ಕೇಂದ್ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ನಾಲ್ಕು ಲಕ್ಷ ರು. ಕೋಟಿ ಕಡಿತ

| Published : Feb 02 2025, 11:45 PM IST

ಸಾರಾಂಶ

ಕೇಂದ್ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ₹4 ಲಕ್ಷ ಕೋಟಿ ಕಡಿತವಾಗಿದೆ. ಅಲ್ಲದೇ ರೈತರಿಗೆ ಮರೀಚಿಕೆಯಾದ ಯೋಜನೆಗಳನ್ನು ನೀಡಲಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಕೇಂದ್ರ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ₹4 ಲಕ್ಷ ಕೋಟಿ ಕಡಿತವಾಗಿದೆ. ಅಲ್ಲದೇ ರೈತರಿಗೆ ಮರೀಚಿಕೆಯಾದ ಯೋಜನೆಗಳನ್ನು ನೀಡಲಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ರೈತರ ನೈಜ ಸಮಸ್ಯೆಗೆ ಪರಿಹಾರ ಸೂಚಿಸದೆ ಬಜೆಟ್ ಮಂಡನೆಯಲ್ಲಿ ಅನ್ನದಾತನ ಗುಣಗಾನ ಮಾಡಿ ಕೃಷಿ ಕ್ಷೇತ್ರದ ಕಣ್ಣಿಗೆ ಮಣ್ಣೆರೆಚುವ ಕಾರ್ಯ ಮಾಡಿದ್ದಾರೆ ಎಂದು ಆರೋಪಿಸಿದರು.

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಮಾಡುವ ಬಗ್ಗೆ, ಕೃಷಿ ಸಾಲ ನೀತಿ ತಿದ್ದುಪಡಿ, ಬೆಳೆ ವಿಮೆ ಪದ್ದತಿ ಬದಲಾವಣೆ, ಕಬ್ಬು ಬೆಳೆಗಾರರಿಗೆ ಎಫ್‌ಆರ್‌ಪಿ ದರ ಹೊಲದಲ್ಲಿನ ದರ ಎಂದು ನಿಗದಿಪಡಿಸುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಒಂದು ಪರ್ಸೆಂಟ್‌ನಷ್ಟು ರೈತರಿಗೆ ಉಪಯೋಗವಿಲ್ಲದ ಕಿಸಾನ್ ಕಾರ್ಡ್ ಕೊಡುತ್ತೇವೆ ಎನ್ನುವುದು ರೈತರ ಕಣ್ಣಿಗೆ ಮಣ್ಣೆರೆಚುವ ತಂತ್ರಗಾರಿಕೆಯಾಗಿದೆ ಎಂದರು.

ಶುಂಠಿ ಬೆಲೆ ಕುಸಿತ ಕಾರಣ ಎಂಐಎಸ್ ಯೋಜನೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ರೈತರ ಒತ್ತಾಯಕ್ಕೆ ಕನಿಷ್ಠ 7000 ರು.ಗೆ ಖರೀದಿಸಲು ವರದಿ ಸಲ್ಲಿಸಿದೆ ಸದ್ಯದಲ್ಲಿಯೇ ಖರೀದಿ ಕೇಂದ್ರಗಳ ಮೂಲಕ ಕನಿಷ್ಠ ಬೆಂಬಲ ಬೆಲೆಗೆ ಖರೀದಿ ಆರಂಭವಾಗುತ್ತದೆ. ರೈತರು ದಲ್ಲಾಳಿಗಳ ಶೋಷಣೆಗೆ ಬಲಿಯಾಗಿ ಶುಂಠಿ ಮಾರಾಟ ಮಾಡಬಾರದು. ಈ ಬಗ್ಗೆ ಚಾಮರಾಜನಗರ. ಮೈಸೂರು. ಸಂಸದರು ದೆಹಲಿಯಲ್ಲಿ ಕೂಡಲೇ ವರದಿ ಅನುಮೋದನೆ ಮಾಡಿಸಿ ರೈತರ ಹಿತ ಕಾಯಬೇಕು ಎಂದರು.

ಆಂಧ್ರಪ್ರದೇಶದಲ್ಲಿ ಹಿಂದಿನ ಜಗನ್ ಮೋಹನ್ ರೆಡ್ಡಿ ಸರ್ಕಾರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾಯಿದೆ ಮಸೂದೆ ಅನುಮೋದನೆ ನೀಡಲಾಗಿತ್ತು. ಆದರೆ ಸರ್ಕಾರ ಬದಲಾದ ಪರಿಸ್ಥಿತಿಯಲ್ಲಿ ಜಾರಿ ಮಾಡಲಿಲ್ಲ. ರಾಜ್ಯ ಸರ್ಕಾರ ರೈತರ ಹಿತ ಕಾಯುವುದಾದರೆ ನಾಟಕವಾಡದೇ ಅದೇ ಕೆಲಸ ರಾಜ್ಯದಲ್ಲಿ ಮಾಡಲಿ ಎಂದು ಒತ್ತಾಯಿಸಿದರು.

ಹೈನುಗಾರಿಕೆ ನಡೆಸುವ ರೈತರ ಹಾಲಿನ ಪ್ರೋತ್ಸಾಹ ಧನ ಲೀಟರಿಗೆ 5 ರು. 8 ತಿಂಗಳಿಂದ ಬಿಡುಗಡೆ ಮಾಡಿಲ್ಲ. ಮಾದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟದ ಸಭೆ ನಡೆಸುವ ಮೊದಲು ಹಣ ಬಿಡುಗಡೆ ಮಾಡಿ ನಂತರ ಸಭೆ ನಡೆಸಲಿ ಇಲ್ಲದಿದ್ದರೆ ಸಂಘಟನೆ ವತಿಯಿಂದ ಸಚಿವ ಸಂಪುಟಕ್ಕೆ ಕಪ್ಪುಬಾವುಟ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆರಿಶಿನ ಬೆಳೆಗಾರರ ಸಂಘದ ನಾಗಾರ್ಜುನ್, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಕಹಳ್ಳಿ ಮಹದೇವಸ್ವಾಮಿ, ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಕಾರ್ಯಧ್ಯಕ್ಷ ಉಡಿಗಾಲ ರೇವಣ್ಣ, ಸತೀಶ್, ಶಿವಕುಮಾರ ಇದ್ದರು.