ನಿವೃತ್ತ ಶಿಕ್ಷಕ ಹರಿಯಪ್ಪ ನಿವಾಸದಲ್ಲಿ ‘ಮನೆಯಂಗಳದಲ್ಲಿ ಜಾನಪದ । ಜಾನಪದರ ಮೌಲ್ಯಧಾರಿತ ಬದುಕು ಎಂಬ ವಿಚಾರಗೋಷ್ಠಿ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಜಾನಪದ ಎಂಬುದು ಮನುಷ್ಯನನ್ನು ನಾಗರಿಕತೆ ಕಡೆಗೆ ಕೊಂಡೊಯ್ಯುವ ಮಾರ್ಗವಾಗಿದೆ ಎಂದು ಮಾಜಿ ಸಚಿವ ಬಿ.ಬಿ. ನಿಂಗಯ್ಯ ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ಪರಿಷತ್ತು ಮತ್ತು ಚಿಕ್ಕಮಗಳೂರು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜಾನಪದ ಕಲಾಪೋಷಕ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಹರಿಯಪ್ಪ ಅವರ ನಿವಾಸದಲ್ಲಿ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಜಾನಪದ, ಮಾತನಾಡಿದ ಅವರು ಕರ್ನಾಟಕ ಜಾನಪದ ಪರಿಷತ್ತು ವಿಶ್ವಸಂಸ್ಥೆ ಯುನೆಸ್ಕೋದ ಮಾನ್ಯತೆ ಪಡೆದಿರುವುದು ರಾಜ್ಯಕ್ಕೆ, ದೇಶಕ್ಕೆ ಹೆಮ್ಮೆಯ ವಿಚಾರ. ಮೂಲ ಜಾನಪದ ಸಾಹಿತ್ಯ, ಕಲೆ, ಸಂಗೀತ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಜಾನಪದ ಒಂದು ಜ್ಞಾನಪದವಾಗಿದೆ. ಮನುಷ್ಯನನ್ನು ನಾಗರಿಕತೆ ಕೊಂಡೊಯ್ಯಲು ಪ್ರಮುಖ ಪಾತ್ರವಹಿಸಿದೆ ಎಂದರು.ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಮಟ್ಟದಲ್ಲಿ ಹಲವಾರು ಸಮ್ಮೇಳನಗಳ ಮೂಲಕ ಜಾನಪದ ಕಲಾವಿದರನ್ನು ಗುರುತಿಸಿ ಗೌರವಿಸಿದೆ. ಕಲಾವಿದರ ಪ್ರತಿಭೆ ಹೊರಹಾಕಲು ಉತ್ತಮ ವೇದಿಕೆ ಮಾಡಿಕೊಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷ ಡಾ. ಜೆ.ಪಿ ಕೃಷ್ಣೇಗೌಡರು ಮಾತನಾಡಿ, ಎಲ್ಲಾ ಸಾಹಿತ್ಯ, ಸಂಗೀತ ಕಲೆಗಳ ಗಳ ಮೂಲ ಜಾನಪದ. ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚು ಹೆಚ್ಚು ಜಾನಪದ ಕಲೆ, ಸಾಹಿತ್ಯ ಪರಿಚಯದ ಕೆಲಸವಾಗಬೇಕು. ಜತೆಗೆ ಪಠ್ಯ ಪುಸ್ತಕಗಳಲ್ಲಿ ಜಾನಪದ ಸಾಹಿತ್ಯ, ಕಲೆಯನ್ನು ಸೇರಿಸಿಬೇಕು. ವಿದ್ಯಾರ್ಥಿಗಳು ಪಾಶ್ಚಾತ್ಯ ಸಂಗೀತ ಕಲೆಗಳಿಗೆ ಮಾರು ಹೋಗದೆ ಭಾರತೀಯ ಸಂಗೀತ ಕಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ ಎಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಜಿ.ಬಿ ಸುರೇಶ್ ಮಾತನಾಡಿ, ಕನ್ನಡ ನಾಡಿನ ಬಹಳಷ್ಟು ಜಾನಪದ ವಿದ್ವಾಂಸರು ಅವರ ಸಾಹಿತ್ಯಗಳಲ್ಲಿ ಜಾನಪದರ ಮೌಲ್ಯಧಾರಿತ ಬದುಕು, ಆದರ್ಶ, ತ್ಯಾಗ, ಬಲಿದಾನಗಳ ಬಗ್ಗೆ ಉದಾಹರಣೆಯೊಂದಿಗೆ ಸಾಕಷ್ಟು ವಿಚಾರಧಾರೆ ತಿಳಿಸಿದ್ದಾರೆ. ಇಂದಿನ ಪೀಳಿಗೆಯವರು ಆದರ್ಶ ತತ್ವಗಳನ್ನು ಅಳವಡಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಾಗಿದೆ. ಜತೆಗೆ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾಗಿದೆ. ಆಗ ಜಾತ್ಯತೀತ ಮತ್ತು ಮೌಲ್ಯಾಧಾರಿತ ಸಮಾಜ ಭವಿಷ್ಯದಲ್ಲಿ ಕಾಣಲು ಸಾಧ್ಯ ಎಂದರು.
ಗೌರವ ಸ್ವೀಕರಿಸಿ ಮಾತನಾಡಿದ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಹರಿಯಪ್ಪ, ಪಟ್ಟಣ ಪ್ರದೇಶದಲ್ಲಿ ಜಾನಪದ ಕಲೆಗಳು ಕಣ್ಮರೆಯಾಗಿ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಜೀವಂತವಾಗಿವೆ. ತಪ್ಪದೇ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮೂಲಕ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಬೇಕಾಗಿದೆ ಎಂದು ತಿಳಿಸಿದರು.ಚಿಕ್ಕಮಗಳೂರು ತಾಲೂಕು ಕಸಾಪ ಅಧ್ಯಕ್ಷ ಮಾವಿನ ಕೆರೆ ದಯಾನಂದ. ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಸಚಿನ್ ಸಿಂಗ್, ಕೆಸವಿನ ಮನೆ ಬೈರೇಗೌಡ, ಅಣ್ಣಯ್ಯ, ರಾಮೇಶ್ವರ ನಗರ ಹಿತರಕ್ಷಣ ಸಮಿತಿ ಅಧ್ಯಕ್ಷ ರಘು, ಉಪನ್ಯಾಸಕ ಮಂಜುನಾಥ, ಬಸವರಾಜು, ಸಂದೀಪ, ವೀರಭದ್ರಯ್ಯ, ಜವರಪ್ಪ ಉಪಸ್ಥಿತರಿದ್ದರು.ಫೋಟೋ
ಕರ್ನಾಟಕ ಜಾನಪದ ಪರಿಷತ್ತು ಆಯೋಜಿಸಿದ್ದ ‘ಮನೆಯಂಗಳದಲ್ಲಿ ಜಾನಪದ, ಜಾನಪದರ ಮೌಲ್ಯಧಾರಿತ ಬದುಕು ಎಂಬ ವಿಚಾರಗೋಷ್ಠಿಯಲ್ಲಿ ಜಾನಪದ ಕಲಾಪೋಷಕ ನಿವೃತ್ತ ಶಿಕ್ಷಕ ಹರಿಯಪ್ಪ ಅವರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಪರಿಷತ್ತು ಜಿಲ್ಲಾಧ್ಯಕ್ಷ ಜಿ.ಬಿ ಸುರೇಶ್, ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷ ಡಾ. ಜೆ.ಪಿ ಕೃಷ್ಣೇಗೌಡರು ಮೊದಲಾದವರಿದ್ದರು.