ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಬಿ.ಹಟ್ನ ಗ್ರಾಮದ ಹಲವರು ಅಪಘಾತವೊಂದರಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ಭೇಟಿಯಾದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಸಾಂತ್ವನ ಹೇಳಿದರು. ತಾಲೂಕಿನ ಬಿ. ಹಟ್ನ ಗ್ರಾಮದಿಂದ ನಾಗಮಂಗಲ ತಾಲೂಕು ಚಿಕ್ಕಯಗಟಿ ಗ್ರಾಮದಲ್ಲಿರುವ ಚಿಕ್ಕಯಗಟಿ ಮಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಹರಿಸೇವೆ ಕಾರ್ಯಕ್ರಮಕ್ಕಾಗಿ ಗೂಡ್ಸ್ ಆಟೋದಲ್ಲಿ ತೆರಳಿದ್ದರು. ಪೂಜೆ ಮುಗಿಸಿಕೊಂಡು ವಾಪಸ್ಸು ಬರುವಾಗ ಬಸರಾಳು ಬಳಿಯ ಕೋಡಿಕೊಪ್ಪಲು ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ಆಟೋ ರಸ್ತೆ ಬದಿಗೆ ಉರುಳಿಬಿದ್ದು ತಾಯಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದರು. ಗಾಯಗೊಂಡವರನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುಗಳ ಸ್ಥಿತಿ- ಗತಿಗಳ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದ ಸಿ.ಎಸ್.ಪುಟ್ಟರಾಜು ಅವರು ಗಾಯಾಳುಗಳಿಗೆ ಆತ್ಮಸ್ಥೈರ್ಯ ತುಂಬಿದರು. ಇದೇ ವೇಳೆ ಗಾಯಾಳುಗಳ ಹೆಚ್ಚಿನ ಚಿಕಿತ್ಸೆಗೆ ವೈಯಕ್ತಿಕವಾಗಿ ವೆಚ್ಚ ಭರಿಸುವುದಾಗಿ ಭರವಸೆ ನೀಡಿದರು. ನಂತರ ಆಸ್ಪತ್ರೆ ವೈದ್ಯರ ಕೋರಿ ಮೇರೆಗೆ ವೈಯಕ್ತಿಕ ವೆಚ್ಚದಲ್ಲಿ ೧೦೦೦ ಲೀಟರ್ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಸಹಕರಿಸುವುದಾಗಿ ಹೇಳಿದರು.