ಜನಪದರ ಜೀವನದ ಅಭಿವ್ಯಕ್ತಿ ಜಾನಪದ ಸಾಹಿತ್ಯ

| Published : Jan 17 2025, 12:48 AM IST

ಸಾರಾಂಶ

ಉತ್ತರ ಕರ್ನಾಟಕದ ಜಾನಪದ ಕಲಾವಿದರ ತವರು. ಆದರೆ, ಕಲಾವಿದರಿಗೆ ಸಿಗಬೇಕಾದ ಸೌಲಭ್ಯಗಳು ಸಿಗದಿರುವುದು ವಿಷಾದ. ಜಾನಪದ ಕಲಾ ಶ್ರೀಮಂತಿಕೆ ಉಳಿಯಬೇಕಾದರೆ ಸೌಲಭ್ಯ ನೀಡಬೇಕು.

ಧಾರವಾಡ:

ಜಾನಪದ ಸಾಹಿತ್ಯ ನಮ್ಮ ಜನಪದರ ಜೀವನಾನುಭವದ ಅಭಿವ್ಯಕ್ತಿ. ಇಂತಹ ಮೋಹಕ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕಾದದ್ದು ನಮ್ಮ ಕರ್ತವ್ಯ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣಾ ಕೊಳ್ಳಾನಟ್ಟಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ವಿಶ್ವ ಜಾನಪದ ಬುಡಕಟ್ಟು ದಿನಾಚರಣೆ ಅಂಗವಾಗಿ ತಡಸಿನಕೊಪ್ಪದ ದ್ಯಾಮವ್ವದೇವಿ ಸಾಂಸ್ಕೃತಿಕ ಮಹಿಳಾ ಸಂಘ, ಶಿವಯೋಗೇಶ್ವರ ಜಾನಪದ ಕಲಾ ಸಂಘ ಜಂಟಿಯಾಗಿ ಆಯೋಜಿಸಿದ್ದ ‘ಜಾನಪದ ಸಂಭ್ರಮ-2025’ ಉದ್ಘಾಟಿಸಿದ ಅವರು, ಉತ್ತರ ಕರ್ನಾಟಕದ ಜಾನಪದ ಕಲಾವಿದರ ತವರು. ಆದರೆ, ಕಲಾವಿದರಿಗೆ ಸಿಗಬೇಕಾದ ಸೌಲಭ್ಯಗಳು ಸಿಗದಿರುವುದು ವಿಷಾದ. ಜಾನಪದ ಕಲಾ ಶ್ರೀಮಂತಿಕೆ ಉಳಿಯಬೇಕಾದರೆ ಸೌಲಭ್ಯ ನೀಡಬೇಕು ಎಂದರು.

ಕವಿವ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಮಾತನಾಡಿ, ಜಾನಪದ ಸಾಹಿತ್ಯ ಎಲ್ಲ ಪ್ರಕಾರಗಳಿಗಿಂತಲೂ ಶ್ರೇಷ್ಠ. ಒಂದರ್ಥದಲ್ಲಿ ಶಿಷ್ಠಪದ ಸಾಹಿತ್ಯಕ್ಕೆ ತಾಯಿ ಇದ್ದಂತೆ. ಜಾನಪದ ಹಾಡುಗಳು ಜನಪದರು ಜೀವನದಲ್ಲಿ ಪಟ್ಟ ನೋವು-ನಲಿವುಗಳೇ ಹಾಡಾಗಿವೆ. ಜಾನಪದ ಹಾಡುಗಳು ಹಾಡಲು ಕಾವ್ಯಮಯವೂ, ಭಾವಮಯವೂ ಆಗಿವೆ. ಅಂತಹ ಸಾಹಿತ್ಯ ಜನಪ್ರಿಯತೆ ಜಾಗತೀಕರಣದ ಪ್ರಭಾವದಿಂದ ನಶಿಸುತ್ತಿರುವುದು ಆತಂಕಕಾರಿ ಎಂದರು.

ಕವಿವ ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ ಮಾತನಾಡಿ, ಜಾನಪದ ಮೊದಲು ಮೌಖಿಕ ಸಾಹಿತ್ಯವಾಗಿತ್ತು. ನಂತರ ಸಾಹಿತ್ಯಾಸಕ್ತರು ಕೃತಿ ರೂಪದಲ್ಲಿ ತಂದಿದ್ದಾರೆ. ನಮ್ಮ ಬದುಕು ತಿದ್ದಿ ಸಂಸ್ಕಾರಗೊಳಿಸುವ ಶಕ್ತಿ ಜಾನಪಕ್ಕಿದೆ ಎಂದು ಹೇಳಿದರು.

ಎಸ್.ಎನ್. ಬಿದರಳ್ಳಿ, ಎಸ್.ಎನ್. ಚಿಕ್ಕಣ್ಣವರ ಜಾನಪದ ಸಂಭ್ರಮ ಕುರಿತು ಮಾತನಾಡಿದರು. ಪ್ರಕಾಶ ಮಲ್ಲಿಗವಾಡ ಪ್ರಾಸ್ತಾವಿಕ ಮಾತನಾಡಿದರು. ಯಕ್ಕೇರಪ್ಪ ನಡುವಿನಮನಿ (ಶ್ಯಾನವಾಡ ಮಾಸ್ತರ) ಸ್ವಾಗತಿಸಿದರು. ಗಂಗವ್ವ ಆಡಿನವರ, ಪ್ರೇಮಾ ವಾಲಿಕಾರ, ಅನಸೂಯಾ ಗಾಯಕವಾಡ, ನಾಗಮ್ಮ ಬಾರಿಗಿಡದ ಸೇರಿದಂತೆ ಜಾನಪದ ಕಲಾವಿದರಿದ್ದರು. ತಾಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ಜಾನಪದ ಕಲಾ ತಂಡಗಳು ತಮ್ಮ ಕಲಾ ಸಂಭ್ರಮ ಆಚರಿಸಿದರು.