ಮಹಿಳೆಯರ ಮುಖಕ್ಕೆ ಸಿಗರೇಟ್‌ ಹೊಗೆ ಬಿಟ್ಟ ನಾಲ್ವರು ವಶ

| Published : Mar 23 2025, 01:36 AM IST

ಸಾರಾಂಶ

ಯುವಕರು ವಾಕಿಂಗ್‌ ಹೋಗಿದ್ದ ಮಹಿಳೆಯರ ಮುಂದೆ ಅಡ್ಡಾ-ದಿಡ್ಡಿ ಬೈಕ್‌ ಓಡಿಸಿದ್ದಲ್ಲದೇ ಸಿಗರೇಟ್ ಸೇದಿ ಮುಖಕ್ಕೆ ಹೊಗೆ ಬಿಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಮಹಿಳೆಯರು ಇಬ್ಬರನ್ನು ಹಿಡಿದು ಥಳಿಸಿದ್ದಾರೆ. ಬಳಿಕ ವಾರ್ಡ್‌ನ ಜನರನ್ನು ಕರೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಗಂಗಾವತಿ:

ಇಲ್ಲಿಯ ವಾರ್ಡ್‌ ನಂ. 3 ಜಯನಗರ ರಸ್ತೆಯ ಎಂಎನ್‌ಎಂ ಶಾಲೆಯ ರಸ್ತೆಯ ಮಾರ್ಗದಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಮಹಿಳೆಯರ ಮುಖಕ್ಕೆ ನಾಲ್ಕು ಯುವಕರು ಸಿಗರೇಟ್ ಹೊಗೆ ಬಿಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು, ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನವಾಜ್, ರಜಾಕ್, ವಡ್ಡು, ರಿಹಾನ್ ಎಂಬ ಯುವಕರು ವಾಕಿಂಗ್‌ ಹೋಗಿದ್ದ ಮಹಿಳೆಯರ ಮುಂದೆ ಅಡ್ಡಾ-ದಿಡ್ಡಿ ಬೈಕ್‌ ಓಡಿಸಿದ್ದಲ್ಲದೇ ಸಿಗರೇಟ್ ಸೇದಿ ಮುಖಕ್ಕೆ ಹೊಗೆ ಬಿಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಮಹಿಳೆಯರು ಇಬ್ಬರನ್ನು ಹಿಡಿದು ಥಳಿಸಿದ್ದಾರೆ. ಬಳಿಕ ವಾರ್ಡ್‌ನ ಜನರನ್ನು ಕರೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಪರಾರಿಯಾಗಿದ್ದ ಇನ್ನಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಸುಮಟೋ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪಿಐ ಪ್ರಕಾಶ ಮಾಳೆ ತಿಳಿಸಿದ್ದಾರೆ.ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಿ:

ಮಹಿಳೆಯರ ಮುಖಕ್ಕೆ ಸಿಗರೇಟ್‌ ಹೊಗೆ ಬಿಟ್ಟ ಯುವಕರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕೆಂದು ಪೊಲೀಸ್ ಉಪ ವಿಭಾಗಾಧಿಕಾರಿಗೆ ಜಯನಗರ ನಿವಾಸಿಗಳು ಮನವಿ ಸಲ್ಲಿಸಿದರು. ನಿತ್ಯ ವಾಕಿಂಗ್‌ ಹೋಗುವ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಮಹಿಳೆಯರು ಭಯಭೀತರಾಗಿದ್ದು ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಂಡು ನಗರದಲ್ಲಿ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಈ ವೇಳೆ ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ, ಜೋಗದ ನಾರಾಯಣಪ್ಪ ನಾಯಕ, ನಗರಸಭೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಸರ್ವೇಶ ಮಾಂತಗೊಂಡ, ಮಹಾಲಿಂಗಪ್ಪ ಬನ್ನಿಕೊಪ್ಪ, ಸುರೇಶ ಗೌರಪ್ಪ, ಟಿ. ಆಂಜನೇಯ, ನಾರಾಯಣವಾವ, ರಾಚಪ್ಪ ಸಿದ್ದಾಪುರ, ಅಮರೇಗೌಡ, ಮಂಜುನಾಥ, ಶಶಿಧರಸ್ವಾಮಿ, ಮಲ್ಲಿಕಾರ್ಜುನಸ್ವಾಮಿ ಹಿರೇಮಠ ಸೇರಿದಂತೆ ನಿವಾಸಿಗಳು ಭಾಗವಹಿಸಿದ್ದರು.