ಸಾರಾಂಶ
ಈ ಬಾರಿ ಸ್ಥಳೀಯರು ಮತ್ತು ಹೊರಗಿನವರು ಎಂಬ ಘೋಷಣೆ ಚಿತ್ರದುರ್ಗದಲ್ಲಿ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಈ ಗುಲ್ಲನ್ನು ಧಿಕ್ಕರಿಸಿ ಕೊನೆಗೂ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
ಚಿತ್ರದುರ್ಗ: ಈ ಬಾರಿ ಸ್ಥಳೀಯರು ಮತ್ತು ಹೊರಗಿನವರು ಎಂಬ ಘೋಷಣೆ ಚಿತ್ರದುರ್ಗದಲ್ಲಿ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಈ ಗುಲ್ಲನ್ನು ಧಿಕ್ಕರಿಸಿ ಕೊನೆಗೂ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
ಗುರುವಾರ ಕಾಂಗ್ರೆಸ್ನಿಂದ ಲೋಕಸಭೆ ಅಧಿಕೃತ ಟಿಕೆಟ್ ಘೋಷಣೆಯಾಗಿದೆ. ಚಂದ್ರಪ್ಪ ಸತತ ಮೂರನೇ ಬಾರಿಗೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ಲೋಕಸಭಾ ಚುನಾವಣೆ ಬಂದಾಗ ಚಿತ್ರದುರ್ಗ ಕ್ಷೇತ್ರದಲ್ಲಿ ಸ್ಥಳೀಯರು ಹಾಗೂ ಹೊರಗಿನವರು ಎಂಬ ಕೂಗು ಕೇಳಿ ಬರುತ್ತದೆ. ಇದಕ್ಕೆ ಬಿಜೆಪಿ ಕೂಡ ಹೊರತಾಗಿಲ್ಲ.ಕಾಂಗ್ರೆಸ್ನಲ್ಲಿ ಜೆ.ಜೆ.ಹಟ್ಟಿ ತಿಪ್ಪೆಸ್ವಾಮಿ, ನೇರ್ಲಗುಂಟೆ ರಾಮಪ್ಪ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ಪುತ್ರ ವಿನಯ್ ತಿಮ್ಮಾಪುರ ಸೇರಿದಂತೆ 8ಕ್ಕೂ ಹೆಚ್ಚು ಮಂದಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಎಲ್ಲರನ್ನೂ ಮೀರಿ ಚಂದ್ರಪ್ಪ ಅವರಿಗೆ ಮತ್ತೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ದಿಟ್ಟ ಹೆಜ್ಜೆ ಇಟ್ಟಿದೆ.
ಈ ಮೊದಲು ರಾಜ್ಯದಾದ್ಯಂತ ಪ್ರಧಾನಿ ಮೋದಿ ಅಲೆ ಇದ್ದಾಗಲೂ ಚಿತ್ರದುರ್ಗ ಕ್ಷೇತ್ರದಲ್ಲಿ ಬಿ.ಎನ್.ಚಂದ್ರಪ್ಪ ಗೆಲುವಿನ ನಗೆ ಬೀರುವ ಮೂಲಕ ಅಚ್ಚರಿ ಫಲಿತಾಂಶ ತಂದುಕೊಟ್ಟಿದ್ದರು. ಈ ಬಾರಿಯೂ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಶಾಸಕರು ಚಂದ್ರಪ್ಪ ಅವರ ಪರ ಬ್ಯಾಟಿಂಗ್ ಮಾಡಿದ್ದು, ಟಿಕೆಟ್ ಪಡೆಯಲು ಯಶಸ್ವಿಯಾಗಿದ್ದಾರೆ.