ಶ್ರದ್ಧೆಯಿಂದ ಓದಿನ ಕಡೆ ಗಮನಹರಿಸಿ ಗುರಿ ತಲುಪಿ : ಜಯದೇವ್ ಕರೆ

| Published : Sep 14 2025, 01:04 AM IST

ಶ್ರದ್ಧೆಯಿಂದ ಓದಿನ ಕಡೆ ಗಮನಹರಿಸಿ ಗುರಿ ತಲುಪಿ : ಜಯದೇವ್ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ವಿದ್ಯಾರ್ಥಿಗಳು ಶಿಸ್ತು, ತಾಳ್ಮೆ ಹಾಗೂ ವಿನಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶ್ರದ್ಧೆಯಿಂದ ಓದಿನ ಕಡೆ ಗಮನಹರಿಸಿ ತಮ್ಮ ಗುರಿ ತಲುಪಬೇಕು ಎಂದು ಎಐಟಿ ಕಾಲೇಜು ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ್ ಹೇಳಿದರು.

- ನಗರದ ಎಐಟಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರವೇಶ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿದ್ಯಾರ್ಥಿಗಳು ಶಿಸ್ತು, ತಾಳ್ಮೆ ಹಾಗೂ ವಿನಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶ್ರದ್ಧೆಯಿಂದ ಓದಿನ ಕಡೆ ಗಮನಹರಿಸಿ ತಮ್ಮ ಗುರಿ ತಲುಪಬೇಕು ಎಂದು ಎಐಟಿ ಕಾಲೇಜು ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ್ ಹೇಳಿದರು.ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ನಡೆದ ಪ್ರಸಕ್ತ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವ ಸಮೂಹ ಉನ್ನತ ಶಿಕ್ಷಣದ ಕಡೆಗೆ ಗಮನ ಹರಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಎಐಟಿ ಶಿಕ್ಷಣ ಸಂಸ್ಥೆ ಸದಾ ಕಾಲ ನಿಮ್ಮೊಂದಿಗೆ ಇರಲಿದೆ. ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು, ಸಂಸ್ಕಾರ, ಸಾಮರಸ್ಯದ ಜೀವನದ ಅಂಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಆಧುನಿಕ ಶಿಕ್ಷಣಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಗಣಕಯಂತ್ರ ಶಿಕ್ಷಣ ನೀಡುವುದರ ಜತೆಗೆ ಅದರ ಮಹತ್ವವನ್ನು ಶಿಕ್ಷಕರು ಮನದಟ್ಟು ಮಾಡಲಿದ್ದಾರೆ ಎಂದು ಹೇಳಿದರು.ವಿದ್ಯಾರ್ಥಿಗಳು ಸಮಾಜದಿಂದ ಒಳ್ಳೆಯ ವಿಷಯ ಕಲಿಯಬೇಕು. ಪಾಲಕರು ಮತ್ತು ಗುರುಗಳನ್ನು ಗೌರವಿಸಬೇಕು. ಉತ್ತಮ ಸಂಸ್ಕಾರ ಹೊಂದಿ ಸಮಾಜಕ್ಕೆ ಕೊಡುಗೆ ನೀಡಬೇಕು. ಹಳೇ ಬೇರಿನಿಂದಲೇ ಹೊಸ ಚಿಗುರೊಡೆಯಲು ಸಾಧ್ಯ. ಹೀಗಾಗಿ ವಿಜ್ಞಾನದ ಜೊತೆಗೆ ಭಾರತೀಯ ಪರಂಪರೆ ಅನುಸರಿಸಬೇಕು ಎಂದು ಕಿವಿಮಾತು ಹೇಳಿದರು.ವಿದ್ಯಾವಂತರಾಗುವ ಜೊತೆಗೆ ಸಂಸ್ಕೃತಿ, ಸಂಸ್ಕಾರ ಬಗ್ಗೆ ಎಲ್ಲೆಡೆ ಪರಿಚಯಿಸಬೇಕು. ಜೀವನದಲ್ಲಿ ಹಲವಾರು ಸವಾಲುಗಳಿವೆ. ಹರೆಯದ ವಯಸ್ಸಿನಲ್ಲಿ ದುಶ್ಚಟ, ವ್ಯಾಮೋಹಕ್ಕೆ ಒಳಗಾಗಿ ವಿದ್ಯಾರ್ಥಿ ಬದುಕು ಹಾಳು ಮಾಡಿಕೊಳ್ಳದೇ ಕಲಿಕೆಗೆ ಮೀಸಲಿಡಬೇಕು. ಪಾಲಕರ ಕನಸು ನನಸಾಗಿಸುವ ನಿಟ್ಟಿನಲ್ಲಿ ವಿದ್ಯಾಭ್ಯಾಸ ಪೂರೈಸಬೇಕು ಎಂದು ತಿಳಿಸಿದರು.ಮೆಕ್ಯಾನಿಕಲ್ ಮತ್ತು ರೊಬೊಟಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಜಿ.ಎಂ.ಸತ್ಯನಾರಾಯಣ್ ವಿವಿಧ ವಿಭಾಗದ ಪ್ರಥಮ ವರ್ಷದಲ್ಲಿ ಸುಮಾರು 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿಗೆ ದಾಖಲಾಗಿದ್ದಾರೆ ಎಂದು ಮಾಹಿತಿ ನೀಡಿದರು.ಇದೇ ವೇಳೆ ಹೊಸದಾಗಿ ಪ್ರವೇಶ ಪಡೆದ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಇಂಡಕ್ಷನ್ ತರಬೇತಿ ನಡೆಯಿತು. ಈ ಸಂದರ್ಭ ದಲ್ಲಿ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಸಂಗರೆಡ್ಡಿ, ರಿಜಿಸ್ಟರ್ ಸಾಗರ್, ಎಲೆಕ್ಟ್ರೀಕಲ್ ವಿಭಾಗದ ಮುಖ್ಯಸ್ಥ ಡಾ. ವಿರೇಂದ್ರ, ಮಾಹಿತಿ ವಿಜ್ಞಾನದ ಡಾ.ಸಂಪತ್, ವಿವಿಧ ವಿಭಾಗದ ಮುಖ್ಯಸ್ಥರಾದ ಡಾ. ಪುಷ್ಪಾ, ಡಾ.ದಿನೇಶ್, ಡಾ.ಸುನೀತಾ, ಡಾ. ಶ್ರೀಕಾಂತ್, ಡಾ.ಕಿರಣ್, ಡಾ.ಮಲ್ಲಿಕಾರ್ಜುನ್, ಡಾ.ಆದರ್ಶ್, ಪ್ರೊ.ಬಸವರಾಜಪ್ಪ ಉಪಸ್ಥಿತರಿದ್ದರು.

11 ಕೆಸಿಕೆಎಂ 1ಚಿಕ್ಕಮಗಳೂರಿನ ಎಐಟಿ ಕಾಲೇಜು ಸಭಾಂಗಣದಲ್ಲಿ ನಡೆದ ಪ್ರಸಕ್ತ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರವೇಶ ಕಾರ್ಯಕ್ರಮವನ್ನು ಡಾ. ಸಿ.ಟಿ. ಜಯದೇವ್‌ ಉದ್ಘಾಟಿಸಿದರು. ಡಾ. ಜಿ.ಎಂ.ಸತ್ಯನಾರಾಯಣ್ ಸಂಗರೆಡ್ಡಿ, ಸಾಗರ್‌, ಡಾ. ವಿರೇಂದ್ರ, ಡಾ. ಪುಷ್ಪಾ ಇದ್ದರು.