ದೈಹಿಕ, ಮಾನಸಿಕ ಆರೋಗ್ಯ ಉತ್ತಮವಾಗಿಸಲು ಯೋಗ ಸಹಕಾರಿ

| Published : Sep 14 2024, 01:47 AM IST

ಸಾರಾಂಶ

ಯೋಗದಿಂದ ಸಮಾಜದ ಸ್ವಾಸ್ಥ್ಯ ಕಾಪಾಡಬಹುದು. ಹೀಗಾಗಿ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮೈಸೂರುದೈಹಿಕ, ಮಾನಸಿಕ, ಆಧ್ಯಾತ್ಮಿಕ, ಸಾಮಾಜಿಕ, ನೈತಿಕ ಆರೋಗ್ಯ ಉತ್ತಮವಾಗಿಸಲು ಯೋಗ ಸಹಕಾರಿ ಎಂದು ಚೈತನ್ಯ ಯೋಗ ಶಿಕ್ಷಣ ಮತ್ತು ಸಂಶೋಧನಾ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಬಿ.ಪಿ. ಮೂರ್ತಿ ತಿಳಿಸಿದರು.ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ಮತ್ತು ಶಾರದಾ ವಿಲಾಸ ಔಷಧ ಕಾಲೇಜು ಬುಧವಾರ ಏರ್ಪಡಿಸಿದ್ದ ‘ನೆನಪಿನ ಶಕ್ತಿಗಾಗಿ ಯೋಗ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಯೋಗದಿಂದ ಸಮಾಜದ ಸ್ವಾಸ್ಥ್ಯ ಕಾಪಾಡಬಹುದು. ಹೀಗಾಗಿ ಯೋಗವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. ಯೋಗವು ಕೇವಲ ಆಸನಕ್ಕೆ ಮಾತ್ರ ಸೀಮಿತವಾಗದೆ ಪರಿಪೂರ್ಣ ಆರೋಗ್ಯಕ್ಕೂ ನೆರವಾಗುತ್ತದೆ. ಅದು ಜೀವನದ ಅವಿಭಾಜ್ಯ ಪ್ರಕ್ರಿಯೆಯಾಗಿದೆ ಎಂದು ಅವರು ಹೇಳಿದರು.ಜೀವನದಲ್ಲಿ ಧನಾತ್ಮಕ ಚಿಂತನೆ, ಉತ್ತಮ ಆಹಾರ ಪದ್ಧತಿ, ಸರಿಯಾದ ಉಸಿರಾಟ ಪದ್ಧತಿ ಮತ್ತು ಅಗತ್ಯ ವಿಶ್ರಾಂತಿಯ ಕಡೆ ಗಮನ ಹರಿಸಬೇಕು. ಯೋಗವು ಜೀವನಕ್ಕೆ ಪೂರಕವಾದ ಅಂಶವನ್ನು ತಿಳಿಸಿಕೊಡುತ್ತದೆ. ಆದ್ದರಿಂದ ಯೋಗಕ್ಕೆ ವಿದೇಶಿಗರು ಆಕರ್ಷಿತರಾಗಿದ್ದಾರೆ ಎಂದರು.ದೇಹಕ್ಕೆ ಸಿಗಬೇಕಾದ ಸರಿಯಾದ ಆಕ್ಸಿಜನ್ದೊರೆಯದಿದ್ದಾಗ, ದೇಹದಲ್ಲಿ ರಕ್ತ ಪರಿಚಲನೆ ಆಗದಿದ್ದಾಗ ಮರೆವಿನ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಅಗತ್ಯವಾದ ನಾಡಿ ಶೋಧನಾ ಹಾಗೂ ಭ್ರಾಮರಿ ಮುಂತಾದ ಪ್ರಾಣಾಯಾಮ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಇದರೊಂದಿಗೆ ಮುಂದಕ್ಕೆ ಬಾಗಿ ಮಾಡುವ ಆಸನಗಳೂ ರಕ್ತ ಪರಿಚಲನೆಗೆ ಸಹಕಾರಿ ಆಗುತ್ತದೆ ಎಂದು ಅವರು ಹೇಳಿದರು.ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಸ್. ರಾಧಾಕೃಷ್ಣ ರಾಮರಾವ್ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಲಕ್ಷ್ಮೀನಾರಾಯಣ ಶೆಣೈ, ಶಾರದಾ ವಿಲಾಸ ಔಷಧ ಕಾಲೇಜಿನ ಪ್ರಾಂಶುಪಾಲ ಡಾ. ಹನುಮಂತಾಚಾರ್ ಜೋಷಿ, ಪೀಪಲ್ಸ್ ಅಸೋಸಿಯೇಷನ್ ಫಾರ್ ಜೆರಿಯೆಟ್ರಿಕ್ ಎಂಪವರ್ ಮೆಂಟ್ ಕಾರ್ಯದರ್ಶಿ ಡಾ. ಪ್ರತಿಭಾ ಪೆರೈರಾ, ಎಆರ್ಡಿಎಸ್ಐ ಉಪಾಧ್ಯಕ್ಷ ಜಿ.ಎಸ್. ಗಣೇಶ್, ಕಾರ್ಯದರ್ಶಿ ಕೆ.ಆರ್. ಗಣೇಶ್ ರಾವ್ ಮೊದಲಾದವರು ಇದ್ದರು.