ಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟದಲ್ಲಿ ರಾಜಕೀಯ ಇರಬಾರದು.
ಶಿರಸಿ ಜಿಲ್ಲೆಗಾಗಿ ನಾವು ಸಮಾಲೋಚನಾ ಸಭೆಯಲ್ಲಿ ನಿರ್ಣಯ । ಹೋರಾಟದ ವಿಚಾರದಲ್ಲಿ ರಾಜಕೀಯ ಬೇಡ
ಕನ್ನಡಪ್ರಭ ವಾರ್ತೆ ಶಿರಸಿಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟದಲ್ಲಿ ರಾಜಕೀಯ ಇರಬಾರದು. ಎಲ್ಲರೂ ಒಗ್ಗಟ್ಟಾಗಿ ಪಕ್ಷ ಭೇದ ಬದಿಗಿಟ್ಟು ಒಮ್ಮತದ ಹೋರಾಟದಿಂದ ಗೆಲುವು ಸಾಧ್ಯ ಎಂಬ ನಿರ್ಣಯವನ್ನು ನಗರದ ನೆಮ್ಮದಿ ರಂಗಧಾಮದಲ್ಲಿ ಗುರುವಾರ ಆಯೋಜಿಸಿದ್ದ ಶಿರಸಿ ಜಿಲ್ಲೆಗಾಗಿ ನಾವು ಸಮಾಲೋಚನಾ ಸಭೆಯಲ್ಲಿ ಕೈಗೊಳ್ಳಲಾಯಿತು.
ಸಾಮಾಜಿಕ ಕಾರ್ಯಕರ್ತ ವೆಂಕಟೇಶ ಹೆಗಡೆ ಹೊಸಬಾಳೆ ಮಾತನಾಡಿ, ಶಿರಸಿ ಜಿಲ್ಲೆ ಅತಿ ಅವಶ್ಯಕವಾಗಿದೆ. ಜಿಲ್ಲಾ ಹೋರಾಟದ ವಿಚಾರದಲ್ಲಿ ರಾಜಕೀಯ ಬೇಡ. ರಾಜಕೀಯದ ಹೊರತಾಗಿ ಹೋರಾಟ ಮಾಡಬೇಕಿದೆ. ಪಕ್ಷಾತೀತವಾದ ಸಂಘಟನೆ ರಚನೆಯಾಗಬೇಕು. ಆ ಸಂಘಟನೆಯಲ್ಲಿ ಎಲ್ಲ ಪಕ್ಷಗಳ ಶಾಸಕರು, ಜನಪ್ರತಿನಿಧಿಗಳು ಇರಬೇಕು. ಚರ್ಚೆಗಳು ನಡೆಯಬೇಕು. ಜಿಲ್ಲಾ ಹೋರಾಟದ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ, ಒಮ್ಮತದ ನಿರ್ಧಾರಕ್ಕೆ ಬರಬೇಕು. ನಾವೆಲ್ಲರೂ ಒಟ್ಟಾಗಿ ಸರ್ಕಾರದ ಗಮನಕ್ಕೆ ತರಬೇಕು ಎಂದರು.ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಪ್ರಮುಖ ಕೃಷ್ಣಮೂರ್ತಿ ಪನ್ನೆ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ಏಕೀಕರಣದ ಸಮಯದಲ್ಲೇ ಶಿರಸಿ ಜಿಲ್ಲೆಯನ್ನಾಗಿ ಮಾಡುವ ಅವಕಾಶವಿದ್ದರೂ ಸಹ ಜಿಲ್ಲೆಯನ್ನಾಗಿ ಘೋಷಣೆ ಮಾಡಲಿಲ್ಲ. 1956ರಲ್ಲಿ ಕೊಡಗು ಜಿಲ್ಲೆ ಮಾಡಲಾಗಿದೆ. ಅತೀ ಕಡಿಮೆ ಜನಸಂಖ್ಯೆ ಇದ್ದರೂ ಸಹ ಕೊಡಗನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಲಾಗಿದೆ. ಶಿರಸಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡುವ ಎಲ್ಲಾ ಅರ್ಹತೆಗಳಿವೆ. ಹಲವು ಸಂಘಟನೆಗಳು ಶಿರಸಿ ಜಿಲ್ಲೆಗೆ ವಿರೋಧ ವ್ಯಕ್ತಪಡಿಸಿದ್ದರು. ಈಗಾಗಲೇ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಯಾವುದೇ ಹೊಸ ತಾಲೂಕು ಅಥವಾ ಜಿಲ್ಲೆಯ ರಚನೆಯ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ. ಶಾಸಕ ಭೀಮಣ್ಣ ನಾಯ್ಕ ಸಹ ಶಿರಸಿ ಜಿಲ್ಲಾ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಧಿವೇಶನದ ಸಂದರ್ಭದಲ್ಲಿ ಶಿರಸಿ ಜಿಲ್ಲೆಯ ಘೋಷಣೆ ಬಗ್ಗೆ ಒತ್ತಡ ಹಾಕಬೇಕಿದೆ ಎಂದರು.ಮುಖಂಡರಾದ ಪ್ರಭಾಕರ ಜೋಗಳೇಕರ್, ಆರ್.ವಿ. ಹೆಗಡೆ ಬಾಳೆಗದ್ದೆ, ರಾಜು ಉಗ್ರಾಣಕರ್, ಚಿದಾನಂದ ಹರಿಜನ ಮುಂಡಗೋಡ, ರವಿ ಹೆಗಡೆ ಗಡಿಹಳ್ಳಿ ಮಾತನಾಡಿದರು. ಜಿಲ್ಲಾ ಹೋರಾಟದ ಪ್ರಮುಖರು ಸೇರಿದಂತೆ ಹಲವರು ಇದ್ದರು.