ಮಾಜಿ ಸಚಿವ ಮಹೇಶ್ ಸೇರಿದಂತೆ ಹಲವು ಗಣ್ಯರಿಂದ ಅಂತಿಮ ನಮನ
---ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಬಹುಮುಖ ಪ್ರತಿಭೆ, ಜಾನಪದ ಗಾಯಕ ಎಂ.ಕೈಲಾಶ್ ಮೂರ್ತಿ (38) ಅವರು ಗುರುವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ತಾಲೂಕಿನ ಸಿದ್ದಯ್ಯನಪುರ ಗ್ರಾಮದವರಾದ ಕೈಲಾಸ ಮೂರ್ತಿ (38 ವರ್ಷ) ಬುಧವಾರ ರಾತ್ರಿ ಹೃದಯಘಾತದಿಂದ ನಿಧನರಾದ ಹಿನ್ನೆಲೆ ಗುರುವಾರ ಸಂಜೆ ಅವರ ಅಂತ್ಯಕ್ರಿಯೆಯು ವಿಧಿ-ವಿಧಾನಗಳೊಂದಿಗೆ ಜರುಗಿತು. ಮೃತರು ತಾಯಿ, ಪತ್ನಿ, ಒರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.ಸಂತಾಪ:
ಮೖತರ ನಿಧನ ವಾರ್ತೆ ತಿಳಿಯುತ್ತಿದ್ದಂತೆ ಮಾಜಿ ಸಚಿವ, ಎನ್. ಮಹೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಚಾಮರಾಜನಗರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜು, ಕಲಾವಿದ ಮಿಮಿಕ್ರಿ ಗೋಪಿ, ಜಾನಪದ ಕಲಾವಿದ ನರಸಿಂಹಮೂರ್ತಿ, ಡಾ.ಮಹೇಶ್ ಚಿಕ್ಕಲ್ಲೂರು, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಹಿತಿ ಶಂಕನಪುರ ಮಹದೇವ, ಹಾಡುಗಾರ ಮಳವಳ್ಳಿ ಮಹದೇವಸ್ವಾಮಿ, ಮೈಸೂರು ಗುರುರಾಜ್ ಸೇರಿದಂತೆ ಅನೇಕ ಗಣ್ಯರು ಮೖತರಿಗೆ ಅಂತಿಮ ನಮನ ಸಲ್ಲಿಸಿದರು. ಗುರುವಾರ ಸ್ವಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ಜರುಗಿತು.
ಅಲ್ಪಾವಧಿಯಲ್ಲಿ ಹಲವು ಸಾಧನೆ:
ಕೈಲಾಸ ಮೂರ್ತಿ ಅವರು ಜಾನವಿ ಜಾನಪದ ಕಲಾ ಮತ್ತು ಸಾಂಸ್ಕೃತಿಕ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ತಮ್ಮ ವೖತ್ತಿ ಜೀವನವನ್ನು ಕಲಾ ಸೇವೆಗೆ ಮುಡುಪಾಗಿಟ್ಟಿದ್ದರು. ಅವರ ಜಾನಪದ ಸೇವೆಗೆ 2016 -17ನೇ ಸಾಲಿನ ಜಿಲ್ಲಾ ಯುವ ಪ್ರಶಸ್ತಿ, 2023-24ನೇ ಸಾಲಿನ ಜಾನಪದ ದತ್ತಿ ಪ್ರಶಸ್ತಿ, 2025ನೇ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2025ನೇ ಸಾಲಿನ ಕನ್ನಡ ಜಾನಪದ ಪರಿಷತ್ತಿನ ದಶಮಾನೋತ್ಸವ ಜಾನಪದ ಗೌರವ ಪ್ರಶಸ್ತಿ, ಅಂತಾರಾಷ್ಟ್ರೀಯ ಜಾನಪದ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಜಾನಪದ ಸಿರಿ ಪ್ರಶಸ್ತಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ, ಕರುನಾಡು ಸೇವಾ ಟ್ರಸ್ಟ್ ಮಂಡ್ಯ ವತಿಯಿಂದ 2020ರ ಪ್ರಜಾ ವಿಭೂಷಣ ಪ್ರಶಸ್ತಿ ಸೇರಿದಂತೆ ಪ್ರಶಸ್ತಿ- ಪುರಸ್ಕಾರಗಳು ಸಂದಿವೆ.-----------12ಕೆಜಿಎಲ್ ಕೈಲಾಸ್ ಮೂರ್ತಿ