ಸಾರಾಂಶ
ಕೊಳ್ಳೇಗಾಲ ಟೌನ್ ಬಳಕೆದಾರರ ಸಂಘದ ಕಾರ್ಯದರ್ಶಿ ಸುಂದರರಾಜು, ಗ್ರಾಹಕರು ದೂರು ಸಲ್ಲಿಸಿರುವ ಪ್ರತಿ ಮತ್ತು ಹಿರಿಯ ಅಧಿಕಾರಿಗೆ ದೂರು ಸಲ್ಲಿಸಿರುವ ಪ್ರತಿಯನ್ನು ಪ್ರದರ್ಶಿಸಿದರು.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಚೆಸ್ಕಾಂ ಇಲಾಖೆಯ ಮೀಟರ್ ರೀಡರ್ ಶಿವಕುಮಾರ್ ಎಂಬಾತ ಹಲವು ಗ್ರಾಹಕರಿಂದ ಬಿಲ್ ಪಾವತಿಸುವುದಾಗಿ ಹಣ ಪಡೆದು ಇಲಾಖೆಗೆ ಹಣ ಪಾವತಿಸದೆ, ಇತ್ತ ಗ್ರಾಹಕರಿಗೂ ಹಣ ನೀಡದೆ ವಂಚಿಸುತ್ತಿದ್ದು ಈತನ ವಿರುದ್ಧ ಕ್ರಮಕೈಗೊಳ್ಳುವಂತೆ ವಿದ್ಯುತ್ ಬಳಕೆದಾರರ ಸಂಘದ ಕಾರ್ಯದರ್ಶಿ ಸುಂದರರಾಜು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಕೊಳ್ಳೇಗಾಲ ಚೆಸ್ಕಾಂ ನೌಕರ ಶಿವಕುಮಾರ್ ಅವರು ಬಳಕೆದಾರರಾದ ಕೆ2ಡಿ 8577ನ ಗ್ರಾಹಕರಾದ ಲೋಕಮ್ಮ ಅವರಿಂದ ವಿದ್ಯುತ್ ಶುಲ್ಕ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿ ಅವರಿಂದ 3500ರು.ಗಳನ್ನು ಪಡೆದು ಇತ್ತ ಚೆಸ್ಕಾಂ ಇಲಾಖೆಗೂ ಪಾವತಿಸಿಲ್ಲ, 3 ತಿಂಗಳಾದರೂ ಗ್ರಾಹಕರಿಗೂ ಹಣ ವಾಪಸ್ಸು ನೀಡಿಲ್ಲ, ಅದೇ ರೀತಿಯಲ್ಲಿ ಕೆಪಿ970 ಗ್ರಾಹಕರಾದ ಲಿಂಗರಾಜಾಚಾರಿ ಅವರಿಂದ ₹2 ಸಾವಿರ ಪಡೆದು 3 ತಿಂಗಳಾಗಿದ್ದರೂ ರಶೀತಿ ನೀಡದೆ ವಂಚಿಸಲಾಗಿದೆ. ಪಟ್ಟಣದ ಚೌಡೇಶ್ವರಿ ಶಾಲಾ ರಸ್ತೆಯ ಮಧು ಅನ್ನುವವರಿಂದ ಎರಡು ಎಚ್.ಪಿ ಹೆಚ್ಚುವರಿ ವಿದ್ಯುತ್ ಸಂಪರ್ಕ ನೀಡುವುದಾಗಿ 7600 ರು. ಪಡೆದಿದ್ದಾರೆ. 4 ತಿಂಗಳಾಗಿದ್ದರೂ ಅವರಿಗೆ ರಶೀತಿ ನೀಡಿಲ್ಲ, ವಿದ್ಯುತ್ ಸಂಪರ್ಕವನ್ನು ಕೊಡಿಸಿಲ್ಲ, ಗ್ರಾಹಕರೆಲ್ಲ ಕರೆ ಮಾಡಿದರೆ ಹಣ ಕಟ್ಟುತ್ತೆನೆ, ಸ್ವಲ್ಪ ಇರಿ ಎಂದು ಕರೆ ಸ್ಥಗಿತಗೊಳಿಸುತ್ತಿರುವ ನೌಕರ ಶಿವಕುಮಾರ್ ವಿರುದ್ಧ ಬೇಸತ್ತು 3 ಮಂದಿ ಗ್ರಾಹಕರು ವಿದ್ಯುತ್ ಬಳಕೆದಾರರ ಸಂಘಕ್ಕೆ ಲಿಖಿತ ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆ ಹಿರಿಯ ಅಧಿಕಾರಿಗಳಿಗೆ ನೌಕರನ ವಿರುದ್ಧ ದೂರು ಸಲ್ಲಿಸಲಾಗಿದೆ ಎಂದು ಸುಂದರರಾಜು ತಿಳಿಸಿದ್ದಾರೆ. ಗ್ರಾಹಕರು ಯಾವುದೆ ಕಾರಣಕ್ಕೂ ನೌಕರ ಶಿವಕುಮಾರ್ನಿಗೆ ಹಣ ನೀಡಬಾರದು, ಒಂದು ವೇಳೆ ಹಣ ನೀಡಿ ಮೋಸ ಹೋಗಿದ್ದರೆ ಸಂಘಕ್ಕೆ ದೂರು ನೀಡಿದರೆ ಮುಂದಿನ ಕ್ರಮಕ್ಕೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗುವುದು, ಈತನು ಹಲವು ಗ್ರಾಹಕರಿಗೆ ವಂಚಿಸಿರುವ ಬಗ್ಗೆ ಮಾಹಿತಿ ಇದ್ದು, ಹಿರಿಯ ಅಧಿಕಾರಿಗಳು ಹಣ ಪಾವತಿಸಿದ್ದರೂ ಅವರಿಗೆ ರಶೀತಿ ನೀಡದೆ ವಂಚಿಸಿರುವ ನೌಕರನ ವಿರುದ್ಧ ಕ್ರಮಕೈಗೊಂಡು ನೊಂದ ಗ್ರಾಹಕರಿಗೆ ನ್ಯಾಯ ಸಲ್ಲಿಸಬೇಕು, ಮುಂದೆ ಈ ರೀತಿ ಆಗದಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.