ವಿಧಾನಪರಿಷತ್ ಸದಸ್ಯರಾದ ಚಿದಾನಂದ ಎಂ ಗೌಡ ರವರ ಪ್ರದೇಶಾಭಿವೃದ್ಧಿ ನಿಧಿಯಿಂದ ನೀಡಿರುವ ಸುಮಾರು ೧೫ ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಹಾ ಪ್ರವೇಶದ್ವಾರ ಶಂಕುಸ್ಥಾಪನೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶಿರಾ
ಶಿರಾ ತಾಲೂಕು ಜುಂಜಪ್ಪನ ಗುಡ್ಡೆಯಲ್ಲಿರುವ ಐತಿಹಾತಿಸಿಕ ಪ್ರಸಿದ್ಧ ಜುಂಜಪ್ಪ ದೇವಸ್ಥಾನಕ್ಕೆ ಶಿರಾ ನಗರದಿಂದ ಹೋಗುವ ನಗರದ ಚಂಗಾವರ ವೃತ್ತದಲ್ಲಿ ವಿಧಾನಪರಿಷತ್ ಸದಸ್ಯರಾದ ಚಿದಾನಂದ ಎಂ ಗೌಡ ರವರ ಪ್ರದೇಶಾಭಿವೃದ್ಧಿ ನಿಧಿಯಿಂದ ನೀಡಿರುವ ಸುಮಾರು ೧೫ ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಹಾ ಪ್ರವೇಶದ್ವಾರ ಶಂಕುಸ್ಥಾಪನೆ ಕಾರ್ಯಕ್ರಮ ೧೨ರ ಭಾನುವಾರ ಬೆಳಿಗ್ಗೆ ೯ ಗಂಟೆಗೆ ನಡೆಯಲಿದೆ ಎಂದು ವನಕಲ್ಲು ಮಲ್ಲೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಶ್ರೀ ಬಸವ ರಮಾನಂದ ಸ್ವಾಮೀಜಿ ಹೇಳಿದರು.ಅವರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ೧೫ನೇ ಶತಮಾನದಲ್ಲಿ ನೆಲಮೂಲ ಸಂಸ್ಕೃತಿ ಹಿನ್ನೆಲೆಯಲ್ಲಿ ಬಂದ ಜುಂಜಪ್ಪ ಅವರು ಸುಮಾರು ೩೦೦೦ ದನಗಳನ್ನು ಸಾಕಿದ್ದರು. ರಾಜ್ಯದ ಸುಮಾರು ೭೩ ಕಡೆಗಳಲ್ಲಿ ದನಗಳನ್ನು ಸಾಕಿದ್ದಾರೆ. ಅಂತಹ ವ್ಯಕ್ತಿಯ ದ್ವಾರಬಾಗಿಲು ನಿರ್ಮಾಣ ಮಾಡಲು ಚಿದಾನಂದ ಗೌಡ ಅವರಿಗೆ ಅನುದಾನ ನೀಡಲು ಮನವಿ ಕೊಟ್ಟಿದ್ದೆವು. ಅದಕ್ಕೆ ಅವರು ಸುಮಾರು ೧೫ ಲಕ್ಷ ರು ಅನುದಾನ ನೀಡಿದ್ದಾರೆ. ಈ ಕಾರ್ಯಕ್ರಮಕ್ಕೆ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ಸಂಸದರಾದ ಗೋವಿಂದ ಕಾರಜೋಳ, ವಿ ಸೋಮಣ್ಣ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು. ಆದ್ದರಿಂದ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಬಿಜೆಪಿ ಮಧುಗಿರಿ ಸಂಘಟನಾತ್ಮಕ ಜಿಲ್ಲಾ ಉಪಾಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ ಮಾತನಾಡಿ ಐತಿಹಾಸಿಕ ಪ್ರಸಿದ್ದ ಜುಂಜಪ್ಪನ ದೇವರಿಗೆ ಎಲ್ಲಾ ಜನಾಂಗದವರು ಭಕ್ತರಿದ್ದಾರೆ. ಆದ್ದರಿಂದ ೧೨ ರಂದು ನಡೆಯುವ ಪ್ರವೇಶ ದ್ವಾರ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದರು.ಈ ಸಂದರ್ಭದಲ್ಲಿ ಶಿರಾ ತಾಲೂಕು ಕಾಡುಗೊಲ್ಲ ಸಂಘದ ಅಧ್ಯಕ್ಷ ಈಶ್ವರಪ್ಪ, ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಮದ್ದಕ್ಕನಹಳ್ಳಿ ಗೊಲ್ಲರಹಟ್ಟಿ ಗೌಡಪ್ಪ, ಪಟೇಲ್ ಕೃಷ್ಣೇಗೌಡ, ಬಿ ಎಂ ಪಿ ಕರಿಯಣ್ಣ, ಪಿ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಅಜ್ಜಣ್ಣ, ದೊಡ್ಡ ಬಾಣಗೆರೆ ರಾಜಣ್ಣ, ಹಾರೋಗೆರೆ ಮಾರಣ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಿಕ್ಕಣ್ಣ, ಬಿಜೆಪಿ ಮುಖಂಡ ರಂಗಸ್ವಾಮಿ, ಕುಂಬಾರಹಳ್ಳಿ ಈರಣ್ಣ, ಗುಮ್ಮನಹಳ್ಳಿ ಈರಣ್ಣ, ಯತ್ತಪ್ಪನಹಟ್ಟಿ ಶಿವಣ್ಣ, ಚಿಕ್ಕ ದಾಸರಹಳ್ಳಿ, ನಾಗರಾಜಪ್ಪ, ಚಂಗಾವರ ರಾಮಕೃಷ್ಣ, ಮಾರನಗೆರೆ ಮಧು, ರೇವಣ್ಣ, ನಾಗಣ್ಣ, ಬೇವಿನಹಳ್ಳಿ ಪೂಜಾರಪ್ಪ, ಮಾಗೋಡು ನಾಗರಾಜು, ಸೇರಿದಂತೆ ಹಲವಾರು ಕಾಡುಗೊಲ್ಲ ಸಮುದಾಯದ ಮುಖಂಡರು ಹಾಜರಿದ್ದರು.