ಸಾರಾಂಶ
ಮಣಿಪುರ ರೋಟರಿ ಸಂಸ್ಥೆಯ ವತಿಯಿಂದ ಅಂತಾರಾಷ್ಟ್ರೀಯ ರೋಟರಿಯ ೧೨೧ನೇ ಸಂಸ್ಥಾಪನಾ ದಿನಾಚರಣೆಯ ಶುಭಾವಸರದಲ್ಲಿ ಮಣಿಪುರ ಪೇಟೆಯ ಕೇಂದ್ರ ಸ್ಥಾನದಲ್ಲಿ ವೈಜ್ಞಾನಿಕ ಮಾದರಿಯಲ್ಲಿ ನಿರ್ಮಿಸಿದ ‘ರೋಟರಿ ಶಾಂತಿ ವೃತ್ತ’ವನ್ನು ಭಾನುವಾರ ರೋಟರಿ ಅ. ಜಿಲ್ಲೆ ೩೧೮೨ಯ ಜಿಲ್ಲಾ ಗವರ್ನರ್ ಸಿಎ ದೇವ್ಆನಂದ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಕಾಪು
ಇಲ್ಲಿನ ಮಣಿಪುರ ರೋಟರಿ ಸಂಸ್ಥೆಯ ವತಿಯಿಂದ ಅಂತಾರಾಷ್ಟ್ರೀಯ ರೋಟರಿಯ ೧೨೧ನೇ ಸಂಸ್ಥಾಪನಾ ದಿನಾಚರಣೆಯ ಶುಭಾವಸರದಲ್ಲಿ ಮಣಿಪುರ ಪೇಟೆಯ ಕೇಂದ್ರ ಸ್ಥಾನದಲ್ಲಿ ವೈಜ್ಞಾನಿಕ ಮಾದರಿಯಲ್ಲಿ ನಿರ್ಮಿಸಿದ ‘ರೋಟರಿ ಶಾಂತಿ ವೃತ್ತ’ವನ್ನು ಭಾನುವಾರ ರೋಟರಿ ಅ. ಜಿಲ್ಲೆ ೩೧೮೨ಯ ಜಿಲ್ಲಾ ಗವರ್ನರ್ ಸಿಎ ದೇವ್ಆನಂದ್ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ರೋಟರಿಯ ಜಿಲ್ಲಾ ಯೋಜನೆ ರಸ್ತೆ ಸುರಕ್ಷಾ ಜಾಗೃತಿ ಹಾಗೂ ರೋಟರಿ ವರ್ಚಸ್ಸನ್ನು ವೃದ್ಧಿಸುವ ನಿಟ್ಟಿನಲ್ಲಿ ಕೈಗೊಂಡ ಅತ್ಯುತ್ತಮ ಕಾರ್ಯ ಇದಾಗಿದ್ದು, ಮೂರು ಪ್ರಮುಖ ರಸ್ತೆಗಳು ಕೂಡುವ ಈ ಭಾಗದಲ್ಲಿ ರಸ್ತೆಗೆ ಬೆಳಕು, ರಸ್ತೆ ಸೂಚನಾ ಫಲಕಗಳು ಹಾಗೂ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಪ್ರಯೋಜನವಾಗುವ ಸ್ತುತ್ಯ ಕಾರ್ಯವನ್ನು ಮಾಡಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭ ಕೆನರಾ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಪ್ರಬಂಧಕ ನಿರಂಜನ ಆಚಾರ್ಯ, ರೋಟರಿ ಜಿಲ್ಲಾ ಪ್ರಥಮ ಮಹಿಳೆ ರೇಖಾ ದೇವಾನಂದ್, ವಲಯದ ಎಲ್ಲಾ ರೋಟರಿ ಪದಾಧಿಕಾರಿಗಳು, ಕ್ಲಬ್ ಅಧ್ಯಕ್ಷರು ಉಪಸ್ಥಿತರಿದ್ದರು.
ನಂತರ ರೋಟರಿ ಭವನದಲ್ಲಿ ವಲಯ ಐದರ ರೋಟರಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜರುಗಿದ ‘ಶಾಂತಿ ಸಂಗಮ -೨೦೨೫’ ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ವೃತ್ತಿಸೇವಾ ಜಾಗೃತಿ ಸಮಿತಿಯ ಜಿಲ್ಲಾ ಚೇರ್ಮನ್ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ವಿಶ್ವಶಾಂತಿಗಾಗಿಯೇ ಸಂಘಟನೆಗೊಂಡ ಅಂತಾರಾಷ್ಟ್ರೀಯ ರೋಟರಿ ಕಳೆದ ೧೨೦ ವರ್ಷಗಳಲ್ಲಿ ಯಾವುದೇ ಜಾತಿ, ಮತ, ಧರ್ಮ, ವರ್ಣ, ರಾಜಕೀಯದ ಲೇಪವಿಲ್ಲದೆ ಜಾಗತಿಕ ಶಾಂತಿ ಮತ್ತು ಮನುಕುಲದ ಸೇವೆಗಾಗಿ ಅರ್ಪಣಾ ಮನೋಭಾವದಿಂದ ನೂರಾರು ಕಾರ್ಯಗಳನ್ನು ಮಾಡುತ್ತಿದೆ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಮಣಿಪುರ ರೋಟರಿ ಅಧ್ಯಕ್ಷ ಸುಧೀರ್ ಕುಮಾರ್ ವಹಿಸಿದ್ದರು.ವೇದಿಕೆಯಲ್ಲಿ ರೋಟರಿ ವಲಯ ಸಹಾಯಕ ಗವರ್ನರ್ ಅನಿಲ್ ಡೇಸಾ, ವಲಯ ತರಬೇತುದಾರ ಶೈಲೇಂದ್ರ ರಾವ್, ವಲಯ ಸೇನಾನಿಗಳಾದ ಮೆಲ್ವಿನ್ ಡಿಸೋಜ, ಸುರೇಶ್ ನಾಯಕ್, ಜೋನ್ ಸಿಕ್ವೇರ, ವಲಯ ಕಾರ್ಯದರ್ಶಿ ಚಂದ್ರಪೂಜಾರಿ, ಕ್ಲಬ್ ಕಾರ್ಯದರ್ಶಿ ಗುರುರಾಜ್ ಭಟ್, ವಲಯ ನಿರ್ದೇಶಕ ಶೇಖರ ಎಚ್., ಕ್ಲಬ್ ಸೇನಾ ನಿರ್ದೇಶಕ ಮೊಹಮ್ಮದ್ ಶರೀಫ್, ಶುಭ ಹಾರೈಸಿದರು.
ಚಂದ್ರಶೇಖರ ಸಾಲಿಯಾನ್ ನಿರೂಪಿಸಿದರು. ವಲಯ ಕಾರ್ಯದರ್ಶಿ ಚಂದ್ರ ಪೂಜಾರಿ ವಂದಿಸಿದರು.