-ಕ್ಯಾನ್ಸರ್, ದಂತ, ಇಸಿಜಿ, ಎಕೋ ಹಾಗೂ ನೇತ್ರ ತಪಾಸಣೆಕನ್ನಡಪ್ರಭ ವಾರ್ತೆ ಮಾಗಡಿ

ತಾಲೂಕಿನ ಬೆಳಗುಂಬ ಗ್ರಾಮ ಪಂಚಾಯತಿ ವ್ಯಾಪ್ತಿಯ ಹರ್ತಿ ಗೇಟ್ ಬಳಿ ಮಾ. 29ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪೂಜಾರಿಪಾಳ್ಯ ಕೃಷ್ಣಮೂರ್ತಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಎಸ್.ರಾಮಯ್ಯ ಆಸ್ಪತ್ರೆ, ಮಹಾನಾಡು ಕಟ್ಟೆಮನೆ ಹಾಗೂ ಡಿ.ಕೆ.ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಸಾಮಾನ್ಯ ರೋಗಗಳು, ಸ್ತ್ರೀರೋಗ, ಕ್ಯಾನ್ಸರ್ ತಪಾಸಣೆ, ದಂತ ಚಿಕಿತ್ಸೆ, ಇಸಿಜಿ, ಎಕೋ ಹಾಗೂ ಕಣ್ಣಿನ ತಪಾಸಣೆ ನಡೆಯಲಿದೆ. ಅವಶ್ಯಕತೆ ಇರುವವರಿಗೆ ಸ್ಥಳದಲ್ಲೇ ಕನ್ನಡಕ ವಿತರಣೆ ಹಾಗೂ ಉಚಿತ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು. ಶಿಬಿರಕ್ಕೆ ಬರುವ ಸಾರ್ವಜನಿಕರಿಗೆ ಆಟೋ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಮಹಿಳೆಯರ ಕ್ಯಾನ್ಸರ್ ತಪಾಸಣೆಗೆ ವಿಶೇಷ ಬಸ್ ಬರಲಿದ್ದು, ನುರಿತ ಯಂತ್ರಗಳಿಂದ ಕ್ಯಾನ್ಸರ್ ತಪಾಸಣೆ ನಡೆಯಲಿದೆ. ನಿಮ್ಮ ಮನೆ ಬಾಗಿಲಿಗೆ ಆರೋಗ್ಯ ಸೇವೆ ಕೊಡಲು ಶಾಸಕ ಬಾಲಕೃಷ್ಣ ಬದ್ಧರಾಗಿದ್ದು, ಅಭಿವೃದ್ಧಿ ಜೊತೆಗೆ ಸಾರ್ವಜನಿಕರ ಆರೋಗ್ಯದ ಮೇಲೂ ಕಾಳಜಿ ವಹಿಸುತ್ತಿರುವುದು ನಿಮ್ಮ ಪುಣ್ಯ ಎಂದು ತಿಳಿಸಿದರು.

ಮಾಗಡಿ ಪಟ್ಟಣದಲ್ಲಿ ಸುಮಾರು ₹ 40 ಕೋಟಿ ವೆಚ್ಚದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕ ಬಾಲಕೃಷ್ಣ ಮುಂದಾಗಿದ್ದಾರೆ. ಆದರೆ ಕೆಲವರು ಇದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಿರುವುದು ಬೇಸರದ ಸಂಗತಿ. ರಾಜಕೀಯ ಏನೇ ಇದ್ದರೂ ಕ್ಷೇತ್ರದ ಜನರ ಆರೋಗ್ಯಕ್ಕಾಗಿ ನಡೆಯುತ್ತಿರುವ ಇಂತಹ ಜನಪರ ಕೆಲಸಗಳಿಗೆ ಅಡ್ಡಿಪಡಿಸಬಾರದು ಎಂದು ಹೆಸರು ಹೇಳದೆ ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಕಾಂಗ್ರೆಸ್ ಮುಖಂಡರಾದ ನಾಗರಾಜು, ನರಸಿಂಹಯ್ಯ, ರಾಮಣ್ಣ, ಚಿಕ್ಕಣ್ಣ, ರಾಮಕೃಷ್ಣಪ್ಪ ಇತರರು ಹಾಜರಿದ್ದರು.