ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ತಾನು ಸೇವೆ ಸಲ್ಲಿಸುತ್ತಿದ್ದ ಬ್ಯಾಂಕ್ಗೆ ವಂಚಿಸಿದ ಪ್ರಕರಣವೊಂದರಲ್ಲಿ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಹಾಗೂ ಬಟ್ಟೆ ಅಂಗಡಿ ಮಾಲೀಕನಿಗೆ ದಂಡದ ಜತೆಗೆ ಶಿಕ್ಷೆಯನ್ನು ಪ್ರಕಟಿಸಿ ಇಲ್ಲಿಯ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ಮಾಡಿದೆ.2007-08ರಲ್ಲಿ ನಡೆದ ವಂಚನೆ ಪ್ರಕರಣ ಇದಾಗಿದ್ದು, ಎಸ್ಬಿಎಂ ಇಳಕಲ್ ಶಾಖೆಯ ಬ್ಯಾಂಕ್ ಸಹಾಯಕ ವ್ಯವಸ್ಥಾಪಕರಾಗಿದ್ದ ಗುರುರಾಜ ರಾವ್ ಅವರು ಹೆಸ್ಕಾಂ ಮತ್ತು ಗಣಿ ಇಲಾಖೆಯಿಂದ ಬ್ಯಾಂಕರ್ಸ್ ಚೆಕ್ ಮೂಲಕ ಬಂದಿದ್ದ ₹2.70 ಕೋಟಿ ಹಣವನ್ನು ಆಯಾ ಇಲಾಖೆ ಖಾತೆಗಳಿಗೆ ವರ್ಗಾಯಿಸದೇ ರಾಮಕೃಷ್ಣ ಎಕ್ಸಪೋರ್ಟ್ ಮಾಲೀಕ ಪ್ರವೀಣ ಕಾಟ್ವಾ ಅವರ ಖಾತೆಗೆ ವರ್ಗಾಯಿಸಿ ವಂಚಿಸಿದ್ದರು. ಗಣಿ ಮತ್ತು ಹೆಸ್ಕಾಂ ಖಾತೆಗಳಿಗೆ ಹಣ ಜಮೆಯಾಗದೇ ಇದ್ದಾಗ ಈ ಕುರಿತು ಇಲಾಖೆಗಳು ದೂರು ದಾಖಲಿಸಿದ್ದವು. ಈ ಕುರಿತು ಆಗ ಬ್ಯಾಂಕ್ ಆಂತರಿಕ ತನಿಖೆ ನಡೆಸಿದ ವೇಳೆ ಗುರುರಾಜ್ ರಾವ್ ವಂಚಿಸಿರುವುದು ಬೆಳೆಕಿಗೆ ಬಂದಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿದ್ದ ಸಿಬಿಐ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು. ಗುರುರಾಜ್ ರಾವ್ ಹಾಗೂ ಪ್ರವೀಣ ಕಾಟ್ವಾ ಅವರು ವಂಚಿಸಿದ್ದು ಸಾಕ್ಷಿಗಳಿಂದ ಸಾಬೀತಾಗಿದ್ದು, ನ್ಯಾಯಾಧೀಶರಾದ ಎನ್. ಸುಬ್ರಹ್ಮಣ್ಯ ಅವರು ಆರೋಪಿಗಳಿಗೆ ವಂಚಿಸಿದ ಹಣದ ಜೊತೆ ₹1.20 ಲಕ್ಷ ದಂಡ ಹಾಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿದ್ದಾರೆ. ಸಿಬಿಐ ಪರವಾಗಿ ವಕೀಲ ಶಿವಾನಂದ ಪೆರ್ಲ ವಾದ ಮಂಡಿಸಿದ್ದರು.