ಜಾನಪದವೆಂದರೆ ಕೇವಲ ಹಾಡು, ನೃತ್ಯ ಅಥವಾ ಮನರಂಜನೆಯ ಕಲೆಯಲ್ಲ. ಅದು ಗ್ರಾಮೀಣ ಜನರ ಬದುಕಿನ ಅನುಭವ, ಆಚರಣೆ, ನಂಬಿಕೆ, ಸಂಪ್ರದಾಯ, ಕಾಯಕ, ಹಬ್ಬ- ಹರಿದಿನ ಹಾಗೂ ಸಾಮಾಜಿಕ ಮೌಲ್ಯಗಳ ಪ್ರತಿಬಿಂಬವಾಗಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ಸಾಹಿತ್ಯವು ನೆಲಮೂಲದ ಭಾಷೆಯಾಗಿದ್ದು, ಅದರ ಮೂಲ ಬೇರುಗಳೇ ಜನಪದ, ನೆಲಮೂಲ ಸಂಸ್ಕೃತಿ, ಬದುಕು ಮತ್ತು ಪರಂಪರೆಯನ್ನು ತಲೆಮಾರುಗಳಿಂದ ಉಳಿಸಿಕೊಂಡು ಬಂದಿದೆ ಎಂದು ಚಿಕ್ಕನಾಯಕನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿಕುಮಾರ್‌ ಕಟ್ಟೆಮನೆ ಅಭಿಪ್ರಾಯಪಟ್ಟಿದ್ದಾರೆ.

ಗುಬ್ಬಿತಾಲೂಕಿನ ಬ್ಯಾಟಪ್ಪನಪಾಳ್ಯದಲ್ಲಿ ಸ್ವರಸಿಂಚನ ಸುಗಮ ಸಂಗೀತ ಮತ್ತು ಜಾನಪದ ಕಲಾಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗ್ರ್ಯಾವಿಟಿ ಇಂಡಿಯಾ ಟೆಕ್ನಾಲಿಜೀಸ್ ನ ಸಹಯೋಗದಲ್ಲಿ ಆಯೋಜಿಸಿದ್ದ ‘ಬಂತು ಶ್ರಾವಣ ತಂತು ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಾನಪದವೆಂದರೆ ಕೇವಲ ಹಾಡು, ನೃತ್ಯ ಅಥವಾ ಮನರಂಜನೆಯ ಕಲೆಯಲ್ಲ. ಅದು ಗ್ರಾಮೀಣ ಜನರ ಬದುಕಿನ ಅನುಭವ, ಆಚರಣೆ, ನಂಬಿಕೆ, ಸಂಪ್ರದಾಯ, ಕಾಯಕ, ಹಬ್ಬ- ಹರಿದಿನ ಹಾಗೂ ಸಾಮಾಜಿಕ ಮೌಲ್ಯಗಳ ಪ್ರತಿಬಿಂಬವಾಗಿದೆ. ಜನಸಾಮಾನ್ಯರ ಬದುಕಿನಿಂದ ಹುಟ್ಟಿದ ಜಾನಪದ ಹಾಡುಗಳು, ಕಥೆಗಳು,ಗಾದೆಗಳು, ಒಗಟುಗಳು ಹಾಗೂ ವಿವಿಧ ಕಲಾ ಪ್ರಕಾರಗಳು ಮೌಖಿಕ ಪರಂಪರೆಯ ಮೂಲಕ ತಲೆಮಾರುಗಳಿಂದ ತಲೆಮಾರಿಗೆ ಹರಿದುಬಂದು ನಮ್ಮ ನೆಲಮೂಲ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ, ಹಳ್ಳಿಗಳ ಜನರ ದಿನನಿತ್ಯದ ಬದುಕು, ಕಾಯಕ, ಆಚರಣೆ, ಹಬ್ಬ- ಹರಿದಿನ, ನಂಬಿಕೆ ಹಾಗೂ ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧದಿಂದ ಜಾನಪದ ಕಲೆ ಮತ್ತು ಸಾಹಿತ್ಯ ರೂಪುಗೊಂಡಿದೆ. ಗ್ರಾಮೀಣ ಜನರು ತಮ್ಮ ಬದುಕಿನ ಅನುಭವಗಳನ್ನು ಹಾಡು, ಕಥೆ, ಗಾದೆ, ಒಗಟು, ನೃತ್ಯ ಹಾಗೂ ವಿವಿಧ ಕಲಾ ಪ್ರಕಾರಗಳ ಮೂಲಕ ವ್ಯಕ್ತಪಡಿಸುತ್ತಾ ಬಂದಿದ್ದು, ಅವುಗಳೇ ಕಾಲಕ್ರಮೇಣ ಜಾನಪದದ ರೂಪ ಪಡೆದಿವೆ ಎಂದರು.

ಅಂತಾರಾಷ್ಟ್ರೀಯ ಖ್ಯಾತಿಯ ಕೋಲಾರ ರಮೇಶರವರ ತಂಡದಿಂದ ಸಮೂಹ ನೃತ್ಯ, ಕು.ಅಮಿನಿ ಮತ್ತು ತಂಡ ಹೊಸಕೋಟೆ ಇವರಿಂದ ಜಾನಪದ ನೃತ್ಯ ವೈಭವ, ಪಂಡಿತ್ ನಾಗರಾಜ ಶ್ಯಾವಿ ಮತ್ತು ತಂಡದಿಂದ ಕೊಳಲು ವಾದನ, ಮಲ್ಲಿಕಾರ್ಜುನ ಕೆಂಕೆರೆ ಹಾಗೂ ತಂಡದಿಂದ ಜಾನಪದ ಗೀತ ಗಾಯನ, ಚಿಟ್ಟಿಮೇಳ, ಭದ್ರಾಕಾಳಿ ನೃತ್ಯ, ನಾಸಿಕ್ ಡೋಲು, ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಗ್ರ್ಯಾವಿಟಿ ಇಂಡಿಯಾ ಟೆಕ್ನಾಲಾಜಿಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಬಿ. ಟಿ. ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು, ಮುಖ್ಯಅತಿಥಿ ಗಳಾಗಿ ಕಾರ್ಯ ಸಿದ್ದಿ ವೀರಾಂಜನೇಯ ಟ್ರಸ್ಟ್ ಅಧ್ಯಕ್ಷ ನರಸಿಂಹ ಮೂರ್ತಿ, ಸದಸ್ಯ ಗೋಪಾಲ ಕೃಷ್ಣ, ವಿಧ್ವಾನ್‌ ಕೋಲಾರ ರಮೇಶ್ ಉಪಸ್ಥಿತರಿದ್ದರು. ಸೌಭಾಗ್ಯ ಡಿ. ಆರ್. ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು.