ಡಂಬಳ: ಮುಂಡರಗಿ ತಾಲೂಕಿನ ಡಂಬಳ ಹೋಬಳಿಯ ಚುರ್ಚಿಹಾಳ ಹಾಗೂ ಡಂಬಳ ಗ್ರಾಮದ ಮಧ್ಯೆ ಸೋಲಾರ್‌ ವಿದ್ಯುತ್‌ ಕಂಪನಿ ಪ್ಯಾನಲ್‌ ಅಳವಡಿಕೆಗಾಗಿ ಸಾವಿರಾರು ಮರಗಳನ್ನು ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ ಅರಣ್ಯ ಇಲಾಖೆಯು ಏ. 27ರೊಳಗಾಗಿ ಅಗತ್ಯ ಮಾಹಿತಿ ನೀಡಬೇಕೆಂದು ಸೋಲಾರ್‌ ವಿದ್ಯುತ್‌ ಕಂಪನಿಗೆ ನೋಟಿಸ್‌ ನೀಡಿದೆ.

ಹಿರೋ ಫ್ಯೂಚರ್ ಕಂಪನಿ ಸೋಲಾರ್‌ ಪ್ಯಾನಲ್‌ ಅಳವಡಿಕೆಗಾಗಿ ಸಾವಿರಾರು ಮರಗಳನ್ನು ಅನುಮತಿ ಇಲ್ಲದೇ ಕಡಿದಿತ್ತು. ಅಲ್ಲದೇ ರೈತರಿಗೂ ಪರಿಹಾರ ನೀಡಿರಲಿಲ್ಲ. ಈ ಕುರಿತು ಕನ್ನಡಪ್ರಭ ಏ. 25ರಂದು ಸೋಲಾರ್‌ ಪ್ಯಾನಲ್‌ಗೆ 2400 ಮರಗಳು ಬಲಿ ಎಂಬ ಶೀರ್ಷಿಕೆಯಡಿ ಸಚಿತ್ರ ವರದಿ ಪ್ರಕಟಿಸಿತ್ತು.

ಕನ್ನಡಪ್ರಭದಲ್ಲಿ ಸಮಗ್ರ ವರದಿ ಪ್ರಕಟವಾದ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈಗಾಗಲೆ ಹಿರೋ ಫ್ಯೂಚರ್ ಕಂಪನಿ ಸೋಲಾರ್ ಪ್ಯಾನಲ್ ಅಳವಡಿಕೆ ಮರಗಳನ್ನು ಕಡಿದು ಹಾಕಿದೆ. ಅಲ್ಲದೇ ರೈತರಿಗೆ ಪರಿಹಾರ ನೀಡಿಲ್ಲ ಎಂಬುದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕಂಪನಿ ತನ್ನ ಯೋಜನಾ ವರದಿ, ರೈತರೊಂದಿಗೆ ಮಾಡಿಕೊಂಡ ಒಪ್ಪಂದಗಳ ಕುರಿತು ಸಮಗ್ರ ವರದಿಯನ್ನು ಏ. 27ರೊಳಗೆ ಮುಂಡರಗಿ ವಲಯ ಅರಣ್ಯ ಕಚೇರಿ ವಲಯ ಅರಣ್ಯಾಧಿಕಾರಿಗಳ ಕಾರ್ಯಾಲಯಕ್ಕೆ ಖುದ್ದಾಗಿ ಭೇಟಿ ನೀಡಿ ಸಲ್ಲಿಸಬೇಕೆಂದು ತಿಳಿಸಲಾಗಿದೆ ಎಂದರು.

ಸ್ಥಳಕ್ಕೆಗದಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಾಂತೇಶ ಪೊಲೀಸಪಾಟೀಲ, ಮುಂಡರಗಿ ವಲಯ ಅರಣ್ಯ ಅಧಿಕಾರಿ ಮಂಜುನಾಥ ಮೇಗಲಮನಿ, ಸಿಬ್ಬಂದಿ ವರ್ಗ, ರೈತರು ಇದ್ದರು. ವೀರಭದ್ರೇಶ್ವರ ಜಾತ್ರಾ ರಥೋತ್ಸವ ಇಂದು


ರೋಣ: ಪಟ್ಟಣದ ಆರಾಧ್ಯ ದೈವ ವೀರಭದ್ರೆಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಏ. 27ರಂದು ಸಾಯಂಕಾಲ 6 ಗಂಟೆಗೆ ಪಟ್ಟಣದ ರಾಜಬೀದಿಯಲ್ಲಿ ಬೃಹತ್ ರಥೋತ್ಸವ ಜರುಗಲಿದೆ.ಬೆಳಗ್ಗೆ ಗುಗ್ಗಳ ಮೆರವಣಿಗೆ ಸೇರಿದಂತೆ ಸಾಯಂಕಾಲದವರೆಗೆ ವಿವಿಧ ಪೂಜಾ ಕೈಂಕರ್ಯ, ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಪ್ರತಿವರ್ಷ ವೈಶಾಖ ಮಾಸ, ಶುಕ್ಲ ಪಕ್ಷ ದಶಮಿ ತಿಥಿ, ಮೇಘ ನಕ್ಷತ್ರದಂದು ಭಕ್ತರ ಮಧ್ಯೆ ಸಡಗರ, ಸಂಭ್ರಮದಿಂದ ವೀರಭದ್ರೇಶ್ವರ ರಥೋತ್ಸವವು ನಡೆಸಲಾಗುತ್ತಾ ಬರಲಾಗಿದೆ.ಇಂದಿಗೂ ಪಟ್ಟಣದ ಕುಲಕರ್ಣಿಯವರ ಮನೆತನದವರು ವೀರಭದ್ರೇಶ್ವರನಿಗೆ ನಿತ್ಯ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಜಾತ್ರಾ ಸಂದರ್ಭದಲ್ಲಿ ಸತತ 9 ದಿನಗಳವರೆಗೆ ನಂದಾದೀಪವನ್ನು ಬೆಳಗಿಸಲಾಗುತ್ತಿದೆ. ಏ. 27ರಂದು ಸಾಯಂಕಾಲ‌ 6 ಗಂಟೆಗೆ ರಥೋತ್ಸವ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.