ಕೊಪ್ಪಳ: ಚುನಾವಣೆ ಬಂದಾಗ ಎದುರಿಸೋಣ, ಈಗ ಚುನಾವಣೆ ಬಂದಿಲ್ಲ. ಭೂಮಿಯನ್ನು ಜೂಜು ಕಟ್ಟುವ ಬದಲು ಮಾಜಿ ದೇವದಾಸಿಯರ ಭೂಮಿ ವಾಪಸ್ ಕೊಡಬೇಕು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ಕುರಿತು ಮಾತನಾಡುವ ನೈತಿಕ ಹಕ್ಕಿಲ್ಲ. ನಾನು ಯಾವತ್ತೂ ನಿಮ್ಮ ಮೇಲೆ ಆರೋಪ ಮಾಡಿಲ್ಲ, ಅದರ ಅಗತ್ಯವೂ ನನಗಿಇಲ್ಲ. ನಿಮ್ಮ ಬಗ್ಗೆ ಇರುವ ಆಡಿಯೋ. ವೀಡಿಯೋ ಬಿಡಲೇ ಎಂದ ಅವರು, ನಾನು ಅಂಥ ಕೆಲಸ ಮಾಡಲ್ಲ ಎಂದರು.ಕನಕಗಿರಿ ಕ್ಷೇತ್ರಕ್ಕೆ ಇರುವ ವಡ್ಡರಹಟ್ಟಿ ಏತ ನೀರಾವರಿ ಯೋಜನೆಯನ್ನು ದಢೇಸ್ಗೂರು ಸ್ವಂತಕ್ಕೆ ಹಾಕಿಸಿಕೊಂಡಿದ್ದಾರೆ. ₹೧೪ ಕೋಟಿಯ ಎರಡು ಏತ ನೀರಾವರಿ ಸ್ವಂತ ಜಮೀನಿಗೆ ಹಾಕಿಸಿಕೊಂಡಿದ್ದಾರೆ. ಇದು ಸ್ಯಾಂಪಲ್, ನೀನು ಏನೇನು ಮಾಡಿದ್ದೆ ದಾಖಲೆಗಳಿವೆ ಎಂದು ದಢೇಸ್ಗೂರು ವಿರುದ್ದ ವಾಗ್ದಾಳಿ ಮಾಡಿದರು.
ಚುನಾವಣೆಗೆ ಇನ್ನೂ ಎರಡುವರೆ ವರ್ಷವಿದೆ. ಒಂದೊಂದೇ ಬಿಡುಗಡೆ ಮಾಡಬೇಕಾಗುತ್ತದೆ. ನೀನು ಏನು ಎಂಬುದು ಕ್ಷೇತ್ರದ ಜನಕ್ಕೆ ಗೊತ್ತಿದೆ. ನಾನು ಕ್ಷೇತ್ರಕ್ಕೆ ಮೊದಲು ಬಂದಾಗ ಡಿಸೇಲ್ ಹಾಕಿಸಲು ಹಣ ಇಲ್ಲ ಎಂದಿರುವೆ. ಹೌದು ನನಗೆ ಹಣ ಇರಲಿಲ್ಲ. ಆದರೆ ನಾನು ಗ್ರಾನೈಟ್ ವ್ಯಾಪಾರಿ ಎಂಬುದು ಜನಕ್ಕೆ ಗೊತ್ತಿದೆ. ನಾನು ಗೆದ್ದರೆ ೫೦ ಎಕರೆ ಭೂಮಿ ಕೊಡುವೆ ಎಂದಿರುವೆ. ನನಗೆ ಭೂಮಿ ಕೊಡುವುದಕ್ಕಿಂತ ವಿಮುಕ್ತ ದೇವದಾಸಿಯರಿಗೆ ಭೂಮಿ ನೀಡಿ ಎಂದು ಟಾಂಗ್ ಕೊಟ್ಟಿದ್ದಾರೆ.ನನ್ನ ಒಂದು ವಿಡಿಯೋ ಬಿಡುಗಡೆ ಮಾಡಿದ್ದೀರಿ, ನೀನು ಕೆಟ್ಟದಾಗಿ ಬೈಯ್ದಿರುವ ಅದೆಷ್ಟು ವಿಡಿಯೋ ಇವೆ ಎನ್ನುವುದು ಗೊತ್ತಿದೆಯಾ ನಾನು ಬಿಡುಗಡೆ ಮಾಡ್ಲಾ ಎಂದರು.
ಕೊಪ್ಪಳ, ಭಾಗ್ಯನಗರ ಬಂದ್ ಸಿಎಂ ಗಮನಕ್ಕೆ ತರುವೆ: ತಂಗಡಗಿ
ಬಿಎಸ್ ಪಿಎಲ್ ಕಾರ್ಖಾನೆ ಸ್ಥಾಪಿಸುವುದನ್ನು ವಿರೋಧಿಸಿ ಫೆ.24 ರಂದು ಕೊಪ್ಪಳ, ಭಾಗ್ಯನಗರ ಬಂದ್ ಮಾಡಿ ಪ್ರತಿಭಟಿಸುವ ಮಾಹಿತಿ ಇದ್ದು, ಇದನ್ನು ಸಿಎಂ ಸಿದ್ದರಾಮ್ಯಯ ಗಮನಕ್ಕೆ ತರುತ್ತೇನೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಈಗಾಗಲೇ ಕಳೆದ ವರ್ಷದ ಹೋರಾಟದ ವೇಳೆ ಸಿಎಂ ಬಳಿ ನಿಯೋಗ ಒಯ್ದು ಮನವರಿಕೆ ಮಾಡಿದ್ದರಿಂದ ತಕ್ಷಣ ತಾತ್ಕಾಲಿಕ ತಡೆ ನೀಡಿದ್ದರು. ದೂರವಾಣಿ ಮೂಲಕ ಕರೆ ಮಾಡಿ ಡಿಸಿಗೆ ಸೂಚಿಸಿದ್ದರು. ಈಗ ರದ್ಧು ಮಾಡಿರುವ ಆದೇಶ ನೀಡುವಂತೆ ಆಗ್ರಹಿಸಿ ಹೋರಾಟ ನಡೆಯುತ್ತಿದ್ದು, ಸರ್ಕಾರದ ಗಮನಕ್ಕೆ ಖಂಡಿತವಾಗಿಯೂ ಈ ವಿಷಯ ತರುತ್ತೇನೆ ಎಂದರು.