ಕಾರ್ಕಳ: ವಯಸ್ಸಾದಂತೆ ಮೂಳೆಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಗತ್ಯ. ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಸಮೃದ್ಧ ಆಹಾರ ಸೇವನೆ, ನಿಯಮಿತ ವ್ಯಾಯಾಮ ಹಾಗೂ ಪ್ರತಿದಿನ ಬೆಳಗಿನ ಎಳೆ ಬಿಸಿಲಿನಲ್ಲಿ ನಡಿಗೆಯನ್ನು ರೂಢಿಸಿಕೊಳ್ಳುವುದರಿಂದ ಮೂಳೆಗಳ ಸಾಂದ್ರತೆಯನ್ನು ಕಾಪಾಡಿಕೊಳ್ಳಬಹುದು ಎಂದು ಮೂಳೆ ತಜ್ಞ ಡಾ. ರಾಮದಾಸ್ ಶೆಣೈ ಹೇಳಿದರು.

ಅವರು ಕಾರ್ಕಳದ ತೆಳ್ಳಾರು ರಸ್ತೆಯಲ್ಲಿರುವ ನಿಟ್ಟೆ ಗಜ್ರಿಯಾ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಆಯೋಜಿಸಿದ್ದ ಉಚಿತ ಮೂಳೆ ಸಾಂದ್ರತೆ (Bone Mineral Density–BMD) ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸಚ್ಚಿದಾನಂದ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಶಿಬಿರದಲ್ಲಿ ಆಗಮಿಸಿದ್ದ 90 ಹಿರಿಯ ನಾಗರಿಕರಿಗೆ ಉಚಿತ ಪೋರ್ಟಬಲ್ ಬೋನ್ ಮಿನರಲ್ ಡೆನ್ಸಿಟಿ (BMD) ಪರೀಕ್ಷೆ ನಡೆಸಲಾಯಿತು. ಆಸ್ಪತ್ರೆಯ ಮೂಳೆ ತಜ್ಞರಾದ ಡಾ. ರಾಮದಾಸ್ ಶೆಣೈ, ಡಾ. ಆಲ್ಡನ್ ಡಿಸೋಜಾ ಹಾಗೂ ಡಾ. ಶಶಾಂಕ್ ಶೆಟ್ಟಿ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ನಡೆಸಿ, ಸೂಕ್ತ ಸಲಹೆ ಹಾಗೂ ಚಿಕಿತ್ಸಾ ಮಾರ್ಗದರ್ಶನ ನೀಡಿದರು.