ನಾನು ಎಂಬುದನ್ನು ಬಿಟ್ಟು ದೇವರ ಸ್ಮರಣೆ ಮಾಡಿ: ಗಣಪತಿ ಶ್ರೀಗಳ ಸಲಹೆ

| Published : May 27 2024, 01:01 AM IST

ಸಾರಾಂಶ

ಶ್ರೀದತ್ತ ವೆಂಕಟರಮಣ ಸ್ವಾಮಿ ಸನ್ನಿಧಿಗೆ ಬಂದು ಗೋವಿಂದನ ಸ್ಮರಣೆ ಮಾಡಿದರೆ, ಆ ದೇವನನ್ನು ನೆನೆದರೆ ಕಷ್ಟ ಕೋಟಲೆಗಳಿಂದ ಹೊರ ಬರಬಹುದು ಶಾಂತಿ, ನೆಮ್ಮದಿ ಸಿಗಲಿದೆ. ಆದ್ದರಿಂದ ಮನದಲ್ಲಿರುವ ಎಲ್ಲಾ ಯೋಚನೆಗಳನ್ನು ಬಿಟ್ಟು ಮನಸಾರೆ ಪ್ರಾರ್ಥನೆ ಮಾಡಿಒಳ್ಳೆಯದಾಗುತ್ತದೆ. ನಾನು ಎಂಬುದನ್ನು ಬಿಟ್ಟು ದೇವರ ಸ್ಮರಣೆ ಮಾಡಿ.

ಕನ್ನಡಪ್ರಭ ವಾರ್ತೆ ಮೈಸೂರು

ಮನದಲ್ಲಿರುವ ಎಲ್ಲಾ ಯೋಚನೆಗಳನ್ನು ಬಿಟ್ಟು ಮನಸಾರೆ ಪ್ರಾರ್ಥನೆ ಮಾಡಿಒಳ್ಳೆಯದಾಗುತ್ತದೆ. ನಾನು ಎಂಬುದನ್ನು ಬಿಟ್ಟು ದೇವರ ಸ್ಮರಣೆ ಮಾಡಿ ಎಂದು ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಲಹೆ ನೀಡಿದರು.

ನಗರದ ನಂಜನಗೂಡು ರಸ್ತೆಯಲ್ಲಿರುವ ಅವಧೂತ ದತ್ತಪೀಠದ ನಾದಮಂಟಪದಲ್ಲಿ ಗಣಪತಿ ಶ್ರೀಗಳ 82ನೇ ವರ್ಧಂತಿ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ವಿವಿಧ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ದತ್ತ ವೆಂಕಟರಮಣ ಸ್ವಾಮಿ ಸನ್ನಿಧಿಗೆ ಬಂದು ಗೋವಿಂದನ ಸ್ಮರಣೆ ಮಾಡಿದರೆ, ಆ ದೇವನನ್ನು ನೆನೆದರೆ ಕಷ್ಟ ಕೋಟಲೆಗಳಿಂದ ಹೊರ ಬರಬಹುದು ಶಾಂತಿ, ನೆಮ್ಮದಿ ಸಿಗಲಿದೆ ಎಂದು ತಿಳಿಸಿದರು.

ಇದೇ ವೇಳೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ ನಾದಮಂಟಪದಲ್ಲಿ ಪ್ರತ್ಯಕ್ಷ ಪಾದಪೂಜೆಯನ್ನು ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ನೆರವೇರಿಸಿದರು. ನಂತರ ಚೈತನ್ಯ ಅರ್ಚನೆ ದತ್ತ ಪೀಠದ ಬಿರುದು ಪ್ರದಾನ ಮಾಡಲಾಯಿತು.

ವೇದ ನಿಧಿ- ಕಪಿಲವಾಯಿ ರಾಮ ಸೋಮಯಾಜುಲು, ಬಾಪಟ್ಟ (ವೈದಿಕ ಕೈಂಕರ್ಯಗಳು - ಕಾಂಡತ್ರಯ ಪ್ರೌತ ಪ್ರಯೋಗ), ಶಾಸ್ತ್ರ ನಿಧಿ- ಬ್ರಜ್ ಭೂಷಣ್ ಓಝಾ, ವಾರಾಣಸಿ (ವ್ಯಾಕರಣ), ನಾದ ನಿಧಿ- ನಾಗೈ ಕೆ. ಮುರಳೀಧರನ್, ಚೆನ್ನೈ (ಕರ್ನಾಟಕ ಸಂಗೀತ), ದತ್ತ ಪೀಠ ಆಸ್ಥಾನ ವಿದ್ವಾನ್- ಪ್ರಭಲ ಸುಬ್ರಹ್ಮಣ್ಯ ಶರ್ಮಾ, ರಾಜಮಂಡ್ರಿ (ವಾಸ್ತು ಶಾಸ್ತ್ರ), ದತ್ತ ಪೀಠ ಆಸ್ಥಾನ ವಿದ್ವಾನ್- ಮಾಮಿಳ್ಳಪಲ್ಲಿ ಮೃತ್ಯುಂಜಯ ಪ್ರಸಾದ್, ತೆನಾಲಿ (ಶೈವಾಗಮ), ದತ್ತ ಪೀಠ ಆಸ್ಥಾನ ವಿದ್ವಾನ್- ತ್ರಿಚೂರ್ ಸಹೋದರರು ಕೃಷ್ಣಮೋಹನ್ ಮತ್ತು ರಾಮ್ ಕುಮಾರ್ ಮೋಹನ್ (ಕರ್ನಾಟಕ ಸಂಗೀತ), ಸಸ್ಯ ಬಂಧು- ಮಾಯಾ ಸೀತಾರಾಮ್ (ಬೋನ್ಸಾಯ್), ಜಯಲಕ್ಷ್ಮಿ ಪುರಸ್ಕಾರ- ಕರುಮೂರಿ ಲಲಿತಮ್ಮ, ವಿಜಯವಾಡ (ಸಮುದಾಯ ಸೇವೆ), ದತ್ತ ಪೀಠ ಬಂಧು- ಸಂಪರ ನಾಗ ಸಾಯಿ ರಾಮಚಂದ್ರ ಶೇಖರ್, ಹೈದರಾಬಾದ್ (ಸಮುದಾಯ ಸೇವೆ) ಅವರಿಗೆ ಶ್ರೀಗಳು ಪ್ರಶಸ್ತಿ ಪ್ರದಾನ ಮಾಡಿದರು.

ಬೆಳಗ್ಗೆ ಸ್ವಾಮೀಜಿಯವರನ್ನು ನೃತ್ಯ, ಕೋಲಾಟದೊಂದಿಗೆ ಭವ್ಯ ಮೆರವಣಿಗೆಯಲ್ಲಿ ನಾದ ಮಂಟಪಕ್ಕೆ ಕರೆ ತಂದಿದ್ದು ವಿಶೇಷವಾಗಿತ್ತು. ಕಾಶಿ ವಿಶ್ವನಾಥ ದೇವಾಲಯ,ಶ್ರೀದತ್ತ ವೆಂಕಟರಮಣ ಸ್ವಾಮಿ, ಶನೈಶ್ಚರ ಸ್ವಾಮಿ, ರಾಮದೇವರ ದೇವಸ್ಥಾನ, ಬೆಟ್ಟದಪುರದ ಶಿವ ದೇವಾಲಯ ಸೇರಿದಂತೆ ನಾನಾ ದೇವಾಲಯಗಳಿಂದ ತರಲಾದ ತೀರ್ಥ ಪ್ರಸಾದವನ್ನು ಸ್ವಾಮೀಜಿಯವರಿಗೆ ನೀಡಲಾಯಿತು.

ಕಾಶ್ಮೀರದ ನಿವಾಸಿ ಮಹಮ್ಮದ್ ಎಂಬವರು ಕೈನಿಂದ ನೇಯ್ದಿರುವ ರಾಧಾ, ಕೃಷ್ಣ ಉದ್ಯಾನದಲ್ಲಿ ವಿಹರಿಸುತ್ತಿರುವ ಚಿತ್ರವುಳ್ಳ ಸುಂದರವಾದ ಕಾಶ್ಮೀರಿ ಶಾಲನ್ನು ಕಮಲ್ ಕಪೂರ್ ದಂಪತಿ ಶ್ರೀಗಳಿಗೆ ಸಮರ್ಪಿಸಿದರು. ಸ್ವಾಮೀಜಿ ಅದನ್ನು ಧರಿಸಿ ಶಾಲಿನ ಸೌಂದರ್ಯವನ್ನು ಮತ್ತು ಮಹಮ್ಮದ್ ಅವರ ಕಲೆಯನ್ನು ಶ್ಲಾಘಿಸಿದರು.