ಸಾರಾಂಶ
ಹಾಸನ : ಕಳೆದ ನಾಲ್ಕು ದಿನಗಳಿಂದ ನಡೆಸಲಾಗುತ್ತಿರುವ ಮುಷ್ಕರಕ್ಕೆ ಮುಖ್ಯಮಂತ್ರಿಗಳು ಹಂತಹಂತವಾಗಿ ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪೌರಕಾರ್ಮಿಕರು ಶನಿವಾರ ನಗರಸಭೆ ಆವರಣದಲ್ಲಿ ತಮ್ಮ ಹೋರಾಟಕ್ಕೆ ಅಂತ್ಯ ಹಾಡಿದರು. ಬ್ಯಾಂಡ್ ಸೆಟ್ಟಿಗೆ ನೃತ್ಯ ಮಾಡಿ, ಪಟಾಕಿ ಸಿಡಿಸಿ, ಸಿಹಿ ಹಂಚುವುದರ ಮೂಲಕ ಸಂಭ್ರಮಿಸಿದರು.
ಮಹಾ ನಗರ ಪಾಲಿಕೆ ಅಧ್ಯಕ್ಷ ಎಂ. ಚಂದ್ರೇಗೌಡ ಮಾತನಾಡಿ, ಕಳೆದ ಮಂಗಳವಾರದಿಂದ ನಮ್ಮ ಪೌರಕಾರ್ಮಿಕರು ಮುಷ್ಕರದಲ್ಲಿ ತೊಡಗಿದ್ದು, ಜ್ಯೋತಿ ಸಂಜೀವಿನಿ, ಕೆಜಿಐಡಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯಗಳನ್ನು ನೀಡಬೇಕು. ಎಲ್ಲಾ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿ ಮುಷ್ಕರ ಮಾಡುತ್ತಿದ್ದರು. ತಮ್ಮ ನ್ಯಾಯಯುತವಾದ ಬೇಡಿಕೆಗೆ ಸರಕಾರ ಸ್ಪಂದಿಸಬೇಕೆಂದು ರಾಜ್ಯ ಎಲ್ಲಾ ಪೌರಕಾರ್ಮಿಕರು ಒಗ್ಗಟ್ಟಾಗಿ ಹೋರಾಟ ಮಾಡಿದ ಪರಿಣಾಮ ಜಯ ಸಿಕ್ಕಿದೆ ಎಂದರು.
ಪೌರಕಾರ್ಮಿಕರ ಎಲ್ಲಾ ಸಮಸ್ಯೆಗಳನ್ನು ಮುಖ್ಯಮಂತ್ರಿಗಳು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಮುಷ್ಕರ ನಿರತ ಪೌರಕಾರ್ಮಿಕರು ತಮ್ಮ ಮುಷ್ಕರವನ್ನು ಹಿಂಪಡೆದಿದ್ದು, ಶನಿವಾರದಿಂದಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ಮುಷ್ಕರಕ್ಕೆ ಬೆಂಬಲ ಕೊಟ್ಟ ಶಾಸಕರು, ಮಾಜಿ ಶಾಸಕರು, ಸಂಸದರು ಹಾಗೂ ಮಂತ್ರಿಗಳು ಮತ್ತು ನಗರಸಭೆಯ ಎಲ್ಲಾ ಸದಸ್ಯರಿಗೂ, ಹಿರಿಯ ನಾಗರಿಕರು ಬೆಂಬಲ ಸೂಚಿಸಿಸುವುದರ ಮೂಲಕ ಇವರ ಬೇಡಿಕೆ ಈಡೇರಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಶಾಖಾ ಅಧ್ಯಕ್ಷ ಎನ್.ಆರ್. ವೆಂಕಟೇಶ್ ಮಾತನಾಡಿ, ಮೇ೨೭ ರಿಂದ ಪೌರಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ನಮ್ಮ ಬೇಡಿಕೆ ಈಡೇರಿಸಲು ಮುಷ್ಕರ ಪ್ರಾರಂಬಿಸಿದ್ದೆವು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಶುಕ್ರವಾರ ರಾತ್ರಿ ಸಭೆ ಕರೆದು ಚರ್ಚಿಸಿ ಎಲ್ಲಾ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸುವುದಾಗಿ ನಮಗೆ ಭರವಸೆ ನೀಡಿದ್ದಾರೆ ಎಂದರು.
ಈ ಮಾತಿನಿಂದ ನಮಗೆ ಸಂತೋಷವಾಗಿದ್ದು, ನಮ್ಮ ಮುಷ್ಕರವನ್ನು ವಾಪಸ್ ತೆಗೆದುಕೊಂಡು ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದೇವೆ ಎಂದು ಹೇಳಿದರು.
ಮಹಾ ನಗರ ಪಾಲಿಕೆ ಪೌರಾಯುಕ್ತ ರಮೇಶ್, ನಗರಸಭೆ ಸದಸ್ಯ ಮಂಜುನಾಥ್, ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ. ಯೋಗೇಶ್, ಉಪಾಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ರಂಜನ್, ಖಜಾಂಚಿ ಎಚ್.ಜಿ. ರಾಮು, ಎಸ್.ಡಿ. ಚಂದ್ರು, ಇತರರು ಉಪಸ್ಥಿತರಿದ್ದರು.