ಸಾರಾಂಶ
ಶಿವಮೊಗ್ಗ: ಜಿಲ್ಲೆಯ ವಿವಿಧ ಜನನಿಬಿಡ ಸ್ಥಳಗಳಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ವಾಹನ ಅಪಘಾತಗಳು, ಸಾವು-ನೋವುಗಳನ್ನು ನಿಯಂತ್ರಿಸಲು ಸಾರಿಗೆ, ಲೋಕೋಪಯೋಗಿ ಸೇರಿದಂತೆ ಸಂಬಂಧಿಸಿದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ವಿಶೇಷ ಗಮನಹರಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಸೂಚಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸಾರಿಗೆ ಸುರಕ್ಷತಾ ಕ್ರಮಗಳ ಕುರಿತು ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪದೇಪದೇ ಆಕಸ್ಮಿಕ ಅನಾಹುತಗಳು, ಸಂಭವಿಸುವ ಸ್ಥಳಗಳ ಬಗ್ಗೆ ಆಯಾ ತಾಲೂಕುಗಳ ಪೊಲೀಸ್ ಠಾಣೆಗಳಿಂದ ಮಾಹಿತಿ ಪಡೆದು, ಅದರ ನಿಯಂತ್ರಣಕ್ಕಾಗಿ ಕೈಗೊಳ್ಳಬಹುದಾದ ಸುರಕ್ಷತಾ ಕ್ರಮಗಳ ಕುರಿತು ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸಲು ಕ್ರಿಯಾಯೋಜನೆಯನ್ನು ತಯಾರಿಸಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಕೇಂದ್ರ ಸಾರಿಗೆ ಮತ್ತು ರಸ್ತೆ ಇಲಾಖೆಯಿಂದ ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಸಲು ಯತ್ನಿಸಲಾಗುವುದು ಎಂದರು. ದೇಶದ ಪ್ರತಿಯೊಬ್ಬ ಪ್ರಜೆಯೂ ಅಮೂಲ್ಯ ಆಸ್ತಿಯಾಗಿದ್ದು, ಯಾವುದೇ ವ್ಯಕ್ತಿ ಅಪಘಾತಗಳಿಂದ ಮರಣ ಹೊಂದಬಾರದು. ಆಕಸ್ಮಿಕ ಸಾವು ದೇಶಕ್ಕೂ ಅವರ ಅವಲಂಬಿತ ಕುಟುಂಬಕ್ಕೂ ನಷ್ಟ ಉಂಟುಮಾಡಲಿದೆ. ಆದ್ದರಿಂದ ಅಪಘಾತಗಳ ನಿಯಂತ್ರಣ ಮಾಡುವುದು ಕೇಂದ್ರ ಸಾರಿಗೆ ಸಚಿವ ನಿತಿನ್ಗಡ್ಕ ಅವರ ಆಶಯವೂ ಆಗಿದೆ. ನಗರದ ಕೇಂದ್ರ ಸ್ಥಳದಿಂದ ವಿಮಾನ ನಿಲ್ದಾಣಕ್ಕೆ ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಲೇ ಬಸ್ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಸಾರಿಗೆ ಇಲಾಖಾಧಿಕಾರಿಗಳು ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ನಗರದ ರೈಲ್ವೇ ನಿಲ್ದಾಣದ ಮುಂಭಾಗದಲ್ಲಿ ಎಲ್ಲೆಂದರಲ್ಲಿ ನಿಂತಿರುವ ಆಟೋಗಳಿಂದಾಗಿ ಸಾರ್ವಜನಿಕರಿಗೆ, ಪ್ರಯಾಣಿಕರಿಗೆ ಅನಗತ್ಯ ಕಿರಿಕಿರಿ, ಅಶಿಸ್ತು ಉಂಟಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ನಿರಂತರವಾಗಿ ಬರುತ್ತಲೇ ಇವೆ. ಆದ್ದರಿಂದ ಪಾವತಿ ಬಳಸುವ ಆಟೋ ಕೌಂಟರ್ಗಳನ್ನು ತೆರೆಯಬೇಕು. ಅದಕ್ಕಾಗಿ ಆಟೋ ಚಾಲಕರ ಸಂಘಟನೆಗಳ ಸಹಕಾರ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಅವರು, ಈ ವ್ಯವಸ್ಥೆ ಅಧಿಕೃತವಾಗಿ ಜಾರಿಯಾಗುವವರೆಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ಸಲಹೆ ನೀಡಿದರು.ಶಿವಮೊಗ್ಗ- ಶಿಕಾರಿಪುರ ಮಾರ್ಗದಲ್ಲಿ ಬರುವ ಹಾರೋಗೊಪ್ಪ ಗ್ರಾಮದ ಸಮೀಪದಲ್ಲಿ ಭಾರಿ ವಾಹನ ಅನಾಹುತಗಳ ಸಂಭವಿಸುತ್ತಲೆ ಇರುತ್ತವೆ. ಅವುಗಳ ನಿಯಂತ್ರಣಕ್ಕಾಗಿ ಲೋಕೋಪಯೋಗಿ ಇಲಾಖಾಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಕೆಲವು ರಾಷ್ಟ್ರೀಯ ಹೆದ್ದಾರಿಗಳ ನಿಗದಿತ ಪ್ರದೇಶಗಳಲ್ಲಿಯೂ ಅಪಘಾತಗಳು ಆಗುತ್ತಿರುವ ಮಾಹಿತಿ ಇದೆ. ಅವುಗಳನ್ನು ನಿಯಂತ್ರಿಸಲು ಕೂಡಲೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು.
ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಮತ್ತು ತಡಗಣಿ ಗ್ರಾಮಗಳಿಗೆ ಹೊಂದಿಕೊಂಡಂತಿರುವ ಮುಖ್ಯರಸ್ತೆಗಳೂ ಸಹ ಸಂಭವನೀಯ ಅಪಘಾತ ವಲಯಗಳೆಂದು ಪರಿಗಣಿಸಿ, ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದರು.ಎಸ್ಪಿ ಜಿ.ಕೆ.ಮಿಥುನ್ಕುಮಾರ್ ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ಸುಮಾರು 51 ಕಪ್ಪುಸ್ಥಳಗಳನ್ನು ಗುರುತಿಸಲಾಗಿದ್ದು, ಅದರ ನಿಯಂತ್ರಣಕ್ಕಾಗಿ ಲೋಕೋಪಯೋಗಿ ಇಲಾಖೆಗೆ ಕ್ರಮಕ್ಕಾಗಿ ಮಾಹಿತಿ ನೀಡಲಾಗಿದೆ ಎಂದರು.ಸಭೆಯಲ್ಲಿ ರಸ್ತೆ ನಿಯಮಗಳ ಉಲ್ಲಂಘನೆ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ವಿಧಿಸಿದ ದಂಡವನ್ನು ಪಾವತಿಸಲು ಕೈಗೊಳ್ಳುತ್ತಿರುವ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ತರಲು ಹಾಗೂ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಬಗ್ಗೆಯೂ ಚರ್ಚಿಸಲಾಯಿತು. ಅಲ್ಲದೇ ಇದೇ ಸಂದರ್ಭದಲ್ಲಿ ರಸ್ತೆ ಸುರಕ್ಷತಾ ನಿಯಮದ ಪ್ರಚಾರ ಫಲಕಗಳನ್ನು ಸಂಸದರು ಬಿಡುಗಡೆಗೊಳಿಸಿದರು.ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಜಿಪಂ ಸಿಇಒ ಎನ್.ಹೇಮಂತ್, ಮಹಾನಗರಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಲೋಕೋಪಯೋಗಿ ಇಲಾಖೆ ಅಭಿಯಂತರ ವಿಜಯ್ಕುಮಾರ್, ವಲಯ ಅರಣ್ಯಾಧಿಕಾರಿ ಶಿವಶಂಕರ್ ಮತ್ತಿತರರಿದ್ದರು.