ಸಾರಾಂಶ
ಹುಲಿ ಜಮೀನಿನಲ್ಲಿದೆ ಎಂದು ಹೇಳಿದ ನಂತರವೂ ವಿಳಂಬವಾಗಿ ಬಂದ ಅರಣ್ಯ ಸಿಬ್ಬಂದಿಯನ್ನು ಆಕ್ರೋಶಗೊಂಡ ಹಲವು ರೈತರು ಹುಲಿ ಸೆರೆಗೆ ಇಡಲಾಗಿದ್ದ ಬೋನಿಗೆ ಕೂಡಿ ಹಾಕಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಬಳಿ ನಡೆದಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಹುಲಿ ಜಮೀನಿನಲ್ಲಿದೆ ಎಂದು ಹೇಳಿದ ನಂತರವೂ ವಿಳಂಬವಾಗಿ ಬಂದ ಅರಣ್ಯ ಸಿಬ್ಬಂದಿಯನ್ನು ಆಕ್ರೋಶಗೊಂಡ ಹಲವು ರೈತರು ಹುಲಿ ಸೆರೆಗೆ ಇಡಲಾಗಿದ್ದ ಬೋನಿಗೆ ಕೂಡಿ ಹಾಕಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಬಳಿ ನಡೆದಿದೆ.ಬೊಮ್ಮಲಾಪುರ ನಿವಾಸಿ ಗಂಗಪ್ಪಗೆ ಸೇರಿದ ಜಮೀನಿನಲ್ಲಿ ಮಂಗಳವಾರ ಬೆಳಗ್ಗೆ ಹುಲಿ ಕಾಣಿಸಿಕೊಂಡಿದೆ ಬೇಗ ಬಂದು ಹಿಡಿಯುವಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ರೈತರು ಮಾಹಿತಿ ನೀಡಿದ್ದರು. ಸ್ಥಳಕ್ಕೇ ಇಬ್ಬರು ಡಿಆರ್ಎಫ್ಒ, ಎಡಿಎಸ್ ಹಾಗೂ ಗಾರ್ಡ್ಗಳು ಸೇರಿದಂತೆ 7 ಮಂದಿ ಗಂಗಪ್ಪ ಜಮೀನಿಗೆ ಹೋಗುವಷ್ಟರಲ್ಲಿ ಆಕ್ರೋಶಗೊಂಡ ರೈತರು ಗಂಗಪ್ಪ ಜಮೀನಿನಲ್ಲಿ ಇಡಲಾಗಿದ್ದ ಬೋನಿಗೆ 7 ಅರಣ್ಯ ಸಿಬ್ಬಂದಿಯನ್ನು ನುಗ್ಗಿಸಿ ಲಾಕ್ ಮಾಡಿದ್ದಾರೆ. ಈ ವಿಷಯ ತಿಳಿದ ಕೊಡಲೇ ಗ್ರಾಪಂ ಮಾಜಿ ಅಧ್ಯಕ್ಷ, ಬಿಜೆಪಿಯ ಶಿವಪ್ರಸಾದ್ ಅವರು ರೈತರೊಂದಿಗೆ ಮಾತನಾಡಿ ಸಿಬ್ಬಂದಿಯನ್ನು ಬೋನಿನಿಂದ ಬಿಡಿಸಿದ್ದಾರೆ.
ವಿಷಯ ಅರಿತ ಗುಂಡ್ಲುಪೇಟೆ ಎಸಿಎಫ್ ಕೆ.ಸುರೇಶ್, ಬಂಡೀಪುರ ಎಸಿಎಫ್ ಎನ್.ಪಿ.ನವೀನ್ ಕುಮಾರ್, ಸ್ಥಳೀಯ ಪೊಲೀಸರು ಸ್ಥಳಕ್ಕಾಗಮಿಸಿದಾಗ ರೈತರು ಆಕ್ರೋಶ ವ್ಯಕ್ತಪಡಿಸಿ, ಹುಲಿ ಸೆರೆಗೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನ ಬಳಿ ಕಟ್ಟಲಾಗಿದ್ದ ಹಸು ಸತ್ತು ಹೋಗಿದೆ. ಹುಲಿ ಸೆರೆಗೆ ಇಲಾಖೆ ಬೇಜವಬ್ದಾರಿ ತನ ಎದ್ದು ಕಾಣುತ್ತಿದ್ದರಿಂದ ಸಿಬ್ಬಂದಿಯನ್ನು ಕೂಡಿ ಹಾಕಿದ್ದೇವೆ ಎಂದು ಸಮಜಾಯಿಸಿ ನೀಡಿದರು.ಗುಂಡ್ಲುಪೇಟೆ ಎಸಿಎಫ್ ಕೆ.ಸುರೇಶ್ ಮಾತನಾಡಿ, ಹುಲಿ ಹಾವಳಿ ತಡೆಗೆ ನಾಳೆಯಿಂದ ಸಾಕಾನೆ ಮೂಲಕ ಕೂಂಬಿಂಗ್ ನಡೆಸಲಾಗುತ್ತದೆ ಎಂದು ರೈತರ ಮನವೊಲಿಸಿದ್ದಾರೆ.
ಸ್ಥಳಕ್ಕಾಗಮಿಸಿದ ರೈತಸಂಘದ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ಅರಣ್ಯ ಇಲಾಖೆ ಸಿಬ್ಬಂದಿ ಕೂಡಿ ಹಾಕಿದ ರೈತರ ಮೇಲೆ ಕೇಸು ದಾಖಲಿಸಿದರೆ ರೈತರು ಕೂಡ ಕೇಸು ದಾಖಲಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.