ಸಾರಾಂಶ
ಕೋಟದ ಪಂಚವರ್ಣ ಯುವಕ ಮಂಡಲ - ಮಹಿಳಾ ಮಂಡಲ ನೇತೃತ್ವದಲ್ಲಿ ಚಿತ್ರನಟ ಪುನಿತ್ ರಾಜ್ ಕುಮಾರ್ ಅವರ 3ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು. ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಮಾಜಿ ಅಧ್ಯಕ್ಷ ಸೀತಾರಾಮ ಆಚಾರ್ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕೋಟ
ಬಡವರ, ಅಶಕ್ತರ ಸೇವೆಯ ಮೂಲಕ ಪುನಿತ್ ರಾಜ್ ಕುಮಾರ್ ಅವರಂತೆ ವ್ಯಕ್ತಿತ್ವ ರೂಪಿಸಿಕೊಂಡರೆ ಆ ಮೂಲಕ ಜೀವನದಲ್ಲಿ ಸಾರ್ಥಕ್ಯ ಕಾಣಲು ಸಾಧ್ಯ ಎಂದು ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಮಾಜಿ ಅಧ್ಯಕ್ಷ ಸೀತಾರಾಮ ಆಚಾರ್ ಹೇಳಿದ್ದಾರೆ.ಕೋಟದ ಪಂಚವರ್ಣ ಯುವಕ ಮಂಡಲ - ಮಹಿಳಾ ಮಂಡಲ ನೇತೃತ್ವದಲ್ಲಿ ಚಿತ್ರನಟ ಪುನಿತ್ ರಾಜ್ ಕುಮಾರ್ ಅವರ 3ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತೆರೆಮರೆಯಲ್ಲಿ ಸಮಾಜ ಸೇವೆಗೈದು ನಮ್ಮೆಲ್ಲರಿಗೂ ಮಾದರಿ ಬದುಕಿನ ಸಂದೇಶ ನೀಡಿದ ಪುನೀತ್ ರಾಜ್ ಕುಮಾರ್ ಜೀವನ ಚರಿತ್ರೆ ಇತಿಹಾಸ ಪುಟದಲ್ಲಿ ಸೇರಿಕೊಂಡಿದೆ. ಅಂತಹ ವ್ಯಕ್ತಿಯ ಹೆಸರಿನಲ್ಲಿ ವಿದ್ಯಾನಿಧಿ ಯೋಜನೆ ರೂಪಿಸಿದ ಪಂಚವರ್ಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ್ ಎಚ್. ಕುಂದರ್ ಅವರು ಪುನಿತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಭಾರ್ಚನೆಗೈದು ಪುನೀತ್ ಜೀವನದ ತಳಹದಿಯನ್ನು ಸಭೆಯಲ್ಲಿ ಬಿಚ್ಚಿಟ್ಟರು.ಸಭೆಯ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು. ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ಪುನಿತ್ ರಾಜ್ ಕುಮಾರ್ ಅಭಿಮಾನಿ ಬಳಗದ ಪ್ರಮುಖರಾದ ದಿನೇಶ್ ಆಚಾರ್ ಮಣೂರು ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮವನ್ನು ಸದಸ್ಯರಾದ ಸಂತೋಷ್ ಕುಮಾರ್ ಕೋಟ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು.