ಸಂಗೀತ, ಸಾಹಿತ್ಯ, ಭರತನಾಟ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಯಲ್ಲಿ ನಾವು ತಂದೆ- ತಾಯಿ, ಗುರು- ಹಿರಿಯರನ್ನು ಗೌರವಿಸಿ, ಉತ್ತಮ ಸಂಸ್ಕಾರವನ್ನು ಪಡೆದು ಮುನ್ನಡೆಯೋಣ.
ಹಾಸನ: ಸನಾತನ ಧರ್ಮ, ಸಂಸ್ಕೃತಿಯ ಪ್ರತೀಕವಾದ ಧಾರ್ಮಿಕ ಕೇಂದ್ರಗಳಲ್ಲಿ ಭರತನಾಟ್ಯಗಳು ಹಾಗೂ ಸಂಗೀತ, ಹಾಡುಗಾರಿಕೆ ಕೇಳುವುದರಿಂದ ಮನುಷ್ಯನಿಗೆ ಶಾಂತಿ, ನೆಮ್ಮದಿ, ಉಲ್ಲಾಸ ಸಿಗುತ್ತದೆ ಎಂದು ಶ್ರೀರಾಮ ಸೇವಾ ಸಮಿತಿ ಸದಸ್ಯ, ವಕೀಲರಾದ ಶ್ರೀವತ್ಸಲ ಅವರು ತಿಳಿಸಿದರು. ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯದ ಸಭಾಂಗಣದಲ್ಲಿ ನಡೆದ 4ನೇ ದಿನದ ಭರತನಾಟ್ಯ ಕಾರ್ಯಕ್ರಮದಲ್ಲಿ ಬೆಂಗಳೂರು ಆರೋಹಷ ನೃತ್ಯ ಭರತನಾಟ್ಯ ಶಾಲೆಯ ವಿ. ಭಾರ್ಗವಿ ಹಾಗೂ ತಂಡದವರಿಂದ ಭರತನಾಟ್ಯ ನಡೆಯಿತು. ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಗೀತ, ಸಾಹಿತ್ಯ, ಭರತನಾಟ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಯಲ್ಲಿ ನಾವು ತಂದೆ- ತಾಯಿ, ಗುರು- ಹಿರಿಯರನ್ನು ಗೌರವಿಸಿ, ಉತ್ತಮ ಸಂಸ್ಕಾರವನ್ನು ಪಡೆದು ಮುನ್ನಡೆಯೋಣ ಎಂದು ತಿಳಿಸಿದರು. ಸೇವಾಕರ್ತರಾದ ಬೆಂಗಳೂರು ಶೇಷಾದ್ರೀಪುರಂ, ದಿ. ಎಚ್.ಟಿ. ವರದರಾಜನ್ ಕುಟುಂಬ, ಅನೇಕಲ್ ಶ್ರೀ ಮಂಜುನಾಥಶಾಸ್ತ್ರಿ, ಎಂ.ವಿ. ನಾಗರಾಜ್ ಮುಂತಾದವರು ಬಂದಂಥ ಕಲಾಭಿಮಾನಿಗಳಿಗೆ ಹಾಗೂ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದರು. ದೇವಾಲಯದ ಮುಖ್ಯ ಅರ್ಚಕ ಶ್ರೀನಿವಾಸ್ ಉತ್ಸವ ಹಾಗೂ ಪೂಜಾ ಕೈಂಕರ್ಯ ನಡೆಸಿಕೊಟ್ಟರು.