ಸಾರಾಂಶ
ಭಟ್ಕಳ:
ಮುರುಡೇಶ್ವರ ಸಮುದ್ರದಲ್ಲಿ ಈಜುತ್ತಿದ್ದ ಸಂದರ್ಭದಲ್ಲಿ ಅಪಾಯಕ್ಕೆ ಸಿಲುಕಿದ ನಾಲ್ವರು ಪ್ರವಾಸಿಗರನ್ನು ಜೀವ ರಕ್ಷಕ ದಳ, ಕರಾವಳಿ ಕಾವಲು ಪಡೆ, ಕರಾವಳಿ ನಿಯಂತ್ರಣ ದಳ ಹಾಗೂ ಸ್ಥಳೀಯ ಪೊಲೀಸರು ಮತ್ತು ಸಾರ್ವಜನಿಕರು ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಶನಿವಾರ ಸಂಭವಿಸಿದೆ.ಪ್ರವಾಸಕ್ಕೆಂದು ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಬಂದಿದ್ದ ನಾಲ್ವರು ಯುವಕರು ಸಮುದ್ರದಲ್ಲಿ ಈಜುತ್ತಾ ದಡದಿಂದ ಸ್ವಲ್ಪ ದೂರಕ್ಕೆ ಹೋಗಿದ್ದರು. ಅಲೆಗಳ ಅಬ್ಬರಕ್ಕೆ ಈಜಲು ಸಾಧ್ಯವಾಗದೇ ಮುಳುಗುತ್ತಿರುವುದನ್ನು ಕಂಡು ಜೀವರಕ್ಷಕ ದಳದ ರಾಜೇಶ್, ಮುದಾಸಿರ್, ಸಂತೋಷ, ಕರಾವಳಿ ಕಾವಲು ಪಡೆಯ ದರ್ಶನ, ಕರಾವಳಿ ನಿಯಂತ್ರಣ ದಳದ ನಾಗರಾಜ್, ಹೋಮ್ ಗಾರ್ಡ್ ಸುಧಾಕರ ಹಾಗೂ ಸ್ಥಳೀಯ ಯುವಕರು ನೀರಿಗೆ ಧುಮುಕಿ ಹೋರಾಟ ನಡೆಸಿ ನಾಲ್ವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದರು. ಆಳಕ್ಕೆ ಇಳಿದು ಅಬ್ಬರದ ಅಲೆಗಳ ನಡುವೆಯೇ ಯುವಕರನ್ನು ರಕ್ಷಣೆ ಮಾಡಲು ಯಶಸ್ವಿಯಾಗಿದ್ದಾರೆ. ರಕ್ಷಣೆಗೊಳಗಾದವರನ್ನು ಬೆಂಗಳೂರಿನ ವೇಣು (೧೯), ವಿನಯ ರಮೇಶ್ ಹಾಗೂ ಅವರಿಬ್ಬರ ಸ್ನೇಹಿತರು ಎಂದು ಗುರುತಿಸಲಾಗಿದೆ. ಘಟನೆ ಕುರಿತು ಮುರುಡೇಶ್ವರ ಠಾಣಾ ಪಿಎಸ್ಐ ಹಣಮಂತ ಬಿರಾದಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಅಕ್ರಮ ಮದ್ಯ ಮಾರಾಟ: ಓರ್ವನ ಬಂಧನ
ಭಟ್ಕಳ ತಾಲೂಕಿನ ಅಳ್ವೇಕೋಡಿಯ ಬೀಡಾ ಅಂಗಡಿಯಲ್ಲಿ ಶುಕ್ರವಾರ ಸಂಜೆ ಅಕ್ರಮ ಮದ್ಯ ಮಾರುತ್ತಿದ್ದ ವೇಳೆ ದಾಳಿ ನಡೆಸಿದ ಗ್ರಾಮೀಣ ಠಾಣಾ ಪೊಲೀಸರು ಓರ್ವನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಶಿರಾಲಿ ಅಳ್ವೇಕೋಡಿ ನಿವಾಸಿ ಜಟ್ಟಾ ದುರ್ಗಪ್ಪ ನಾಯ್ಕ (61) ಆರೋಪಿ. ದಾಳಿ ವೇಳೆ ಸ್ಥಳದಲ್ಲಿದ್ದ ಅಕ್ರಮ ಮದ್ಯದ ಬಾಟಲಿ ವಶಪಡಿಸಿಕೊಳ್ಳಲಾಗಿದೆ.ಬೈಕ್-ಬುಲೆರೋ ಪಿಕ್ ಅಪ್ ಡಿಕ್ಕಿ; ಇಬ್ಬರಿಗೆ ಗಾಯಶಿರಸಿ ತಾಲೂಕಿನ ಬನವಾಸಿ- ಸೊರಬಾ ರಸ್ತೆ ಅಯ್ಯಪ್ಪನಗರ ಕ್ರಾಸ್ ಬೈಕ್ ಹಾಗೂ ಬುಲೆರೋ ಪಿಕ್ಅಪ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸವಾರರು ಗಂಭೀರ ಗಾಯಗೊಂಡಿದ್ದಾರೆ.ಹರಿಹರ ಮಜ್ಜಿಗೆ ಲೇ ಔಟ್ ತೇಜಸ್ ಪರಮೇಶ್ವರಪ್ಪ ಬಣಕಾರ (21) ಹಾಗೂ ರಾಣಿಬೆನ್ನೂರಿನ ಹುಲಿಕಟ್ಟಿಯ ನಾಗರಾಜ ಚಂದ್ರಗೌಡ ದ್ಯಾವನಗೌಡ (21) ಗಾಯಗೊಂಡವರು. ಆರೋಪಿತ ಚಾಲಕ ತಾಲೂಕಿನ ಅಜ್ಜರಣಿಯ ಫೈಜ್ಅಹಮ್ಮದ್ ಅಬ್ದುಲ್ರಶೀದ್ ಸುಗಂಧಿಕರ್ ತನ್ನ ಬುಲೆರೋ ಪಿಕ್ಅಪ್ನ್ನು ಬನವಾಸಿ ಅಯ್ಯಪ್ಪನಗರ ಕ್ರಾಸ್ ಬಳಿ ಅತಿವೇಗದಿಂದ ಚಲಾಯಿಸಿ, ರಾಣಿಬೆನ್ನೂರಿನಿಂದ ಬನವಾಸಿ ಮಾರ್ಗವಾಗಿ ಶಿರಸಿಗೆ ತೆರಳುತ್ತಿದ್ದ ಬೈಕ್ಗೆ ಡಿಕ್ಕಿಪಡಿಸಿದ್ದಾನೆ. ಅಪಘಾತದ ರಭಸಕ್ಕೆ ಬೈಕ್ ಸವಾರರಿಬ್ಬರು ರಸ್ತೆಯ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಅಪಘಾತಕ್ಕೆ ಕಾರಣನಾದ ಬುಲೆರೋ ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.