ಕುಷ್ಟಗಿ: ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀಗುರು ಪುಟ್ಟರಾಜ ಸ್ವರಸಂಗೀತ ಹಾಗೂ ಕಲಾ ಸಾಂಸ್ಕೃತಿಕ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ 2025-26ನೇ ಸಾಲಿನ ಪರಿಶಿಷ್ಟ ಜಾತಿ ವಿಶೇಷ ಘಟಕದ ಸಂಘ-ಸಂಸ್ಥೆಗಳ ಧನಸಹಾಯದ ಯೋಜನೆಯಡಿಯಲ್ಲಿ ಜನಪದ ಸಂಗೀತ ಕಲಾ ವೈಭವ ಕಾರ್ಯಕ್ರಮ ಜರುಗಿತು.

ನಿವೃತ್ತ ಪೊಲೀಸ್‌ ಅಧಿಕಾರಿ ಸಿದ್ರಾಮಪ್ಪ ವಂದಾಲಿ ಮಾತನಾಡಿ, ಜನಪದ ಕಲೆ ಗ್ರಾಮೀಣ ಜೀವನದ ಪ್ರತಿಬಿಂಬವಾಗಿದ್ದು, ಅವುಗಳನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.

ಕಲಾವಿದರ ಸಾಧನೆಯನ್ನು ಶ್ಲಾಘಿಸಿ, ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.

ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಸಂತೋಷ ತೋಟದ ಮಾತನಾಡಿ, ಜನಪದ ಕಲೆ ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿದ್ದು, ಯುವ ಪೀಳಿಗೆಗೆ ಅವುಗಳ ಮಹತ್ವ ತಿಳಿಸುವ ಅಗತ್ಯವಿದೆ ಎಂದು ತಿಳಿಸಿದರು.

ಸಹನಾ ಮಾಲಿಪಾಟೀಲ, ಮಧು ಹಿರೇಮಠ ವಚನ ಸಂಗೀತ ಗಾಯನ, ಶಿವಲೀಲಾ ಹಿರೇಮಠ ತಂಡದವರು ಶಾಸ್ತ್ರೀಯ ಸಂಗೀತ, ಸೌಜನ್ಯ ಅಂಗಡಿ ತಂಡದವರು ಸುಗಮ ಸಂಗೀತ, ದೇವಪ್ಪ ಟೆಂಗುಂಟಿ ತಂಡದವರು ಜಾನಪದ ಗೀತೆಗಳು, ಭರಮಪ್ಪ ಜಿನ್ನಾಪೂರ ತಂಡದವರು ತತ್ವಪದ, ಶಶಿಕುಮಾರ ಜಾನಪದ ಗೀತೆ ಪ್ರಸ್ತುತಪಡಿಸಿದರು.


ಹಾರ‍್ಮೋನಿಯಂ ಸಾಥ್ ಯುವರಾಜ ಹಿರೇಮಠ, ಕೀಬೋರ್ಡ್ ದೇವೇಂದ್ರಪ್ಪ ಕಮ್ಮಾರ, ತಬಲಾ ಸುಕುಮುನಿ ಗಡಿಗಿ, ರಿಜ್ವಾನ್ ಮುದ್ದಾಬಳ್ಳಿ, ಅಯ್ಯಪ್ಪ ಬಡಿಗೇರ, ರಿಧಮ್ ಪ್ಯಾಡ್ ಮರಿಸ್ವಾಮಿ ಗುಡಗಲದಿನ್ನಿ ಮತ್ತು ಶಂಕರ ಬಸೂದೆ ನೀಡಿದರು.

ಕಾರ್ಯಕ್ರಮದಲ್ಲಿ ಸಾನ್ನಿಧ್ಯ ಗುರುಬಸವನಗೌಡ ಮಾಲಿಪಾಟೀಲ ವಹಿಸಿದ್ದರು. ವಿಶ್ವಕರ್ಮ ಸಮಾಜ ಅಧ್ಯಕ್ಷ ಶರಣಪ್ಪ ಬಡಿಗೇರ, ಸೈಯದ್ ಮುರ್ತುಜಾ ಖಾದ್ರಿ, ಮರಿಯಪ್ಪ ಹಕ್ಕಲ್, ಸಿದ್ದಪ್ಪ ಬಡಿಗೇರ, ಸಿದ್ದಪ್ಪ ಡಿ. ಕಲಾಲಬಂಡಿ, ಮಹಾಂತೇಶ ಅಮರಾವತಿ, ಬೀಬಿಜಾನ್, ಮುದಕವ್ವ ಹೊಸಮನಿ, ಹನುಮೇಶ ಇತರರಿದ್ದರು.

ಅನ್ನದಾನೇಶ್ವರ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆಗೈದರು, ವೆಂಕಟೇಶ ಹೊಸಮನಿ ನಿರೂಪಿಸಿ ವಂದಿಸಿದರು.