ಗಡಿಭಾಗದಲ್ಲಿ ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳನ್ನು ಪೋಷಿಸಿ

| Published : Feb 17 2025, 01:31 AM IST

ಸಾರಾಂಶ

ಗಡಿಭಾಗದಲ್ಲಿ ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ಪೋಷಿಸಿಕೊಂಡು ಹೋಗುವುದು ಅಗತ್ಯವಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸೋಮಶೇಖರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಗಡಿಭಾಗದಲ್ಲಿ ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ಪೋಷಿಸಿಕೊಂಡು ಹೋಗುವುದು ಅಗತ್ಯವಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸೋಮಶೇಖರ ಹೇಳಿದರು.

ನಗರದ ಕನ್ನಡ ಭವನದಲ್ಲಿ ಜರುಗಿದ ಪ್ರಾ.ಬಿ.ಎಸ್.ಗವಿಮಠ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರದ ಯಾವುದೇ ಅನುದಾನವಿಲ್ಲದೇ ಅನೇಕ ಕನ್ನಡಪರ ಸಂಘ-ಸಂಸ್ಥೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕನ್ನಡದ ಪ್ರೀತಿಯೇ ಇದಕ್ಕೆ ಕಾರಣ. ಸರ್ಕಾರ ಈ ಎಡೆಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.12ನೇ ಶತಮಾನ ಕಾಲಘಟ್ಟದಲ್ಲಿ ಶರಣರ ಕನ್ನಡವನ್ನು ಕಟ್ಟುವ ಬೆಳೆಸುವ ಮಹತ್ವದ ಕಾರ್ಯ ಮಾಡಿದರು. ಅವರ ಕೊಡುಗೆ ಅನನ್ಯ. ಆ ಪರಂಪರೆ ಎಂದಿಗೂ ಅನವರತವಾಗಿ ಮುಂದುವರಿದುಕೊಂಡು ಬಂದಿದೆ. ಬಿ.ಎಸ್.ಗವಿಮಠರ ಅಭಿಮಾನಿಗಳು ಸಾಹಿತ್ಯ ಪ್ರತಿಷ್ಠಾನವನ್ನು ಹುಟ್ಟುಹಾಕುವ ಮೂಲಕ ಕನ್ನಡ ಸಾಹಿತ್ಯಕ ಸಾಂಸ್ಕೃತಿಕ ಸೇವೆ ಗೈದ ಸಾಧಕರಿಗೆ ಪ್ರಶಸ್ತಿಯನ್ನು ನೀಡುತ್ತಿರುವುದು ಅಭಿನಂದನೀಯ. ಈ ಸಾಂಸ್ಕೃತಿಕ ಪ್ರತಿಷ್ಠಾನವು ರಚನಾತ್ಮಕ ಕೆಲಸ ಮಾಡುತ್ತ ಮತ್ತಷ್ಟು ವಿಸ್ತರಿಸಲಿ. ಗವಿಮಠರೂ ಎಸ್.ಡಿ.ಇಂಚಲರಂತಹ ಮಹಾಕವಿಗಳನ್ನ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದ್ದಾರೆ. ಗಡಿಭಾಗದಲ್ಲಿರುವ ಕನ್ನಡ ಕೊಡುಗೆ ಅನನ್ಯ. ಇಂದು ಪ್ರತಿಷ್ಠಾನವು ನಿಜವಾದ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತಿರುವುದು ಅಭಿಮಾನ ತಂದಿದೆ. ಈ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.ಡಾ.ಎಚ್.ಬಿ.ರಾಜಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗವಿಮಠರ ಸಾಂಸ್ಕೃತಿಕ ಮನಸ್ಸು ಬಹುದೊಡ್ಡದು. ಕವಿ ಎಚ್.ಡಿ.ಇಂಚಲ್ ಹಾಗೂ ರಂಗ ಕಲಾವಿದರಾಗಿದ್ದ ಏಣಗಿ ಬಾಳಪ್ಪ ರಂತಹ ಮಹನೀಯರನ್ನು ಜೀವಂತವಾಗಿ ಉಳಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಕೆಎಲ್ಇ ಸಂಸ್ಥೆಯ ಇತಿಹಾಸಕಾರರಾಗಿ ಅದರ ಸಾಂಸ್ಕೃತಿಕ ಕೊಡುಗೆ ದಾಖಲಿಸುವ ಮಹತ್ವದ ಕಾರ್ಯ ಮಾಡಿರುವ ಗವಿಮಠರ ಸೇವೆ ಶ್ಲಾಘನೀಯ. ಅವರ ಹೆಸರಿನ ಈ ಪ್ರತಿಷ್ಠಾನವು ಜನಪರವಾದಂತಹ ಕೆಲಸ ಕಾರ್ಯಗಳನ್ನು ನಿರಂತರವಾಗಿ ಗಡಿಭಾಗದಲ್ಲಿ ಮುಂದುವರಿಸಿಕೊಂಡು ಹೋಗಲಿ ಎಂದು ತಿಳಿಸಿದರು.ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ.ವಿ.ಎಸ್.ಮಾಳಿ ಅಭಿನಂದನಪರ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಲ್.ವಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಇದೆ ಸಂದರ್ಭದಲ್ಲಿ ಹಿರಿಯ ವೈದ್ಯರಾದ ಡಾ.ದಯಾನಂದ ನೂಲಿ ಅವರಿಗೆ ಶರಣ ಸಾಹಿತ್ಯಸಿರಿ ಪ್ರಶಸ್ತಿ, ಡಾ.ಗುರುದೇವಿ ಹುಲೆಪ್ಪನವರಮಠ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ, ಜಾಕಿರ್ ನದಾಫ್ ಅವರಿಗೆ ರಂಗ ಚೇತನ ಪ್ರಶಸ್ತಿ, ಸಂತೋಷ ನಾಯಿಕ್ ಅವರಿಗೆ ಕಾವ್ಯ ಸಿರಿ ಪ್ರಶಸ್ತಿಗಳನ್ನು ಪ್ರತಿಷ್ಠಾನದಿಂದ ನೀಡಿ ಗೌರವಿಸಲಾಯಿತು. ಇದೆ ಸಂದರ್ಭದಲ್ಲಿ ಡಾ.ಅಶೋಕ್ ನರೋಡೆ ಅವರು ಸಂಪಾದಿಸಿದ ಡಾ.ಪ್ರಭಾಕರ ಕೋರೆಯವರ ಅಭಿನಂದನ ಗ್ರಂಥ ಸಮಾಜಭೂಷಣದ ದ್ವಿತೀಯ ಮುದ್ರಣವನ್ನು ಬಿಡುಗಡೆಗೊಳಿಸಲಾಯಿತು. ನಯನಾ ಗಿರಿಗೌಡರ್ ಪ್ರಾರ್ಥಿಸಿದರು. ಡಾ.ಪಿ.ಜಿ.ಕೆಂಪಣ್ಣವರ್ ಸ್ವಾಗತಿಸಿದರು. ಬಸವರಾಜ್ ಗಾರ್ಗಿ ನಿರೂಪಿಸಿದರು. ಅಕ್ಬರ್ ಸನದಿ ವಂದಿಸಿದರು.ಪ್ರಾಚಾರ್ಯ ಬಿ.ಎಸ್.ಗವಿಮಠ, ಡಾ.ಬಸವರಾಜ್ ಜಗಜಂಪೀ, ಎಂ.ಎಸ್.ಇಂಚಲ, ಡಾ.ಅಶೋಕ್ ನರೋಡೆ, ಯ.ರು.ಪಾಟೀಲ್, ಏಣಗಿ ಸುಭಾಷ್, ಎಫ್.ವಿ.ಮಾನ್ವಿ, ಡಾ.ಎಂ.ವಿ.ಜಾಲಿ, ಡಾ.ಇಚ್ಚಂಗಿ, ಡಾ.ಎಂಟೆತ್ತಿನವರ ಬೆಂಗಳೂರಿನ ಕನ್ನಡ ಪರ ಹೋರಾಟಗಾರ ಪಾಲನೇತ್ರ , ಗಾಂಜಿ, ಶಾಂತಾದೇವಿ ಹುಲೆಪ್ಪನವರಮಠ, ನೀಲಗಂಗಾ ಚರಂತಿಮಠ, ಡಿ.ಎಸ್.ಚೌಗಲಾ ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು.