ಸಾರಾಂಶ
ಭದ್ರಾವತಿ: ಗುಜರಿ ವ್ಯಾಪಾರಿ ಅಡ್ಡಗಟ್ಟಿ ಲಕ್ಷಾಂತರ ರು. ಮೌಲ್ಯದ ಗುಜರಿ ವಸ್ತುಗಳನ್ನು ಸುಲಿಗೆ ಮಾಡಿದ್ದ ೪ ಜನರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಆರ್.ಎಂ.ಎಲ್ ನಗರ ನಿವಾಸಿ, ಗುಜರಿ ವ್ಯಾಪಾರಿ ಪಾಂಡುರಂಗ ಎಂಬುವರು ಮಾ.೨೫ರಂದು ತಾಲೂಕಿನ ರಾಮಿನಕೊಪ್ಪ ಕ್ರಾಸ್ ಹತ್ತಿರ ಓಮ್ನಿ ಕಾರನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಬೆಳಗಿನ ಜಾವ ೬.೩೫ರ ಸಮಯದಲ್ಲಿ ಯಾರೋ ೪ ಜನರು ೨ ಮೋಟಾರು ಬೈಕ್ಗಳಲ್ಲಿ ಬಂದು ಅಡ್ಡ ಗಟ್ಟಿ ತಡೆದು ೩.೫೦ ಲಕ್ಷ ರು. ಮೌಲ್ಯದ ೯೦೦ ಕೆ.ಜಿ. ತೂಕದ ಹಿತ್ತಾಳೆ ಮತ್ತು ತಾಮ್ರದ ಗುಜರಿ ವಸ್ತುಗಳನ್ನು ಸುಲಿಗೆ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಸುಲಿಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ ಹಾಗೂ ಕಾರ್ಯಪ್ಪರವರು ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ನಿರೀಕ್ಷಕ ಜಗದೀಶ್ ಸಿ ಹಂಚಿನಾಳ್ ನೇತೃತ್ವದಲ್ಲಿ ಸಿಬ್ಬಂದಿ ಶ್ರೀಶೈಲಕೆಂಚಣ್ಣವರ, ಚಂದ್ರಶೇಖರ್, ದಿವಾಕರ್ ರಾವ್, ಮಂಜುನಾಥ್, ಈರಯ್ಯ, ರೇವಣ್ಣಸಿದ್ದಪ್ಪಗೌಡ, ವಿಜಯಕುಮಾರ ಡಿ.ಸಿ ಮತ್ತು ಸಂತೋಷಕುಮಾರ್ ಅವರನ್ನೊಳಗೊಂಡ ವಿಶೇಷ ತಂಡ ರಚಿಸಿದ್ದರು.
ಕಾರ್ಯಾಚರಣೆ ಕೈಗೊಂಡಿದ್ದ ತಂಡ ನಗರದ ಹೊಸಮನೆ ಭೋವಿ ಕಾಲೋನಿ ನಿವಾಸಿ, ಗುಜರಿ ವ್ಯಾಪಾರಿ ಕವಿರಾಜ್ (೨೧), ಶಿವಮೊಗ್ಗ ತುಂಗಾನಗರ ಗೋಪಾಲ ಎಕ್ಸ್ಟೆನ್ಸನ್ ನಿವಾಸಿ, ಜಿಮ್ ಟ್ರೈನರ್ ಮುಬಾರಕ್(೨೪), ಬಾರಂದೂರು ಗ್ರಾಮದ ನಿವಾಸಿ ಅಜಿತ್ @ ಘಟ್ಟ(೧೯) ಮತ್ತು ಕಬಳಿಕಟ್ಟೆ ನಿವಾಸಿ, ಕೃಷಿಕ ಮಂಜುನಾಥ @ ಮಂಜು(೨೧) ಎಂಬುವರನ್ನು ಬಂಧಿಸಲಾಗಿದೆ.ಬಂಧಿತರಿಂದ ಸುಲಿಗೆ ಮಾಡಿದ್ದ ೭೦೦ ಕೆ.ಜಿ ತೂಕದ ಹಿತ್ತಾಳೆ ಮತ್ತು ತಾಮ್ರದ ಗುಜರಿ ವಸ್ತು, ೩ಲಕ್ಷ ರು. ಮೌಲ್ಯದ ಒಂದು ಟಾಟಾ ಎಸಿಇ ವಾಹನ ಮತ್ತು ಸುಮಾರು ೮೫ ಸಾವಿರ ರು. ಮೌಲ್ಯದ ಒಂದು ಪಲ್ಸರ್ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು ೭.೩೫ ಲಕ್ಷ ರು. ಮೌಲ್ಯದ ಸ್ವತ್ತು ವಶಪಡಿಸಿಗೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ತಂಡವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಭಿನಂದಿಸಿದೆ.
---ಡಿ೧೭-ಬಿಡಿವಿಟಿ೩ಗುಜರಿ ವ್ಯಾಪಾರಿ ಅಡ್ಡಗಟ್ಟಿ ಲಕ್ಷಾಂತರ ರು. ಮೌಲ್ಯದ ಗುಜರಿ ವಸ್ತುಗಳನ್ನು ಸುಲಿಗೆ ಮಾಡಿದ್ದ ೪ ಜನರನ್ನು ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.