ಸಾರಾಂಶ
ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆ ಹಿಂಡನ್ನು ಮರಳಿ ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಮಡಿಕೇರಿ : ತಿತಿಮತಿ ಅರಣ್ಯ ವಲಯಕ್ಕೆ ಒಳಪಡುವ ಚೆನ್ನಂಗಿ, ಬಾಡಗ ಬಾಣಂಗಾಲ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆ ಹಿಂಡನ್ನು ಮರಳಿ ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಬಾಡಗ ಬಾಣಂಗಾಲ ಗ್ರಾಮದ ಬಾಣಂಗಾಲ ಎಸ್ಟೇಟ್ ಮತ್ತು ನ್ಯೂ ಮಾರ್ಗೋಳ್ಳಿ ಎಸ್ಟೇಟಿನಲ್ಲಿ ಬೀಡುಬಿಟ್ಟಿದ ಮರಿಯಾನೆ ಸೇರಿದಂತೆ ಸುಮಾರು ಎಂಟು ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ ಮಾಲ್ದಾರೆ ಮೀಸಲು ಅರಣ್ಯಕ್ಕೆ ಮರಳಿ ಅಟ್ಟಿಸಲಾಗಿದೆ.ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಯವರ ಸೂಚನೆ ಮೇರೆಗೆ ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಕೆ.ಪಿ ರವರ ನಿರ್ದೇಶನದ ಮೇರೆಗೆ ವಲಯ ಅರಣ್ಯ ಅಧಿಕಾರಿ ಗಂಗಾಧರ್ ಮಾರ್ಗದರ್ಶನದಲ್ಲಿ ಚೆನ್ನಂಗಿ ಉಪ ವಲಯ ಅರಣ್ಯ ಅಧಿಕಾರಿ ಶಶಿ.ಪಿ.ಟಿ ಮತ್ತು ತಂಡದವರು ಕಾರ್ಯಾಚರಣೆ ನಡೆಸಿ ಆನೆಗಳನ್ನು ಅರಣ್ಯಕ್ಕೆ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರ್ ಆರ್ ಟಿ ತಂಡದ ರಂಜಿತ್, ಶಂಕರ್, ಪ್ರದೀಪ, ರೋಷನ್, ಸುಂದರ, ಧನು, ಪ್ರವೀಣ, ಪ್ರಜ್ವಲ್ ಮತ್ತು ಅರುಣ ಹಾಗೂ ವನ್ಯಜೀವಿ ವಲಯದ ಸಿಬ್ಬಂದಿ ಕೃಷ್ಣಪ್ಪ ಆಕಾಶ್ ಮತ್ತು ಶಿವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.