ರೈತರು ಒಬಿರಾಯನ ಕೃಷಿ ಪದ್ಧತಿ ಬಿಡಿ । ನೀರು ರಾಷ್ಟ್ರೀಯ ಆಸ್ತಿ

ಬೀರೂರು ಎನ್.ಗಿರೀಶ್.

ಕನ್ನಡಪ್ರಭ ವಾರ್ತೆ, ಬೀರೂರು

ನಮ್ಮ ಕೃಷಿ ಪದ್ಧತಿಯಲ್ಲಿ ಎಷ್ಟೇ ಆಧುನಿಕ ಆವಿಷ್ಕಾರಗಳಾದರೂ ಬದಲಾವಣೆ ಗೋಜಿಗೆ ಹೋಗದೆ ಇನ್ನೂ ಒಬಿರಾಯನ ಕೃಷಿ ಪದ್ಧತಿಯಲ್ಲಿ ಮುಂದುವರಿದಿರುವುದು ರೈತರನ್ನು ಕೃಷಿ ಪದ್ದತಿಯಿಂದ ವಿಮುಖರಾಗುವಂತೆ ಮಾಡಿದೆ ಎಂದು ಮಾಜಿ ಸಚಿವ ಜೆ.ಮಾಧುಸ್ವಾಮಿ ಬೇಸರ ವ್ಯಕ್ತ ಪಡಿಸಿದರು. ಜಿಲ್ಲಾ ಸಮ್ಮೇಳನದ ಆಧುನಿಕ ಕೃಷಿ ಮತ್ತು ನೀರಾವರಿ ಗೋಷ್ಠಿಯಲ್ಲಿ ಬಯಲುಸೀಮೆಗೆ ನೀರಾವರಿ ಸಾಧ್ಯತೆಗಳ ಕುರಿತು ಮಾತನಾಡಿ ನಮ್ಮ ರೈತರಿಗೆ ಕೃಷಿ ಜ್ಞಾನವಿದೆ. ಆದರೆ ಅದನ್ನು ಕೃಷಿಯಲ್ಲಿ ಹೇಗೆ ಬಳಸಬೇಕೆಂಬ ಪ್ರಾಥಮಿಕ ಅರಿವಿನ ಕೊರತೆ ಇದೆ. ನೀರು ರಾಷ್ಟ್ರೀಯ ಆಸ್ತಿ ಎಂದು ಈಗಾಗಲೇ ಇಡೀ ಜಗತ್ತು ಭಾವಿಸಿದೆ. ನೀರು ಉತ್ಪಾದಿಸುವ ವಸ್ತುವಲ್ಲ, ಇವುಗಳಲ್ಲಿ ಮೇಲ್ಮೈ ಜಲ, ಅಂತರ್ಜಲ ಮತ್ತು ಸಹಜ ಮಳೆಯ ಜಲ ಈ ಮೂರು ಅಂಶಗಳು ಮತ್ತು ಅವುಗಳನ್ನು ಸುಸ್ಥಿರ ಸ್ಥಿತಿಯಲ್ಲಿಡುವಲ್ಲಿ ಹಿಂದೆ ಬಿದ್ದಿದ್ದೇವೆ. ರಾಜಪ್ರಭುತ್ವ ಇದ್ದ ಕಾಲದಲ್ಲಿ ನೀರಿನ ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮತ್ತು ಕೃಷಿ ಉದ್ದೇಶಕ್ಕೆ ಬಳಸುವ ದೃಷ್ಟಿಯಿಂದ ಸರಪಳಿ ಕಾಲುವೆಗಳನ್ನು ನಿರ್ಮಿಸಿದ್ದವು. ಕಾಲ ತೆರೆದಂತೆ ಕೃಷಿಕ ವರ್ಗ ಇದರ ಬಳಕೆಯಲ್ಲೂ ಯಶಸ್ಸು ಕಾಣದಿದ್ದಾಗ ಕೊಳವೆ ಬಾವಿಗಳ ಮೊರೆ ಹೋಗಲು ಆರಂಭಿಸಿದರು. ಉದಾಹರಣೆಗೆ ನಮ್ಮ ಭೌಗೋಳಿಕವಾಗಿ ರಾಜ್ಯವನ್ನೆ ತೆಗೆದುಕೊಂಡರೆ, ಮಲೆನಾಡು, ಅರೆಮಲೆನಾಡು ಮತ್ತು ಬಯಲುಸೀಮೆಗಳಂತಹ ವೈವಿಧ್ಯತೆಗಳಿವೆ ಎಂದರು.ನಮ್ಮ ತೋಟಗಳಲ್ಲಿ ನೈಸರ್ಗಿಕವಾಗಿ ಬೆಳೆದ ಮರಗಳನ್ನು ಇಳುವರಿ ಕಡಿಮೆಯಾಗುತ್ತದೆ ಎಂದು ಕಡಿತಲೆಗೆ ಮಾಡಲಾಗುತ್ತಿದೆ. ಪೋಷಕಾಂಶವುಳ್ಳ ವೃಕ್ಷ ಸಂತತಿಯನ್ನು ಈ ಪರಿ ಹಾಳುಮಾಡುವುದು ಸಮಂಜಸವಲ್ಲ ಎಂದರು. ಪ್ರಕೃತಿ ಕೊಟ್ಟಿರುವ ಅಂತರ್ಜಲವನ್ನು ಬಳಸಿಕೊಂಡು ಮುಂದಿನ ಪೀಳಿಗೆಗೆ ನೀರನ್ನು ಉಳಿತಾಯ ಮಾಡಿ ಎಂದರು.ರಾಯಚೂರಿನ ಪ್ರಗತಿ ಪರ ಕೃಷಿಕಿ ಡಾ. ಕವಿತಾ ಮಿಶ್ರಾ ಕೃಷಿ ಮಹಿಳೆ ಕುರಿತು ಮಾತನಾಡಿ, ಅನಾದಿ ಕಾಲದಿಂದಲೂ ಈ ಸಮಾಜ ಪುರುಷ ಪ್ರಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತ ಬಂದಿರುವುದಲ್ಲದೇ, ಅದು ಕೃಷಿ ಕ್ಷೇತ್ರವನ್ನು ತನ್ನ ಅಂಕೆ ಯಲ್ಲೇ ಇಟ್ಟುಕೊಂಡಿರುವುದು ಅಚ್ಚರಿ ಸಂಗತಿ ಏನಲ್ಲಾ. ಆದರೆ ವರ್ತಮಾನದಲ್ಲಿ ಆ ಚಿತ್ರ ಸಂಪೂರ್ಣ ಬದಲಾಗಿದೆ ಎನ್ನುವುದಕ್ಕೆ ಮನೆ ವಾರ್ತೆಯೊಂದಿಗೆ ಕೃಷಿ ಕಾಯಕದಲ್ಲೂ ತಾನು ತೊಡಗಿಸಿಕೊಳ್ಳಬಲ್ಲೇ ಎಂಬುದಕ್ಕೆ ನಾನೇ ನಿಮ್ಮ ಮುಂದೆ ನಿಂತಿದ್ದೇನೆ. ಎಂಜಿನಿಯರ್ ಪದವೀಧರದಳಾದ ನಾನು ಅಚಾನಕ್ ಕೃಷಿ ಕ್ಷೇತ್ರಕ್ಕೆ ಆಕರ್ಷಿತಳಾದೆ.

ನಮ್ಮ ೮ ಎಕರೆ ಭೂಮಿಯಲ್ಲಿ ಅಲ್ಪಾವಧಿ, ಮಧ್ಯಮಾವಧಿ ಮತ್ತು ಪೂರ್ಣಾವಧಿಗೆ ಮತ್ತು ಋತುಮಾನ ಆಧರಿಸಿ ಬಹುಬೇಳೆ ಪದ್ಧತಿಗೆ ಮುಂದಾದೆ. ಇಡೀ ವರ್ಷ ಈ ಬಹುಬೇಳೆ ಪದ್ಧತಿಯಿಂದ ಹೆಚ್ಚು ಆದಾಯದ ಮಾರ್ಗ ಕಂಡುಕೊಳ್ಳಲು ಸಾಧ್ಯವಾಯಿತು. ಪರಿಸ್ಥಿತಿಗೆ ಅನುಗುಣವಾಗಿ ಕೃಷಿ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿಯೆಂದು ಹೇಳಿದರು. ರೈತನದು ಸ್ವಾಭಿಮಾನದ ಜೀವನ. ಬೇಡಿದವರಲ್ಲ ಬದಲಾಗಿ ಕೊಡುಗೈ ದಾನಿಗಳು, ಜಗತ್ತು ನಿಂತಿರುವುದು ಜ್ಞಾನ, ಶಕ್ತಿ, ಮತ್ತು ಸಂಪತ್ತಿನಿಂದ ಮಾತ್ರವಾಗಿದ್ದು ಇಂದಿನ ಯುವ ಜನರು ಇದನ್ನು ಅರಿತು ಬದುಕಬೇಕಿದೆ. ರೈತರು ಕೃಷಿ ಜೊತೆ ಅರಣ್ಯ ಕೃಷಿ ಮಾಡಿದರೆ ಲಾಭ ಗಳಿಸಬಹುದೆಂದರು.ಈ ಸಂದರ್ಭದಲ್ಲಿ ಸಂಸ್ಕೃತಿ ಚಿಂತಕ ಸುಧೀರ್ ಕುಮಾರ್ ಮುರೂಳ್ಳಿ ಗೋಷ್ಠಿ ಉದ್ಘಾಟಿಸಿದರು. ರೈತ ಮುಖಂಡ ಕೆ.ಟಿ. ಗಂಗಾಧರ ಆಹಾರ ಭದ್ರತೆ ಮತ್ತು ಕೃಷಿ ಸಮಸ್ಯೆಗಳ ಕುರಿತು ಮಾತನಾಡಿದರು. ಪ್ರಗತಿಪರ ಕೃಷಿಕ ಚಂದ್ರಶೇಖರ ನಾರಾಯಣಪುರ ಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು.೧೧ ಕೆಡಿಆರ್ ೦೨ (೧)ಮಾಜಿ ಸಚಿವ ಮಾಧುಸ್ವಾಮಿ೧೧ ಕೆಡಿಆರ್ ೦೨ (೨)ಪ್ರಗತಿ ಪರ ಕೃಷಿಕಿ ಡಾ. ಕವಿತಾ ಮಿಶ್ರಾ೧೧ ಕೆಡಿಆರ್ ೦೨ (೩)ಸಮ್ಮೇಳನದಲ್ಲಿ ಸಾಹಿತಿ ಗಳಾದ ಪ್ರಿಯದರ್ಶಿನಿ, ಸಿಂಗಟಗೆರೆ ಸಿದ್ದಪ್ಪ, ಅವರಿಗೆ ಜಿಲ್ಲಾ ಕಸಾಪ ವತಿಯಿಂದ ಸಾಹಿತ್ಯ ಸಿರಿಪ್ರಶಸ್ತಿ ಪ್ರಧಾನಮಾಡಲಾಯಿತು, ಶಾಸಕ ಕೆ.ಎಸ್.ಆನಂದ್, ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಮತ್ತಿತರಿದ್ದರು.