ಸಾರಾಂಶ
ಅರಣ್ಯ ಸಾಗುವಳಿದಾರರಿಗೆ ಕಾನೂನು ತಿಳಿವಳಿಕೆ ಕೊರತೆಯಿಂದ ಅರಣ್ಯ ಭೂಮಿ ಹಕ್ಕು ಸಿಗಲು ತೊಡಕಾಗಿದೆ
ಅಂಕೋಲಾ: ಅರಣ್ಯ ಸಾಗುವಳಿದಾರರಿಗೆ ಕಾನೂನು ತಿಳಿವಳಿಕೆ ಕೊರತೆಯಿಂದ ಅರಣ್ಯ ಭೂಮಿ ಹಕ್ಕು ಸಿಗಲು ತೊಡಕಾಗಿದೆ ಎಂದು ಜಾಗೃತಿ ಜಾಥಾ ನಡೆಸುತ್ತಿರುವ ಅರಣ್ಯ ಸಾಗುವಳಿದಾರರ ವೇದಿಕೆಯ ಅಧ್ಯಕ್ಷರೊಬ್ಬರು ಪದೇಪದೇ ಹೇಳುವ ಮೂಲಕ ಬಡ ಅರಣ್ಯ ಅತಿಕ್ರಮಣದಾರರ ದಿಕ್ಕು ತಪ್ಪಿಸುತ್ತಿದ್ದಾರೆ. ಅರಣ್ಯ ಹಕ್ಕು ಪಡೆಯಲು ನಡೆಯುತ್ತಿರುವ ನೈಜ ಹೋರಾಟಕ್ಕೆ ಹಿನ್ನಡೆ ಉಂಟು ಮಾಡುತ್ತಿದ್ದಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಆರೋಪಿಸಿದರು.
ಅಂಕೋಲಾದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅರಣ್ಯ ಭೂಮಿ ಹಕ್ಕು ಸಿಗದೇ ಇರುವುದು ರೈತರಿಗೆ ಕಾನೂನು ತಿಳಿವಳಿಕೆ ಕೊರತೆಯಿಂದ ಎಂದು ಹೋದಲ್ಲಿ ಬಂದಲ್ಲಿ ಜಾಗೃತಿ ಜಾಥಾ ನಡೆಸಿ ಅವರು ಹೇಳಿಕೆ ಕೊಡುತ್ತಿದ್ದಾರೆ. ಆದರೆ ಆಡಳಿತ ನಡೆಸುವ ಸರ್ಕಾರಗಳ ಇಚ್ಚಾ ಶಕ್ತಿ ಕೊರತೆ, ಬಡವರಿಗೆ ಭೂಮಿ ಕೊಡಬೇಕು ಎನ್ನುವ ಕಾಳಜಿ ಇಲ್ಲದಿರುವುದೇ ಭೂಮಿ ಹಕ್ಕು ಸಿಗದಿರುವುದಕ್ಕೆ ಮುಖ್ಯ ಕಾರಣವಾಗಿದೆ ಎಂದರು.ಆಡಳಿತ ಪಕ್ಷದ ಮುಖಂಡರಾದ ಇವರು ಹಾದಿ ಬೀದಿಯಲ್ಲಿ ಮುಗ್ಧ ಜನರಿಗೆ ಮಂಕುಬೂದಿ ಎರಚುವ ಬದಲು ಮುಖ್ಯಮಂತ್ರಿಗೆ ನೇರವಾಗಿ ಮಾತನಾಡಿ ಸಮಸ್ಯೆ ಬಗೆಹರಿಸಲು ಮುಂದಾಗಬಹುದಿತ್ತು ಅಲ್ವೇ ಎಂದು ಪ್ರಶ್ನಿಸಿದರು.
ಅರಣ್ಯ ಇಲಾಖೆ ಅರಣ್ಯ ಹಕ್ಕು ನೀಡಲು ತಡೆಯಾಗಿದೆ ಎಂದು ಹೇಳುವುದು ಸರಿಯಲ್ಲ. ಕಾನೂನಿನಲ್ಲಿ 75 ವರ್ಷಗಳ ಹಿಂದಿನ ದಾಖಲೆ ಅಂದರೆ, 1930ಕ್ಕೂ ಹಿಂದಿನ ದಾಖಲೆ ಬಗ್ಗೆ ಪ್ರಸ್ತಾಪ ಇರುವುದು ಅಡ್ಡಿಯಾಗಿದೆ. ಈ ಷರತ್ತನ್ನು ಕೇಂದ್ರ ಸರ್ಕಾರ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದು ತೆಗೆದು ಹಾಕಬೇಕು. ಆಗ ಮಾತ್ರ 2005ರ ವರೆಗಿನ ಅತಿಕ್ರಮಣದಾರರಿಗೆ ಭೂಮಿ ಸಿಗಲು ಸಾಧ್ಯ. ಈ ಹಿನ್ನೆಲೆಯಲ್ಲೆ ರೈತ ಸಂಘ ರಾಜ್ಯದಲ್ಲಿ, ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ದೇಶಾದ್ಯಂತ ಅರಣ್ಯ ಕಾನೂನಿಗೆ ಸೂಕ್ತ ತಿದ್ದುಪಡಿಗೆ ಒತ್ತಾಯಿಸಿ ಹೋರಾಟ ನಡೆಸುತ್ತಿದೆ ಎಂದು ಶಾಂತಾರಾಮ ನಾಯಕ ತಿಳಿಸಿದರು.ರೈತ ಸಂಘದ ಸದಸ್ಯತ್ವ ಅಭಿಯಾನ ಮಾ.24ರಂದು ಜಿಲ್ಲೆಯಾದ್ಯಂತ ನಡೆಯಲಿದೆ. ಎಲ್ಲ ರೈತಾಪಿ ಜನತೆ ರೈತ ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು ಎಂದರು.
ಸಭೆಯಲ್ಲಿ ಶ್ಯಾಮನಾಥ ನಾಯ್ಕ ಕದ್ರಾ, ಪ್ರೇಮಾನಂದ ವೇಳಿಪ್ ಜೋಯಡಾ, ಬುಜಂಗ ಚಿಬ್ಬಲಕರ ಹಳಿಯಾಳ, ಸಹದೇವ ತೆಗ್ನೋಳಕರ, ಗೌರೀಶ ನಾಯಕ, ಸಂತೋಷ ನಾಯ್ಕ ಅಂಕೋಲಾ, ತಿಮ್ಮಪ್ಪ ಗೌಡ ಹೊನ್ನಾವರ, ನಾಗಪ್ಪ ಯಲ್ಲಾಪುರ, ಗಣೇಶ ಪಟಗಾರ ಪಾಲ್ಗೊಂಡಿದ್ದರು.