ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಮೌಲ್ಯಗಳು, ಆದರ್ಶಗಳು ಜಗತ್ತಿಗೆ ಆದರ್ಶವಾಗಿವೆ
ಕೂಡ್ಲಿಗಿ: ಮಹಾಮಾನವತವಾದಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಮೌಲ್ಯಗಳು, ಆದರ್ಶಗಳು ಜಗತ್ತಿಗೆ ಆದರ್ಶವಾಗಿವೆ ಎಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಾತನಾಡುತ್ತಿದ್ದರು. ಅಂಬೇಡ್ಕರ್ ಅವಮಾನ, ಅಪಮಾನಗಳನ್ನು ಮೆಟ್ಟಿ ನಿಂತು ವಿಶ್ವಜ್ಞಾನಿಯಾಗಿದ್ದಾರೆ. ಅವರ ಜೀವನ ಚರಿತ್ರೆಯನ್ನು ಇಂದಿನ ಯುವಪೀಳಿಗೆ ಅರಿಯಬೇಕಿದೆ. ಅಂಬೇಡ್ಕರರು ಹೇಳುವಂತೆ ಸ್ವಾಭಿಮಾನ ಇಲ್ಲದ ಮಾನವ ಜೀವಂತ ಶವದಂತೆ. ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲಾರರು ಎಂಬ ಮಾತು ಅಕ್ಷರಶಃ ಸತ್ಯವಾಗಿದೆ. ಒಬ್ಬ ವ್ಯಕ್ತಿಗೆ ಸ್ವಾಭಿಮಾನ ಮುಖ್ಯವಾಗಿದ್ದು, ಆ ಸ್ವಾಭಿಮಾನ ಇಲ್ಲದ ಮನುಷ್ಯ ಇದ್ದು ಸತ್ತಂತೆ ಎಂದು ತಿಳಿಸಿರುವ ಅಂಬೇಡ್ಕರರ ಆದರ್ಶಗಳು ನಮಗೆಲ್ಲ ಮಾರ್ಗದರ್ಶನವಾಗಬೇಕು ಎಂದರು.ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವಿತಾವಧಿಯಲ್ಲಿ ದಲಿತರ ನೋವು- ನಲಿವು ಕಂಡುಂಡವರು. ಹೀಗಾಗಿ ಎಲ್ಲ ವರ್ಗಗಳ ಜನತೆಗೆ ಮೀಸಲಾತಿ ಪಡೆದು ಸಹಬಾಳ್ವೆ ನಡೆಸಲು ಅಂಬೇಡ್ಕರ್ ಕಾರಣರಾಗಿದ್ದಾರೆ ಎಂದರು.
ಅಂಬೇಡ್ಕರ್ ಕೇವಲ ದಲಿತರಿಗೆ ಸೀಮಿತರಾದವರಲ್ಲ ಎಲ್ಲ ಧರ್ಮದ ಜನರಿಗೆ ಮಹಿಳೆಯರಿಗೆ ಅನ್ವಯವಾಗುವ ಸಂವಿಧಾನವನ್ನು ರಚಿಸಿದ್ದಾರೆ. ಅಂಬೇಡ್ಕರ್ ಅವರ ಆದರ್ಶಗಳು ನಮಗೆ ದಾರಿದೀಪವಾಗಿದೆ. ಕತ್ತಲೆ ಬದುಕನ್ನು ಬಿಟ್ಟು ಶಿಕ್ಷಣ ಪಡೆದು ಬೆಳಕಿನೆಡೆಗೆ ಸಾಗಿಸಲು ಅಂಬೇಡ್ಕರ್ ಸಂವಿಧಾನದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.ಈ ಸಂದರ್ಭದಲ್ಲಿ ತಾಪಂ ಇಒ ಕೆ.ನರಸಪ್ಪ, ಪಪಂ ಅಧ್ಯಕ್ಷ ಕೆ.ಶಿವಪ್ಪ ನಾಯಕ, ಕೂಡ್ಲಿಗಿ ತಾಲೂಕು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಾಪರ ವೆಂಕಟೇಶ್, ಸದಸ್ಯರಾದ ಎಸ್. ದುರುಗೇಶ್, ಸಿಪಿಐಗಳಾದ ಪ್ರಹ್ಲಾದ್ ಚನ್ನಗಿರಿ, ಸಿಪಿಐ ದುರುಗಪ್ಪ, ಪಿಎಸ್ಐ ಸಿ.ಪ್ರಕಾಶ್, ವಕೀಲರಾದ ಡಿ.ಎಚ್. ದುರುಗೇಶ್, ಪಪಂ ಸದಸ್ಯರಾದ ಸಿರಿಬಿ ಮಂಜು, ಜಯಮ್ಮರ ರಾಘವೇಂದ್ರ, ನಿವೃತ್ತ ಇಒ ಬಸಣ್ಣ, ದಲಿತ ಮುಖಂಡರಾದ ಗುಣಸಾಗರ ಕೖಷ್ಣಪ್ಪ, ಹಿರೇಕುಂಬಳಗುಂಟೆ ಉಮೇಶ್, ಬಿ.ಮಹೇಶ್, ಅಜ್ಜಯ್ಯ, ಎಂ.ಬಿ. ಶಿವರಾಜ, ಎಚ್.ಪರಶುರಾಮ್, ಕುಮಾರ್ ಮಾಕನಡಕು, ಜಿತೇಂದ್ರ, ಬಂಡೆ ರಾಘವೇಂದ್ರ, ಡಿ.ಸಂತೋಷಕುಮಾರ್, ಸಾಸಲವಾಡ ಶಿವಣ್ಣ, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ವಸತಿ ನಿಲಯದ ವಾರ್ಡನ್ ಗಳು ಭಾಗವಹಿಸಿದ್ದರು.