬ್ಬಾಳ, ಬಸವರಾಜ ಹಡಪದ, ಗ್ರಾಮಸ್ಥರಾದ ಶಂಕರ ದುರಿತ್ನವರ, ಸಹದೇವ ದುರಿತ್ನವರ, ರಾಜಪ್ಪ ತೇರದಾಳ, ವಾಸುದೇವ ಮಂಗೋಡಿ, ಹಜರತ್ ಗುಡಸಲಮನಿ ಇದ್ದರು.